ಪಠ್ಯಪುಸ್ತಕ ವಿವಾದ: ನಗೆಪಾಟಲಿಗೆ ಗುರಿಯಾದ ಬಿಜೆಪಿ ಟೂಲ್ಕಿಟ್ ಪೋಸ್ಟ್ !
ಬೆಂಗಳೂರು, ಜೂ. 02: ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಬಿಜೆಪಿಯ ನಾಲ್ವರು ಸಚಿವರು ಒಂದೇ ವಿಷಯವನ್ನು ಹಂಚಿಕೊಂಡು ನಗೆ ಪಾಟಲಿಗೆ ಗುರಿಯಾಗಿದ್ದಾರೆ.
ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಸಮರ್ಥನೆ ಮಾಡಿರುವ ಸಚಿವ ಬಿ.ಶ್ರೀರಾಮುಲು, ಕಂದಾಯ ಸಚಿವ ಆರ್. ಅಶೋಕ್, ಸಚಿವ ಮುರುಗೇಶ್ ನಿರಾಣಿ, ಶಾಸಕ ಎಸ್.ಎ. ರಾಮದಾಸ್ ಅವರು ಒಂದೇ ವಿಷಯವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
"ಪಠ್ಯ ವಿರೋಧಿ ತಂತ್ರದ ಎಲ್ಲಾ ಸಾಧನಗಳನ್ನು ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿ ಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.

ಸರ್ಕಾರ ಇದನ್ನು ಅಂಗೀಕರಿಸಬೇಕು" ಎಂಬ ವಿಷಯವನ್ನು ನಾಲ್ವರು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲ ತಾಣ ಖಾತೆ ಫೇಸ್ ಬುಕ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಸಮಯಕ್ಕೆ ನಾಲ್ವರು ಸಚಿವರು ಒಂದೇ ಒಂದು ಪದ ಬದಲಾವಣೆ ಇಲ್ಲದಂತೆ ಪೋಸ್ಟ್ ಮಾಡಿರುದನ್ನು ಉಲ್ಲೇಖಿಸಿ ಇದೀಗ ಕಾಂಗ್ರೆಸ್ ಮುಖಂಡರು, ಬಿಜೆಪಿ ನಾಯಕರ ಪೋಸ್ಟ್ ಗಳನ್ನು ಉಲ್ಲೇಖಿಸಿ ಬಿಜೆಪಿ ಟೂಲ್ಕಿಟ್ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನೂ ಕೆಲವರು ಬಿಜೆಪಿ ಐಟಿ ಸೆಲ್ ತಲೆಯಲ್ಲಿ ವಿಷಯಗಳೇ ಖಾಲಿಯಾಗಿವೆಯೇ ಎಲ್ಲಾ ಸಚಿವರಿಗೂ ಒಂದೇ ಕಂಟೆಂಟ್ ಪೇಸ್ಟ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮೇಲೆ ಟೂಲ್ ಕಿಟ್ ಅಪವಾದ ಹೊರಿಸಿದ್ದ ಬಿಜೆಪಿ ಇದೀಗ ಕಾಂಗ್ರೆಸ್ಗೆ ಆಹಾರವಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಎಡವಟ್ಟುಗಳನ್ನು ಸಮರ್ಥನೆ ಮಡಿಕೊಳ್ಳುವ ಬರದಲ್ಲಿ ಬಿಜೆಪಿ ನಾಯಕರು ಇದೀಗ ಕಾಂಗ್ರೆಸ್ ಬಾಯಿಗೆ ಆಹಾರವಾಗಿದ್ದಾರೆ.












Click it and Unblock the Notifications