ಬಹುದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿರುವ ಬಿಎಸ್ವೈ ಸರಕಾರ: ಶುಭವಾಗಲಿ
ಪಿಯುಸಿ ಪರೀಕ್ಷೆಯನ್ನು ಬಹುತೇಕ ಸುಸೂತ್ರವಾಗಿ ನಡೆಸಿದ ಹುಮ್ಮಸ್ಸಿನಲ್ಲಿರುವ ಯಡಿಯೂರಪ್ಪ ಸರಕಾರ, ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಹಲವು ಒತ್ತಡಗಳ ನಡುವೆಯೂ ನಡೆಸಲು ಸಕಲ ಪೂರ್ವತಯಾರಿಯನ್ನು ನಡೆಸಿದೆ.
Recommended Video
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸುವುದಕ್ಕೆ ಸರಕಾರಕ್ಕಿರುವ ವ್ಯತ್ಯಾಸವೆಂದರೆ, ಪಿಯುಸಿಯದ್ದು ಕೇವಲ ಒಂದು ಪರೀಕ್ಷೆ ಬಾಕಿಯಿದ್ದದ್ದು. ಎಸ್ಎಸ್ಎಲ್ಸಿ ಪರೀಕ್ಷೆ ಜೂನ್ 25 ರಿಂದ ಜುಲೈ 4ರವರೆಗೆ ನಡೆಯಲಿದೆ.
8,48,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರ ಜೊತೆಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ನೊಡೆಲ್ ಅಧಿಕಾರಿಗಳು, ಕೊಠಡಿ ಮೇಲ್ವಿಚಾರಕರು ಸೇರಿದಂತೆ ವಿವಿಧ ಹದಿನೆಂಟು ಇಲಾಖೆಯ 81,265 ಅಧಿಕಾರಿಗಳು ಈ ಬಹುದೊಡ್ಡ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ" ಎಂದು ರಾಜ್ಯ ಶಿಕ್ಷಣ ಸಚಿವರು ಹೇಳಿದ್ದಾರೆ. ಮಕ್ಕಳ ಭವಿಷ್ಯದ ವಿಚಾರದಲ್ಲಿ ಪರೀಕ್ಷೆ ನಡೆಸುವುದೇ ಸೂಕ್ತ ಎನ್ನುವ ಬಹುದೊಡ್ಡ ರಿಸ್ಕಿನ ನಿರ್ಧಾರಕ್ಕೆ ಸರಕಾರ ಬಂದಿದೆ.

ಎಸ್ಎಸ್ಎಲ್ಸಿ ಪರೀಕ್ಷೆ ಪ್ರಮುಖ ತಳಪಾಯ
ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯದ ವಿಚಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಮುಖ ತಳಪಾಯ. ಕೊರೊನಾ ವೈರಸ್ ನಗಾರಿ ಬಾರಿಸುತ್ತಿರುವ ಈ ಹೊತ್ತಿನಲ್ಲಿ, ಈ ಅತಿದೊಡ್ಡ ಜವಾಬ್ದಾರಿಯನ್ನು ಸರಕಾರಕ್ಕೆ ಕಣ್ಣಲ್ಲಿ ಕಟ್ಟಿಟ್ಟು ಸಮರ್ಥವಾಗಿ ನಿಭಾಯಿಸಬೇಕಿದೆ. ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ ಎನ್ನುವುದನ್ನು ಸರಕಾರ ಮತ್ತು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಅರ್ಥ ಮಾಡಿಕೊಳ್ಲಬೇಕಿದೆ.

ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮುಂತಾದವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ
ಸರಕಾರದ ಜೊತೆಗೆ, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಲಬೇಕಿದೆ. ಸರಕಾರ ಮತ್ತು ಶಿಕ್ಷಣ ಇಲಾಖೆಯ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ನಂತರ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಮುಖವನ್ನು ಪರೀಕ್ಷಾ ಕೇಂದ್ರದಲ್ಲಿ ನೋಡುವಂತ ಪರಿಸ್ಥಿತಿ ಸದ್ಯಕ್ಕಿದೆ. ಆದರೂ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮುಂತಾದವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಎರಡ್ಮೂರು ಗಂಟೆ ಮುಂಚೆನೇ ಹೋಗುವುದು ಸೂಕ್ತ
ಇಂತಹ ಈ ವೈದ್ಯಕೀಯ ಎಮರ್ಜೆನ್ಸಿಯ ವೇಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಾಕಷ್ಟು ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಮೂರು ತಾಸು ಮೊದಲೇ ಬಿಡಲಾಗುತ್ತದೆ. ಥರ್ಮಲ್ ಟೆಸ್ಟಿಂಗ್ ಮುಂತಾದವುಗಳನ್ನು ಅನುಸರಿಸಬೇಕಾಗುತ್ತದೆ. ಕೊನೆಯ ಕ್ಷಣದ ಒತ್ತಡದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷಾ ಕೇಂದ್ರಕ್ಕೆ ಎರಡ್ಮೂರು ಗಂಟೆ ಮುಂಚೆನೇ ಹೋಗುವುದು ಸೂಕ್ತ.

ಸರಕಾರಕ್ಕೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್
ಪರೀಕ್ಷಾ ಕೇಂದ್ರಕ್ಕೆ ಈಗಾಗಲೇ ಸೋಂಕು ನಿವಾರಣಾ ದ್ರಾವಣ ಸಿಂಪಡಿಸುವ ಕೆಲಸ ಸೇರಿದಂತೆ ಸ್ವಚ್ಚತಾ ಕೆಲಸವನ್ನು ಇಲಾಖೆ ಈಗಾಗಲೇ ಮಾಡಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲಿ ಎನ್ನುವುದು ಎಲ್ಲರ ಆಶಯ. ಆದರೂ, ಇದನ್ನು ಸರಿಯಾಗಿ ನಿಭಾಯಿಸದೇ ಇದ್ದಲ್ಲಿ, ಸರಕಾರಕ್ಕೆ ಕೆಟ್ಟ ಹೆಸರು ಬರುವುದು ಖಂಡಿತ. ಎಲ್ಲಾ ಆಯಾಮಗಳನ್ನು ಪರಾಮರ್ಶಿಸಿ ಸರಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ವಿದ್ಯಾರ್ಥಿಗಳು, ಯಾವುದೇ ಟೆನ್ಸನ್ ತೆಗೆದುಕೊಳ್ಲದೇ ಚೆನ್ನಾಗಿ ಬರೆಯಿರಿ. ಎಲ್ಲಾ ಮಕ್ಕಳ ಭವಿಷ್ಯ ಉಜ್ವಲವಾಗಲಿ. ಸರಕಾರಕ್ಕೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.












Click it and Unblock the Notifications