5 ಸಾವಿರ ರೂ. ಪಡೆಯಲು ಆಟೋ ಮತ್ತು ಟ್ಯಾಕ್ಸಿ ಚಾಲಕರ ಗಮನಕ್ಕೆ
ಬೆಂಗಳೂರು, ಮೇ 17 : ಕೋವಿಡ್ - 19 ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಗೊಂಡ ಮೇಲೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕ ಸರ್ಕಾರ ಇವರ ನೆರವಿಗಾಗಿ 5 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಕರ್ನಾಟಕ ಸರ್ಕಾರ ಕೆಲವು ಷರತ್ತುಗಳಿಗೆ ಒಳಪಟ್ಟು ಆಟೋ ಮತ್ತು ಟ್ಯಾಕ್ಸಿ ಚಾಲಕರು 5 ಸಾವಿರ ರೂ. ಪಡೆಯಲು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಚಾಲಕರು ಪರಿಹಾರವನ್ನು ಪಡೆಯಲು ಅರ್ಜಿ ಸಲ್ಲಿಸಲು ಲಿಂಕ್ ಅನ್ನು 3 ದಿನದಲ್ಲಿ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಸೇವಾಸಿಂಧು ಪೋರ್ಟಲ್ನಲ್ಲಿಯೇ ಅರ್ಜಿಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅಗತ್ಯವಾಗ ಸಾಫ್ಟ್ವೇರ್ ಸಿದ್ಧಪಡಿಸಿ ಎರಡು ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪೋರ್ಟಲ್ ಸಿದ್ಧವಾಗುತ್ತಿದ್ದಂತೆ ಚಾಲಕರು ಅರ್ಜಿ ಸಲ್ಲಿಸಬಹುದು.
ಆಟೋ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಲು ಲಿಂಕ್ ಯಾವಾಗ ಸಿಗಲಿದೆ? ಎಂಬ ಮಾಹಿತಿಯನ್ನು ಕೇಳುತ್ತಲೇ ಇದ್ದಾರೆ. ಆದ್ದರಿಂದ, ಸರ್ಕಾರ ಶನಿವಾರ ಈ ಕುರಿತು ಸ್ಪಷ್ಟನೆ ನೀಡಿದೆ. ಮುಂದಿನ ವಾರದಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗುವ ನಿರೀಕ್ಷೆ ಇದೆ.

ಚಾಲಕರಿಗೆ ಷರತ್ತುಗಳು
* ಎಲ್ಲಾ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು.
* 24/3/2020ರಂದು ಚಾಲನಾ ಪರವಾನಗಿ ಪತ್ರ (ಡಿಎಲ್) ಮತ್ತು ಸುಸ್ಥಿತಿ ಪ್ರಮಾಣ ಪತ್ರ (ಫಿಟ್ನೆಸ್ ಪ್ರಮಾಣ ಪತ್ರ) ಹೊಂದಿದ್ದ ವಾಹನಗಳಿಗೆ ಮಾತ್ರ ಅನ್ವಯಿಸತಕ್ಕದ್ದು. 24/3/2020ರಂದು ಚಾಲ್ತಿಯಲ್ಲಿದ್ದ ಚಾಲಕರ ಪರವಾನಗಿ ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳು ಇಲ್ಲದಂತೆ ಖಚಿತಪಡಿಸಿಕೊಳ್ಳಬೇಕು.

ಆಟೋ, ಟ್ಯಾಕ್ಸಿ ಚಾಲಕರು
* ಆಧಾರ್ ಕಾರ್ಡ್/ಚಾಲನಾ ಪರವಾನಗಿ/ವಾಹನ ನೋಂದಣ ಸಂಖ್ಯೆ ಎಲ್ಲಾ ಫಲಾನುಭವಿಗಳಿಗೆ ಅನನ್ಯವಾಗಿರುವುದು ಕಡ್ಡಾಯವಾಗಿರತಕ್ಕದ್ದು.
* ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಅನ್ವಯವಾಗತಕ್ಕದ್ದು. ಮ್ಯಾಕ್ಸಿ ಕ್ಯಾಬ್ಗಳಿಗೆ ಅನ್ವಯ ಆಗುವುದಿಲ್ಲ.

ಡಿಬಿಟಿ ಮೂಲಕವೇ ಸಂದಾಯ
* ಪರಿಹಾರ ಧನವು ಕೇವಲ ಅನುಜ್ಞಾ ಪತ್ರವನ್ನು ಹೊಂದಿರುವ ಹಾಗೂ ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರವೇ ಸಂದಾಯವಾಗಬೇಕು.
* ಒಂದು ವೇಳೆ ಆಟೋ/ಟ್ಯಾಕ್ಸಿ ಮಾಲಿಕರಿಗೆ ಸಂದಾಯವಾದಲ್ಲಿ ಕೆಲವೊಂದು ಮಾಲೀಕರು ಹೆಚ್ಚಿನ ಸಂಖ್ಯೆಯ ಆಟೋ/ಟ್ಯಾಕ್ಸಿಗಳನ್ನು ಹೊಂದಿದ್ದು ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ಹಹಣೆಯನ್ನು ಎದಿರಿಸುತ್ತಿರುವ ಚಾಲಕರಿಗೆ ಸಿಗದಂತಾಗುತ್ತದೆ. ಆದ್ದರಿಂದ ಚಾಲಕರ ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ ವರ್ಗಾಯಿಸಬೇಕು.

ಯಾವುದೇ ಮಧ್ಯಂತರ ಸಂಪರ್ಕ ಇರಬಾರದು
* ಈ ಹಂತದಲ್ಲಿ ಸರ್ಕಾರ ಮತ್ತು ಫಲಾನುಭವಿಗಳ ನೇರ ಸಂಪರ್ಕವಿರತಕ್ಕದ್ದು. ಯಾವುದೇ ಮಧ್ಯಂತರ ಸಂಪರ್ಕ ಇರಬಾರದು.
* ಕೆಲವೊಂದು ಫಲಾನುಭವಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಅವರುಗಳಿಗೆ ಪರಿಹಾರ ನೀಡುವ ಅಗತ್ಯತೆ ಬಗ್ಗೆ ಗಮನಹರಿಸಿ, ಅರ್ಹ ಫಲಾನುಭವಿಗಳಿಂದ ಲಾಕ್ ಡೌನ್ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿಲ್ಲದಿರುವ ಬಗ್ಗೆ ಸ್ವಯಂ ದೃಢೀಕರಣ ಪಡೆದು ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು.












Click it and Unblock the Notifications