ಬದಲಾದ PUC ಮರುಮೌಲ್ಯಮಾಪನ ಮಾನದಂಡ: ಒಂದು ಅಂಕ ಹೆಚ್ಚು ಪಡೆದರೂ ವಿದ್ಯಾರ್ಥಿ ಅರ್ಹ- ಏನಿದು ಬದಲಾವಣೆ? ತಿಳಿಯಿರಿ
ಈಗ, ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಒಂದು ಅಂಕ ಹೆಚ್ಚು ಪಡೆದರೂ ಮರುಮೌಲ್ಯಮಾಪನಕ್ಕೆ ಅರ್ಹರಾಗುತ್ತಾರೆ. ಏನಿದು ಬದಲಾವಣೆ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 10: ರಾಜ್ಯ ಸರ್ಕಾರವು ಪದವಿ ಪೂರ್ವ ಕಾಲೇಜು (ಪಿಯುಸಿ) ಪರೀಕ್ಷಾ ಪತ್ರಿಕೆಗಳ ಮರುಮೌಲ್ಯಮಾಪನದ ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈಗ, ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಒಂದು ಅಂಕ ಹೆಚ್ಚು ಪಡೆದರೂ ಮರುಮೌಲ್ಯಮಾಪನಕ್ಕೆ ಅರ್ಹರಾಗುತ್ತಾರೆ. ಈ ವಿಚಾರವನ್ನು ಕರ್ನಾಟಕ ಶಾಲಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗುರುವಾರ ತಿಳಿಸಿದ್ದಾರೆ. ಈ ಹಿಂದೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗೆ, ಮರುಮೌಲ್ಯಮಾಪನದ ಸಂದರ್ಭದಲ್ಲಿ ಒಟ್ಟು ಅಂಕಗಳ ಪೈಕಿ ಶೇ 6 ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಬಂದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು.
ರಾಜ್ಯ ಸರ್ಕಾರವು ತನ್ನ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಬದಲಾವಣೆಯನ್ನು ತರಲು ಚಿಂತನೆ ನಡೆಸಿದೆ. ವ್ಯತ್ಯಾಸವು ಒಂದೇ ಅಂಕವಾಗಿದ್ದರೂ ಸಹ ಮರುಮೌಲ್ಯಮಾಪನಕ್ಕೆ ಅನುಮತಿ ನೀಡಲಾಗುತ್ತದೆ. ಮಾರ್ಚ್ 2023 ರಿಂದ ಪ್ರಾರಂಭವಾಗಲಿರುವ ವಾರ್ಷಿಕ ಪರೀಕ್ಷೆಯಿಂದ ಹೊಸ ನಿಯಮವು ಅನ್ವಯಿಸುತ್ತದೆ. ಪಿಯುಸಿ ಪರೀಕ್ಷೆಯು ಮಾರ್ಚ್ 10 ಮತ್ತು ಮಾರ್ಚ್ 29 ರ ನಡುವೆ ನಡೆಯಲಿದೆ.
'ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಪ್ರತಿಯೊಂದು ಅಂಕವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ಅಂಕವನ್ನೂ ಪರಿಗಣಿಸುವ 'ವಿದ್ಯಾರ್ಥಿ ಸ್ನೇಹಿ' ಹೆಜ್ಜೆ ಇಟ್ಟಿದೆ ಎಂದು ನಾಗೇಶ್ ಹೇಳಿದರು. 'ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಸಾರ್ವಜನಿಕ ಪರೀಕ್ಷಾ ನಿಯಮಗಳು-1997'ಗೆ ತಿದ್ದುಪಡಿ ತರಲು ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಕುರಿತು ನಾಗೇಶ್ ಟ್ವೀಟ್
ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ 'ಒಂದು ಅಂಕ' ಹೆಚ್ಚು ಬಂದರೂ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2023ರ ಮಾರ್ಚ್ನಲ್ಲಿ ನಡೆಯುವ 'ವಾರ್ಷಿಕ ಪರೀಕ್ಷೆ'ಯಿಂದ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಬಿ ಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.

ಹಾಲಿ ಇರುವ ನಿಯಮದ ಪ್ರಕಾರ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಪತ್ರಿಕೆಯ ಒಟ್ಟು ಅಂಕದ ಶೇ.6ರಷ್ಟು ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬಂದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಶೇ.6ಕ್ಕಿಂತ ಕಡಿಮೆ ಅಂಕಗಳು ಬಂದಲ್ಲಿ ಪರಿಗಣಿಸುತ್ತಿರಲಿಲ್ಲ ಎಂದು ಟ್ವೀಟಿಸಿದ್ದಾರೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಅಂಕವು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ 'ಒಂದು ಅಂಕ'ವನ್ನೂ ಪರಿಗಣಿಸುವ 'ವಿದ್ಯಾರ್ಥಿ ಸ್ನೇಹಿ' ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈ ಸಂಬಂಧ ಶೀಘ್ರದಲ್ಲೇ 'ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು-1997'ಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಬಿ ಸಿ ನಾಗೇಶ್ ತಿಳಿಸಿದ್ದಾರೆ.












Click it and Unblock the Notifications