Karnataka Rain: ಉತ್ತರ ಒಳನಾಡಿಗೆ ವರುಣನ ಶಾಕ್, ಕರಾವಳಿಗೆ 5 ದಿನ ಹಳದಿ ಎಚ್ಚರಿಕೆ
ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಕ್ಷೀಣವಾಗಿದ್ದ ಮುಂಗಾರು ಮಳೆಯ ಚುರಕುಗೊಂಡಿದ್ದು, ಅದು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಜೂನ್ 27ರವರೆಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಲಿದೆ. ಈ ಮೂಲಕ ಉತ್ತರ ಒಳನಾಡಿಗೆ ಜಿಲ್ಲೆಗಳಿಗೆ ಮಳೆ ಶಾಕ್ ನೀಡಿದೆ.
ಕೆಲವು ತಿಂಗಳುಗಳಿಂದ ಒಣಹವೇ, ಬರಗಾಲದ ಸ್ಥಿತಿ ಎದುರಿಸಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಎರಡು ದಿನ ಭಾರಿ ಮಳೆಯಾಗಲಿದೆ. ಇದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಬುಧವಾರದ ಮುನ್ಸೂಚನೆ ತಿಳಿಸಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಉತ್ತರ ಒಳನಾಡಿಗೆ ಅಷ್ಟಾಗಿ ಮಳೆ ಬರುವ ನಿರೀಕ್ಷೆಗಳು ಕಾಣುತ್ತಿಲ್ಲ ಎನ್ನಲಾಗಿದೆ.

ಮುಂದಿನ ಐದು ದಿನ (ಜೂನ್ 27ರವರೆಗೆ) ಕರ್ನಾಟಕ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆ ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ. ಈ ಸಂಬಂಧ ನಾಳೆಯಿಂದ ಐದು ದಿನ ಈ ಜಿಲ್ಲೆಗಳು ಹಳದಿ ಎಚ್ಚರಿಕೆ ಪಡೆದುಕೊಂಡಿವೆ.
ಇನ್ನು ರಾಜ್ಯದ ದಕ್ಷಿಣ ಕರ್ನಾಟಕ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರವೇ ನಾಳೆ ಜೂನ್ 23 ಒಂದು ದಿನ ಮಳೆ ಅಬ್ಬರಿಸಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಒಳನಾಡಿಗೆ ಬಾರದ ವರುಣ
ಇನ್ನುಳಿದ ನಾಲ್ಕು ದಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮಂಡ್ಯ, ಮೈಸೂರು, ಹಾಸನ, ಕೋಲಾರ, ವಿಜಯಪುರ, ಚಿಕ್ಕಬಳ್ಳಾಪುರ, ರಾಮನಗರ, ಸೇರಿದಂತೆ ವಿವಿಧ ಜಿಲ್ಲೆಗಳ ಹಲವೆಡೆ ಸಾಧಾರಣವಾಗಿ ಮಳೆ ಬೀಳಲಿದೆ.

ಈ ಐದು ದಿನಗಳಲ್ಲಿ ಉತ್ತರ ಒಳನಾಡಿನ ಮೂರು ಜಿಲ್ಲೆಗಳಿಗೆ ಭಾರೀ ಮಳೆ ಬರಲಿದೆ. ಉಳಿದಂತೆ ತುಂತುರು ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ. ಬೀದರ್ಗೆ ಎರಡು ದಿನ ಮತ್ತು ಕಲಬುರಗಿಗೆ ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಕರ್ನಾಟಕಕ್ಕೆ ಅತ್ಯಧಿಕ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಐಎಂಡಿ ಬುಧವಾರ ಮುನ್ಸೂಚನೆ ಮಂದಹಾಸ ಮೂಡಿಸಿತ್ತು. ಆದರೆ ಈಗ ಹವಾಮಾನ ಬದಲಾವಣೆಯಿಂದಾಗಿ ಮತ್ತೆ ಒಣಹವೆ ಭೀತಿ ಶುರುವಾಗಿದೆ. ನಾಳೆಯಿಂದ ನಾಲ್ಕು ದಿನ ಚದುರಿದಂತೆ ತುಂತುರು ಮಳೆ ಆಗಬಹುದು. ಇದರ ಹೊರತಾಗಿ ಗಂಭೀರ ಸ್ವರೂಪ ಮಳೆ ಲಕ್ಷಣಗಳು ಇಲ್ಲ ಎನ್ನಲಾಗಿದೆ. ಈ ಮೂಲಕ ಒಳನಾಡಿಗೆ ಮುಂಗಾರು ಮಾರುತಗಳ ಆಗಮನ ಯಾವಾಗ ಎಂದು ಮತ್ತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲು
ಕಳೆದ 24 ಗಂಟೆಗಳಲ್ಲಿ ತುಮಕೂರಿನಲ್ಲಿ ಜೋರು ಮಳೆ ಬಿದ್ದಿದೆ. ಉಳಿದಂತೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಕೊಡಗು, ತುಮಕೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳ ಹಲವೆಡೆ ಉತ್ತಮ ಮಳೆ ಆಗಿದೆ. ಈ ವೇಳೆ ರಾಜ್ಯದ ಗರಿಷ್ಠ ತಾಪಮಾನ ರಾಯಚೂರು ಮತ್ತು ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲೂ ಮುಂದಿನ ಮೂರು ದಿನ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಕೆಲವೆಡೆ ತಂತುರು ಮಳೆಯ ದರ್ಶನವಾಗಲಿದೆ. ಇದರ ಹೊರತು ನಗರದಲ್ಲಿಯೂ ಭಾರಿ ಮಳೆಯ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications