Karnataka Rain-Flood: ರಾತ್ರಿಯಿಡಿ ಭರ್ಜರಿ ಮಳೆ, ಹಾವೇರಿ ಬಾಲಕ ಸೇರಿ 3 ಸಾವು, ಬೆಳೆ ಹಾನಿ
ಬೆಂಗಳೂರು, ಅಕ್ಟೋಬರ್ 18: ಕರ್ನಾಟಕದಲ್ಲಿ ಹಿಂಗಾರು ಮಳೆಯ ರಣಾರ್ಭಟಕ್ಕೆ ಉತ್ತರ ಒಳನಾಡು ಹಾಗೂ ಮಧ್ಯ ಕರ್ನಾಟಕದ ವಿವಿಧ ಜಿಲ್ಲೆಗಳು ನಲುಗಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಿಂಗಾರು ಮಳೆ ದಾಖಲಾಗಿದೆ. ವಿವಿಧೆ ಭಾರಿ ಮಳೆ ಮುಂದುವರಿದಿದೆ. ಭಾರೀ ಮಳೆಗೆ ಒಳನಾಡು ಜಿಲ್ಲೆಗಳಲ್ಲಿ ಬೆಳೆಗಳಿಗೆ ಹಾನಿ ಆಗಿದೆ. ಮತ್ತೊಂದು ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ. ಬಾಲಕನೊಬ್ಬ ಉಕ್ಕಿ ಹರಿಯುತ್ತಿದ್ದ ಒಳಚರಂಡಿ ನೀರಿನೊಂದಿಗೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ವರದಿ ಆಗಿದೆ.
ಹಿಂಗಾರು ಮಳೆ ಗುರುವಾರ ಎಡೆಬಿಡದೆ ಮಳೆ ಸುರಿದಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸುತ್ತಮುತ್ತಲಿನ ತಾಲೂಕುಗಳು, ಹಳ್ಳಿಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ನೆನ್ನೆ ರಾತ್ರಿಯಿಡಿ ಭರ್ಜರಿ ಮಳೆ ಸುರಿದಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ವ್ಯಾಪಕ ಹಾನಿ ಉಂಟಾಗಿದ್ದು, ರಸ್ತೆ ಮತ್ತು ವಿದ್ಯುತ್ ಮೂಲಸೌಕರ್ಯಗಳಿಗೆ ಅಡಚಣೆ ಉಂಟಾಗಿದೆ.

ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ಮತ್ತೊಂದೆಡೆ ಬೆಳೆ ಹಾನಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಹಿಂಗಾರು ಬಿತ್ತನೆ ಗೆ ಸಜ್ಜಾಗಿ ರೈತರಿಗೆ ಮಳೆ ಬ್ರೇಕ್ ನೀಡಿದೆ. ಅಕ್ಟೋಬರ್ ಹೊತ್ತಿಗೆ ಮುಂಗಾರು ಹಂಗಾಮಿನ ಬೆಳೆ ಕೊಯ್ಲು ಮುಗಿಸಿಕೊಂಡು ಬಿತ್ತನೆಗೆ ಸಜ್ಜಾಗುತ್ತಿದ್ದರು. ಆದರೆ ಈ ಬಾರಿ ಮಳೆಯಿಂದಾಗಿ ಹಿಂಗಾರು ರಾಬಿ ಬಿತ್ತನೆ ತಡವಾಗುವ ನಿರೀಕ್ಷೆ ಇದೆ.
ಬಾಲಕ ಸೇರಿ ಮೂವರು ಸಾವು
ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಹೆಬ್ಬಾಗಿಲು ಜಿಲ್ಲೆಯಾದ ಹಾವೇರಿ ಪಟ್ಟಣದಲ್ಲಿ ಜೋರು ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿವೆ. ರಸ್ತೆ ಮೇಲೆ ಗಂಟೆ ಗಟ್ಟಲೇ ಮಳೆ ನೀರು, ಒಳಚರಂಡಿ ನೀರು ಉಕ್ಕಿ ಹರಿದಿದೆ. ಸಂಚಾರ ತೊಂದರೆ ಆಗಿದೆ. ಈ ಮಧ್ಯೆ ಚರಂಡಿಗೆ ಬಿದ್ದ 9ವರ್ಷದ ಬಾಲಕ ಕೊಚ್ಚಿಹೋಗಿದ್ದು, ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನೂ ಕೋಟೆನಾಡು ಚಿತ್ರದುರ್ಗದಲ್ಲಿ ಮನೆಯ ಗೋಡೆ ಕುಸಿದು 70 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ದೊಡ್ಡ ಜಿಲ್ಲೆ ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ದಂಪತಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಒಬ್ಬರ ಶವಮಾತ್ರ ಪತ್ತೆಯಾಗಿದೆ. ಇನ್ನಿಬ್ಬರ ಶವ ಇನ್ನೂವರೆಗೂ ಪತ್ತೆಯಾಗಿಲ್ಲ.
ನದಿಗಳು ಮಾತ್ರವಲ್ಲದೇ, ಈ ಮಳೆಗೆ ಕೆರೆಗಳು ತುಂಬಿ ಹರಿಯುವ ಆತಂಕದಲ್ಲಿ ಅಕ್ಕಪಕ್ಕದ ಜನರಿದ್ದಾರೆ. ಬೆಂಗಳೂರಿನಲ್ಲಿ ಜನರು ಜೀವ ಕೈಲಿ ಹಿಡಿದು ಬದುಕು ಸಾಗಿಸುತ್ತಿದ್ದಾರೆ. ಹಾವೇರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದ ಮೆಕ್ಕೆ ಜೋಳ, ಈರುಳ್ಳಿ ಬೆಳೆಗಳು ಹಾನಿ ಗಾಳಿ ಸಹಿತ ಸುರಿಯುವ ಮಳೆಗೆ ಹಾನಿಗೀಡಾಗಿವೆ. ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲೂ ಇದೇ ಕತೆಯಾಗಿದೆ.
ಕೆಲವು ಕಡೆಗಳಲ್ಲಿ ಗುರುವಾರವೇ ಮಳೆ ವಿರಾಮ ಪಡೆದಿದೆ. ಹಾವೇರಿ, ಧಾರವಾಡ, ಗದಗ, ಬೆಳಗಾವಿ, ಕೊಡಗು, ಹಾಸನದಲ್ಲಿ ಶುಕ್ರವಾರ ಮಳೆ ವಿರಾಮ ಪಡೆದಿದೆ. ಸದ್ಯ ಮುಂದಿನ ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆ ಭರ್ಜರಿ ಮಳೆ ಆಗಲಿದೆ ಎಂಬ ಮುನ್ಸೂಚನೆ ಇದೆ.
06 ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದು ಶುಕ್ರವಾರ ಕೋಲಾರ, ತುಮಕೂರು, ಬಳ್ಳಾರಿ, ವಿಜಯನಗರ, ದಾವಣಗೆರೆ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಸೇರಿ ಒಟ್ಟು 06 ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಶುಕ್ರವಾರ ಹಳದಿ ಅಲರ್ಟ್ ಘೋಷಿಸಿದೆ.












Click it and Unblock the Notifications