Karnataka Weather: ಜೂನ್ 3ರ ವರೆಗಿನ ರಾಜ್ಯ ಹವಾಮಾನ ವರದಿ, 12 ಜಿಲ್ಲೆಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಮೇ 30: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು ಮುಂದಿನ ನಾಲ್ಕು ದಿನ ಪೈಕಿ ಎರಡು ದಿನ ವೇಗದ ಗಾಳಿ ಸಹಿತ ವ್ಯಾಪಕ ಮಳೆ ದಾಖಲಾತಿಗೆ ಸಾಕ್ಷಿಯಾಗಲಿವೆ. ಈ ಸಂಬಂಧ 12 ಜಿಲ್ಲೆಗಳಿಗೆ ಅತ್ಯಧಿಕ ಮಳೆ ಪ್ರಯುಕ್ತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಜೂನ್ 3ರವರೆಗೆ ಒಟ್ಟು ನಾಲ್ಕು ದಿನ ರಾಜ್ಯಕ್ಕೆ ಮಳೆ ಮುನ್ಸೂಚನೆ ಇದೆ. ಈ ಪೈಕಿ ಮುಂದಿನ ಎರಡು ದಿನ ಮಾತ್ರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಇದೇ ವೇಳೆ ಗಾಳಿಯ ವೇಗ ಸಾಮಾನ್ಯಕ್ಕಿಂತ ದುಪ್ಪಟ್ಟಿರಲಿದೆ.

ಈ ಕಾರಣದಿಂದ ಮುಂದಿನ ಎರಡು ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಭಾರೀ ಮಳೆ ಸಂಭವ ಇದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.
ಭೂಮೇಲ್ಮೈ ಸುಳಿಗಾಳಿ, ಸಮುದ್ರಮಟ್ಟದಲ್ಲಿನ ವೈಪರಿತ್ಯಗಳ ಪರಿಣಾಮದಿಂದಾಗಿ ಹಲವು ದಿನಗಳಿಂದ ರಾಜ್ಯದ ಒಂದಲ್ಲಾ ಒಂದು ಕಡೆಗಳಲ್ಲಿ ಮಳೆ ಅಬ್ಬರ ಕಂಡು ಬರುತ್ತಲೇ ಇದೆ. ಒಳನಾಡಿನ ಕೆಲವು ಜಿಲ್ಲೆಗಳು ಮತ್ತು ಮಲೆನಾಡಿನ ಹಲವು ಜಿಲ್ಲೆಗಳಿಗೆ ಮಳೆ ಅಬ್ಬರಿಸಿದೆ.
ಸಿಡಿಲಿಗೆ ಕೆಲವು ಜೀವಗಳು ಬಲಿಯಾದರೆ, ಇನ್ನೂ ಹಲವೆಡೆ ಜನ ಜೀವನ ಅಸ್ತವೆಸ್ತವಾಗಿದೆ. ನಗರ, ಪಟ್ಟಣಗಳಲ್ಲಿ ತಗ್ಗು ಪ್ರದೇಶಗಳ ಜನರು ಮಳೆ ನೀರು ತುಂಬಿದ ಮನೆಗಳಲ್ಲಿ ಇರಲಾರದೆ, ಹೊರಗೂ ಬರಲಾರದೇ ಕಂಗಾಲಾದ ಘಟನೆಗಳು ಜರುಗಲಿವೆ.

ಇತರೆ ಜಿಲ್ಲೆಗಳಲ್ಲಿ ಮಳೆ ಹೇಗಿರಲಿದೆ?
ಮಳೆ ಹೀಗೆ ಮುಂದುವರಿಯುವ ಲಕ್ಷಣಗಳು ಘೋಚರಿಸಿವೆ. ಯೆಲ್ಲೋ ಅಲರ್ಟ್ ಪಡೆದ ಜಿಲ್ಲೆಗಳ ಹೊರತಾಗಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಇತ್ತು ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಶಿವಮೊಗ್ಗ, ಮಡಿಕೇರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಗಳಲ್ಲಿ ವಿವಿಧೆಡೆ ಮೂರು ದಿನ ಧಾರಾಕಾರ ಮಳೆ ಸಂಭವವಿದೆ.
ನಂತರ ಒಂದು ದಿನ ಇದೇ ಜಿಲ್ಲೆಗಳಲ್ಲಿ ಹಗುರ ಮಳೆ ಬೀಳಲಿದೆ. ಇನ್ನೂ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಒಂದೆರಡು ದಿನ ಮಾತ್ರ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಇದರ ಹೊರತಾಗಿ ಯಾವುದೇ ಗಂಭೀರ ಸಮಸ್ಯೆಗಳು ಇಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರಿಗೂ ಜೋರು ಮಳೆ, ತಾಪಮಾನ ಎಷ್ಟಿರಲಿದೆ?
ಬೆಂಗಳೂರಿನಲ್ಲಿ ಇಂದಿನಿಂದ ಮೂರರಿಂದ ನಾಲ್ಕು ದಿನ ಜೋರು ಮಳೆ ಬರಲಿದೆ. ಈ ಪೈಕಿ ಜೂನ್ 1ರಂದು ಅಧಿಕ ಮಳೆ ಬರುವ ನಿರೀಕ್ಷೆ ಇದೆ. ಉಳಿದ ದಿನಗಳಲ್ಲಿ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಸಾಧ್ಯತೆ ಇದೆ. ಇನ್ನು ಹಲವು ಕಡೆಗಳಲ್ಲಿ ಹಗುರ ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಗರಿಷ್ಠ ತಾಪಮಾನ 31-33 ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಅಂದಾಜಿಸಲಾಗಿದೆ.












Click it and Unblock the Notifications