Karnataka Rain Forecast: ಈ ವಾರಪೂರ್ತಿ ಭರ್ಜರಿ ಮಳೆ, 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಏಪ್ರಿಲ್ 26: ಮುಂಗಾರು ಆರಂಭಕ್ಕೆ ಇನ್ನೂ ಐದು ವಾರಗಳು ಬಾಕಿ ಇದೆ. ಅಷ್ಟರಲ್ಲಾಗಲೇ ಬದಲಾಗುತ್ತಿರುವ ಹವಾಮಾನ ವೈಪರಿತ್ಯ ಪರಿಣಾಮವಾಗಿ ಕರ್ನಾಟಕದಲ್ಲಿ ಈ ವಾರಪೂರ್ತಿ ಧಾರಾಕಾರವಾಗಿ ಮಳೆ ಬರಲಿದೆ. ಹೀಗಾಗಿ ಮುಂದಿನ ಐದು ದಿನಗಳಲ್ಲಿ ಬೇರೆ ಬೇರೆ ದಿವಸ ಒಟ್ಟು 23 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಣೆ ಮಾಡಲಾಗಿದೆ.
ತಮಿಳುನಾಡಿನ ಕರಾವಳಿ ಭಾಗದಲ್ಲಿ ಸೈಕ್ಲೋನ್ ಆಗಿ ಪರಿವರ್ತನೆ ಆಗಬಹುದಾದ ವಾತಾವರಣ ನಿರ್ಮಾಣವಾಗಿದೆ. ಇತ್ತ ಕರ್ನಾಟಕ ಕರಾವಳಿಯ ಸಮುದ್ರ ಮೇಲ್ಮೈನಲ್ಲಿನ ಸೃಷ್ಟಿಯಾಗಿದ್ದ 1.5 ಕಿಲೋ ಮೀಟರ್ ಎತ್ತರದ ಸ್ಟ್ರಫ್ ಉತ್ತರ ಒಳನಾಡು ಮಾರ್ಗವಾಗಿ ದಕ್ಷಿಣ ಒಳನಾಡಿನತ್ತ ಹಾದು ಹೋಗಿದೆ. ಇದರ ಪ್ರಭಾವದಿಂದ ನಾಳೆ ಏಪ್ರಿಲ್ 27ರಿಂದ 05 ದಿನ ಜೋರು ಮಳೆ ನಿರೀಕ್ಷೆ ಇದೆ.

ಮುಂದಿನ ಮೂರು ದಿನ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗಲಿದೆ. ಇದೇ ವೇಳೆ ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಇಲ್ಲಿ ಗುಡುಗು ಸಹಿತ ಭಾರೀ ಮಳೆ ಸಂಭವವಿದೆ. ಉಳಿದ ಜಿಲ್ಲೆಗಳಲ್ಲಿ ಐದು ದಿನವು ಸಾಧಾರಣದಿಂದ ಉತ್ತಮ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಎರಡು ದಿನ ಯೆಲ್ಲೋ ಅಲರ್ಟ್
ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಉತ್ತಮವಾಗಿ ಮಳೆ ಆದರೆ, ನಂತರ ಎರಡು ದಿನ ಅಂದರೆ ಏಪ್ರಲ್ 30 ಮತ್ತು 31 ರಂದು ತುಮಕೂರು, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ ಜಿಲ್ಲೆಗಳಲ್ಲಿ ಜೋರು ಮಳೆ ಬರಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೂ ಎರಡು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿ ಡಾ.ಪ್ರಸಾದ್ ಮಾಹಿತಿ ನೀಡಿದರು.
ಮಂಗಳವಾರದಿಂದ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಇಳಿಕೆ ಆಗಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ ಕೊಡಗು, ವಿರಾಜಪೇಡೆ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗದ ಹಲವೆಡೆ ಹಾಗೂ ಕರಾವಳಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ.

ಬೆಂಗಳೂರಿಗೂ ಭಾರಿ ಮಳೆ ಭೀತಿ
ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನ ಜೋರು ಮಳೆ ಬರುವ ಸಾಧ್ಯತೆ ಇದೆ. ಸಂಜೆ ನಂತರ ಇಲ್ಲವೆ ರಾತ್ರಿ ಮಳೆ ಬರಲಿದ್ದು, ಮಧ್ಯಾಹ್ನದಿಂದಲೇ ಮೋದ ಕವಿದ ವಾತಾವರಣ ಕಂಡು ಬರಲಿದೆ. ಈ ಸಂಬಂಧ ಕಳೆದ ವರ್ಷ ನೆರೆಹಾನಿಗೆ ತುತ್ತಾಗಿದ್ದ ಪ್ರದೇಶಗಳ ಜನರಲ್ಲಿ ಭೀತಿ ಶುರುವಾಗಿದೆ. ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications