ಕಾಂಗ್ರೆಸ್ ಶಾಸಕಾಂಗ ಸಭೆಗೆ 3 ರಿಂದ 6 ಮಂದಿ ಗೈರು ಸಾಧ್ಯತೆ?
Recommended Video

ಬೆಂಗಳೂರು, ಜನವರಿ 18: ಬಿಜೆಪಿಯ ಮಹತ್ವಾಕಾಂಕ್ಷಿಯ ಆಪರೇಷನ್ ಕಮಲ ಮತ್ತೊಮ್ಮೆ ವಿಫಲವಾಗಿದೆ. ರೆಸಾರ್ಟ್ ಗಳಲ್ಲಿದ್ದ ಶಾಸಕರು ಬೆಂಗಳೂರಿಗೆ ಮರಳುತ್ತಿದ್ದಾರೆ. ಇತ್ತ ಶುಕ್ರವಾರ(ಜನವರಿ 18) ಮಧ್ಯಾಹ್ನ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಯಾರು ಗೈರು ಹಾಜರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗದ ಶಾಸಕರ ವಿರುದ್ಧ ಪ್ರಬಲ ಅಸ್ತ್ರವನ್ನು ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರು ಪ್ರಯೋಗಿಸಿದ್ದಾರೆ.
ಸಭೆಗೆ ಚಕ್ಕರ್ ಹಾಕುವ ಶಾಸಕರು ಕಠಿಣ ಕ್ರಮ ಎದುರಿಸಬೇಕಾಗಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಿದೆ. ಆದರೂ, ಮೂರರಿಂದ ಹಾಗೂ ಆರು ಮಂದಿ ಶಾಸಕರು ಕಾರಣಾಂತರದಿಂದ ಸಭೆಗೆ ಗೈರು ಹಾಜರಾಗುವ ಸಾಧ್ಯತೆಯಿದೆ. ಆದರೆ, ಸಿದ್ದರಾಮಯ್ಯ ಅವರ ಎಚ್ಚರಿಕೆ, ಕಠಿಣ ಕ್ರಮದ ವಿರುದ್ಧ ನಿಲ್ಲಲು ಸಾಧ್ಯವಿಲ್ಲವೇ? ಕಾನೂನು ಏನು ಹೇಳುತ್ತದೆ ಮುಂದೆ ಓದಿ..
224 ಶಾಸಕರನ್ನುಳ್ಳ ವಿಧಾನಸಭೆಯಲ್ಲಿ ಬಿಜೆಪಿ 104, ಜೆಡಿಎಸ್ 37, ಕಾಂಗ್ರೆಸ್ 79, ಒಬ್ಬರು ಸ್ಪೀಕರ್ ಅಲ್ಲದೆ, ಕೆಪಿಜೆಪಿ, ಬಿಎಸ್ ಪಿ ಹಾಗೂ ಒಬ್ಬರು ಪಕ್ಷೇತರ ಶಾಸಕರಿದ್ದಾರೆ.

ಯಾರು ಯಾರು ಗೈರು ಹಾಜರಾಗಬಹುದು?
ಬಿಜೆಪಿ ಸರಿ ಸುಮಾರು 12-14 ಶಾಸಕರನ್ನು ಸೆಳೆಯುವ ಗುರಿಯನ್ನು ಹೊಂದಿತ್ತು. ಆದರೆ, ರಾಣೇಬೆನ್ನೂರಿನ ಶಾಸಕ ಶಂಕರ್ ಹಾಗೂ ಮುಳುಬಾಗಿಲಿನ ಶಾಸಕ ಸುರೇಶ್ ಮಾತ್ರ ಸರ್ಕಾರಕ್ಕೆ ತಾವು ನೀಡಿದ ಬೆಂಬಲ ವಾಪಸ್ ಪಡೆದಿರುವುದಾಗಿ ಘೋಷಿಸಿದ್ದು, ಬಿಟ್ಟರೆ, ಮಿಕ್ಕಂತೆ ಅಪರೇಷನ್ ಕಮಲ ವಿಫಲ ಎಂದೇ ಭಾವಿಸಲಾಗಿದೆ.
ಆದರೆ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ಬಿಸಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್ ಅವರು ಗೈರು ಹಾಜರಾಗಬಹುದು.

ಪ್ರತ್ಯಕ್ಷವಾದ ಶಿವರಾಮ್ ಹೆಬ್ಬಾರ್, ಜೆಎನ್ ಗಣೇಶ್
ಈ ನಡುವೆ ಶಿವರಾಮ್ ಹೆಬ್ಬಾರ್ ಅವರು ಶಾಸಕಾಂಗ ಸಭೆಗೆ ಹಾಜರಾಗುತ್ತಿದ್ದು, ಕುಟುಂಬದ ಜೊತೆಗೆ ಅಂಡಮಾನ್ ದ್ವೀಪಕ್ಕೆ ಪ್ರವಾಸಕ್ಕೆ ಹೋಗಿದ್ದರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ ಎಂದಿದ್ದಾರೆ. ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರು ಚಿಕ್ಕಮಗಳೂರು ಜಿಲ್ಲೆ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿರುವುದಾಗಿ ಹೇಳಿದ್ದಾರೆ. ಇವರಿಬ್ಬರನ್ನು ಸೆಳೆಯಲು ಬಿಜೆಪಿ ಯತ್ನಿಸಿತ್ತು ಎನ್ನಲಾಗಿದೆ. ಆದರೆ, ಕಾಂಗ್ರೆಸ್ ತೊರೆಯುದಿಲ್ಲ ಎಂದು ಇಬ್ಬರು ಸ್ಪಷ್ಟಪಡಿಸಿದ್ದಾರೆ.

ಬಿ ನಾಗೇಂದ್ರ ಹಾಜರಾತಿ ಬಗ್ಗೆ ಅನುಮಾನ
ಈ ನಡುವೆ ಬಳ್ಳಾರಿ ಶಾಸಕ ಬಿ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರು ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆಗಾಗಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಹಾಜರಾಗುತ್ತಿದ್ದು, ಸಿಎಲ್ ಪಿ ಸಭೆಗೆ ಗೈರು ಹಾಜರಾಗುವ ಸಾಧ್ಯತೆಯಿದೆ. ಗುರುವಾರದಂದು ಕೋರ್ಟ್ ಆವರಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಾಗೇಂದ್ರ, ಶುಕ್ರವಾರ ಕೂಡಾ ಕೋರ್ಟಿಗೆ ಹಾಜರಾಗಬೇಕಿದೆ. ಖುದ್ದು ಹಾಜರಾತಿಯಿಂದ ವಿನಾಯತಿ ಸಿಕ್ಕಿಲ್ಲ ಎಂದಿದ್ದಾರೆ.

ಶಾಸಕರ ಅನರ್ಹತೆ ಪ್ರಶ್ನೆ
ನಿಯಮ ಏನಿದೆ?: ಶಾಸಕರು ಸಭೆಗೆ ಗೈರು ಹಾಜರಾದರು ಎಂಬ ಕಾರಣಕ್ಕೆ ಪಕ್ಷದ ಸದಸ್ಯತ್ವ ರದ್ದುಗೊಳಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಶಾಸಕರ ಅನರ್ಹ ಎನ್ನಲು ಎರಡು ಸಂದರ್ಭದಲ್ಲಿ ಮಾತ್ರ ಸಾಧ್ಯ. ಶಾಸಕರು ಸ್ವತಃ ಪಕ್ಷದ ಸದಸ್ಯತ್ವವನ್ನು ತೊರೆಯುವುದು, ಇನ್ನೊಂದು ಪಕ್ಷ ನೀಡಿದ ವಿಪ್ ಉಲ್ಲಂಘಿಸಿ, ಬೇರೆ ಪಕ್ಷದ ಪರ ನಿಂತರೆ ಆಗ ಪಕ್ಷದ ಸದಸ್ಯತ್ವ ರದ್ದುಗೊಳಿಸಬಹುದು ಎಂದಿದ್ದಾರೆ.












Click it and Unblock the Notifications