ಹಳೇಬೀಡಿನಲ್ಲಿ ಕನ್ನಡ ನಾಮಫಲಕ ಕೇಳಿದ್ದಕ್ಕೆ ಪ್ರವಾಸಿಗರನ್ನೇ ನಿಂದಿಸಿದ ಅಧಿಕಾರಿ: ಏನಿದು ಘಟನೆ?
ಹಾಸನ, ಜನವರಿ 10: ಹಳೇಬೀಡಿನ ವಸ್ತುಸಂಗ್ರಹಾಲಯದ ಮುಂಭಾಗದಲ್ಲಿರುವ ಬೋರ್ಡ್ನಲ್ಲಿ ಕನ್ನಡ ಭಾಷೆ ಇಲ್ಲದಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ಅಧಿಕಾರಿಯೊಬ್ಬರು ಪ್ರವಾಸಿಗರನ್ನೇ ನಿಂದಿಸಿದ್ದಾರೆ.
ಈ ವಸ್ತು ಸಂಗ್ರಹಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರ್ವಹಿಸುತ್ತದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮ್ಯೂಸಿಯಂಗೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ಅಲ್ಲಿನ ಬೋರ್ಡ್ನಲ್ಲಿ ಕನ್ನಡ ಭಾಷೆ ಏಕೆ ಇಲ್ಲ ಎಂದು ಅಧಿಕಾರಿಯನ್ನು ಕೇಳುತ್ತಿರುವುದನ್ನು ವಿಡಿಯೋ ಕ್ಲಿಪ್ನಲ್ಲಿ ಕಾಣಬಹುದು. ಇದರಿಂದ ಕೋಪಗೊಂಡ ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ಅನಿಲ್ ಕುಮಾರ್, ಪ್ರವಾಸಿಗರನ್ನು ಇಂಗ್ಲಿಷ್ನಲ್ಲಿ ನಿಂದಿಸಿದ್ದಾರೆ. 'ಇದನ್ನು ಕೇಳಲು ನೀನು ಯಾರು?' ಎಂದು ಮರುಪ್ರಶ್ನಿಸಿದ್ದಾರೆ.
ಅಧಿಕಾರಿಯ ವರ್ತನೆ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕನ್ನಡ ಪರ ಹೋರಾಟಗಾರ, 'ಹಳೇಬೀಡು, ಹೊಯ್ಸಳರ ರಾಜದಾನಿ, ಹೊಯ್ಸಳ ಆಳ್ವಿಕೆಯಲ್ಲಿ ಶಾಸನಗಳು ಕನ್ನಡದಲ್ಲಿ ಇರುತ್ತಿದ್ದವು, ಈಗ ಹಿಂದಿ ಮೂಲಭೂತವಾದಿಗಳ ಆಳ್ವಿಕೆ, ಹೊಯ್ಸಳರ ನಾಡಿನಲ್ಲಿ ಕನ್ನಡವೇ ಇಲ್ಲ. ಕನ್ನಡಿಗರು ಭಾರತ ಒಕ್ಕೂಟ ಸೇರಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಬೇರೆ ಉದಾಹರಣೆ ಬೇಡ' ಎಂದು ಹೇಳಿದ್ದಾರೆ. ತಮ್ಮ ಟ್ವೀಟ್ನಲ್ಲಿ ನಾಮಪಲಕದ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.
ಹಳೇಬೀಡು, ಹೊಯ್ಸಳರ ರಾಜದಾನಿ, ಹೊಯ್ಸಳ ಆಳ್ವಿಕೆಯಲ್ಲಿ ಶಾಸನಗಳು ಕನ್ನಡದಲ್ಲಿ ಇರುತ್ತಿದ್ದವು, ಈಗ ಹಿಂದಿ ಮೂಲಭೂತವಾದಿಗಳ ಆಳ್ವಿಕೆ, ಹೊಯ್ಸಳರ ನಾಡಿನಲ್ಲಿ ಕನ್ನಡವೇ ಇಲ್ಲ.
— ಅರುಣ್ ಜಾವಗಲ್ | Arun Javgal (@ajavgal) January 10, 2023
ಕನ್ನಡಿಗರು ಭಾರತ ಒಕ್ಕೂಟ ಸೇರಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಬೇರೆ ಉದಾಹರಣೆ ಬೇಡ. #stopHindiImposition pic.twitter.com/lVXwMNuy8K
ಈ ಕುರಿತು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜು ಮಹದೇವಪುರ ಎಂಬುವವರು, 'ನಾವು ಒಕ್ಕೂಟದ ಪಾಲುದಾರರಾಗಿ ಇರಬೇಕೇ ಹೊರತು, ಒಕ್ಕೂಟದ ಕಾಲೋನಿಯಾಗಿರಬಾರದು. ಹಳೇಬೀಡಿನ ಪಾಡು ನೋಡಿ, ಕನ್ನಡದ ವೈಭವ ಮರೆಯಾಗಿ ಹೋಗಿ ಈಗ ಹಿಂದಿಯ ಮೆರವಣಿಗೆ ನಡೆಯುತ್ತಿದೆ. ಕನ್ನಡಿಗರೇ, ಎಚ್ಚೆತ್ತುಕೊಳ್ಳಿ' ಎಂದು ತಿಳಿಸಿದ್ದಾರೆ.
'ಕನ್ನಡದಲ್ಲಿ ಸೇವೆ ಇಲ್ಲ ಎಂದು ಕೇಳಿದಕ್ಕೆ ಈ ಅಧಿಕಾರಿ ತೋರಿದ ದರ್ಪ' ಎಂದು ರಾಘವೇಂದ್ರ ಎಸ್ ಎಂಬುವವರು ಟ್ವೀಟ್ ಮಾಡಿದ್ದಾರೆ ಇದರೊಂದಿಗೆ ವಿಡಿಯೊ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಸೇವೆ ಇಲ್ಲ ಎಂದು ಕೇಳಿದಕ್ಕೆ ಈ ಅಧಿಕಾರಿ ತೋರಿದ ದರ್ಪ.#serveinmylanguage#StopHindilmposition#ಹಿಂದಿ_ಹೇರಿಕೆ_ನಿಲ್ಲಿಸಿ pic.twitter.com/CfT1r2qFTv
— Raghavendra S| ರಾಘವೇಂದ್ರ ಎಸ್ (@Raghavendras11) January 7, 2023
ಕನ್ನಡಾಭಿಮಾನಿ ಎಂಬುವವರು ಟ್ವೀಟ್ ಮಾಡಿ, 'ಮುಖ್ಯಮಂತ್ರಿಗಳೇ, ನಿಮಗೆ ಹಾಗೂ ನಿಮ್ಮ ರಾಷ್ಟ್ರೀಯ ಪಕ್ಷಕ್ಕೆ ಕನ್ನಡಿಗ-ಕರ್ನಾಟಕ-ಕನ್ನಡದ ಮೇಲೆ ನಿಜವಾದ ಕಾಳಜಿ, ಗೌರವವಿದ್ದರೆ ಹಿಂದಿ ಹೇರಿಕೆಯನ್ನ ವಿರೋಧಿಸುತ್ತಿದ್ರಿ. ಆದರೆ ನಿಮಗೆಲ್ಲಾ ನಿಮ್ಮ ಸ್ವಾರ್ಥ ರಾಜಕಾರಣವೇ ಹೆಚ್ಚಾಗಿದೆ ಬಿಡಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.