ಸಾಲಮನ್ನಾ ಗೊಂದಲ : ಉಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
ಬೆಂಗಳೂರು, ನವೆಂಬರ್ 02 : ರೈತರ ಸಾಲ ಮನ್ನಾ ಕರ್ನಾಟಕ ಸರ್ಕಾರದ ಜನಪ್ರಿಯ ಘೋಷಣೆ. ಆದರೆ, ಈ ಕುರಿತು ಇನ್ನೂ ಹಲವಾರು ಗೊಂದಲಗಳಿವೆ. ಸಾಲಮನ್ನಾ ಪ್ರಕ್ರಿಯೆಗಳನ್ನು ನೋಡಿಕೊಳ್ಳಲು ಸರ್ಕಾರ ಒಬ್ಬರು ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒಬ್ಬರು ಐಎಎಸ್ ಮತ್ತು ಇಬ್ಬರು ಕೆಎಎಸ್ ಅಧಿಕಾರಿಗಳನ್ನು ಸಾಲ ಮನ್ನಾದ ಪ್ರಕ್ರಿಯೆ ನೋಡಿಕೊಳ್ಳಲು ನೇಮಕ ಮಾಡಿದ್ದಾರೆ. ಸಾಲಮನ್ನಾದ ಕುರಿತ ಎಲ್ಲಾ ಕಾರ್ಯಗಳನ್ನು ಇವರು ನೋಡಿಕೊಳ್ಳಲಿದ್ದಾರೆ.
ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್, ಕೆಎಎಸ್ ಅಧಿಕಾರಿಗಳಾದ ಗಂಗಾಧರ್ ಮತ್ತು ಭವಾನಿ ಅವರನ್ನು ನೇಮಕ ಮಾಡಲಾಗಿದೆ. ಬ್ಯಾಂಕ್ನಿಂದ ಬಂದ ಮಾಹಿತಿಗೆ ಅನುಗುಣವಾಗಿ ಹಣ ಬಿಡುಗಡೆ ಮಾಡುವ ಎಲ್ಲಾ ಜವಾಬ್ದಾರಿ ಮನೀಷ್ ಮೌದ್ಗಿಲ್ ಅವರ ಮೇಲಿದೆ.

ಕರ್ನಾಟಕ ಸರ್ಕಾರ ಸುಮಾರು 49 ಸಾವಿರ ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದೆ. ಇವುಗಳಲ್ಲಿ ಸಹಕಾರ ಸಂಘ, ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಸೇರಿದೆ. ಆದರೆ, ಸಾಲಮನ್ನಾ ಬಗ್ಗೆ ಇನ್ನೂ ಹಲವಾರು ಗೊಂದಲಗಳಿವೆ.
ಋಣ ಮುಕ್ತ ಪತ್ರ ವಿತರಣೆ : 'ಉಪ ಚುನಾವಣೆ ಮುಗಿದ ಬಳಿಕ ಬೆಂಗಳೂರಿನಲ್ಲಿ 10 ಲಕ್ಷ ರೈತರ ಬೃಹತ್ ಸಮಾವೇಶ ನಡೆಸಿ ರೈತರಿಗೆ ಋಣಮುಕ್ತ ಪತ್ರ ವಿತರಣೆ ಮಾಡುತ್ತೇನೆ. ನಾಡಿನ ಜನತೆಗೂ ತಿಂಗಳಿಗೆ ಒದೊಂದು ಸಿಹಿ ಸುದ್ದಿ ಕೊಡುತ್ತೇನೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
'ರೈತರ ಸಾಲಮನ್ನಾದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸಾಲಮನ್ನಾದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಬಜೆಟ್ನಲ್ಲಿ ಇದಕ್ಕೆ ಎಂದು ಹಣ ಮೀಸಲಿಡಲಾಗಿದೆ. ಮಾಹಿತಿ ಕೊಟ್ಟಿರುವ ರೈತರ ವಿವರವನ್ನು ಉಸ್ತುವಾರಿ ಸಮಿತಿಗೆ ವಹಿಸಲಾಗಿದೆ' ಎಂದರು.












Click it and Unblock the Notifications