IAS Transfer: ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆ, ಸಿಎಂ ಸಭೆಗೆ ಗೈರಾಗಿದ್ದು ಮುಳುವಾಯಿತೇ?
ಬೆಂಗಳೂರು: ಕರ್ನಾಟಕದಲ್ಲಿ ಇಂಧನ ಸಚಿವರ ರಾಜೀನಾಮೆ ಕುರಿತು ಚರ್ಚೆಗಳು ನಡೆದ ಬೆನ್ನಲ್ಲೆ ರಾಜ್ಯ ಸರ್ಕಾರದಲ್ಲಿ ಒಂದಷ್ಟು ಬೆಳವಣಿಗೆ ನಡೆದಿವೆ. ಆ ಪೈಕಿ ಐಎಎಸ್ ಅಧಿಕಾರಿ ವರ್ಗಾವಣೆಯು ಒಂದು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಜನವರಿ 30ರ ಶುಕ್ರವಾರ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರ ಮುಂದಿನ ಆದೇಶವರೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಸ್ಥಾನವನ್ನು ಹೆಚ್ಚುವರಿ ಜವಾಬ್ದಾರಿಯಾಗಿ ನೀಡಿದೆ. ಮುಂದಿನ ಆದೇಶದವರೆಗೆ ಈ ವರ್ಗಾವಣೆ, ಮತ್ತು ಹೊಸ ಜವಾಬ್ದಾರಿ ನಿರ್ವಹಣೆಗೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ಸಿಎಂ ಸಭೆಗೆ ಗೈರಾಗಿದ್ದೇ ಮುಳುವಾಯಿತೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕರೆದಿದ್ದ ಸಭೆಗೆ ಇದೇ ಪಂಕಜ್ ಕುಮಾರ್ ಪಾಂಡೆ ಅವರು ಗೈರಾಗಿದ್ದರು. ಹೀಗಾಗಿ ಅವರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಅದಾದ ಬಳಿಕ ಇಂಧನ ಸಚಿವ ಕೆಜೆ ಜಾರ್ಜ್ ಅವರ ಸಭೆಗೆ ಪಾಂಡೆ ಯವರು ಹಾಜರಾಗಿದ್ದರು. ಮೊನ್ನೆಯಷ್ಟೇ ಇಂಧನ ಸಚಿವರ ರಾಜೀನಾಮೆ ನೀಡುತ್ತಾರೆ ಎಂದೆಲ್ಲ ಚರ್ಚೆ ನಡೆಯಿತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಹಾಗೂ ಪಂಕಜ್ ಕುಮಾರ್ ಪಾಂಡೆ ಅವರ ಹೆಸರು ಉಲ್ಲೇಖಿಸಿ ಬಿಜೆಪಿ ನಾಯಕ ಸುನಿಲ್ ಕುಮಾರ್ ಅವರು ಪ್ರಸ್ತಾಪಿಸಿದ್ದರು. ಹಲವು ಮಾಹಿತಿಗಳನ್ನು ಸದನದಲ್ಲಿ ಹಂಚಿಕೊಂಡಿದ್ದರು.
ಇದರ ಬೆನ್ನಲ್ಲೆ ಪಂಕಜ್ ಕುಮಾರ್ ಪಾಂಡೆ ಅವರ ವರ್ಗಾವಣೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಉಲ್ಲೇಖಿಸಿದ ನಂತರ ರಾಜಕೀಯ ವಲಯದಲ್ಲಿ ಈ ಬದಲಾವಣೆ ಮಾಡಲಾಗಿದೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಪಾಂಡೆ ಅವರು ಅದೇ ಸಮಯದಲ್ಲಿ ಹಾಜರಾಗಿದ್ದರು ಎಂದು ವರದಿಯಾಗಿದೆ.
ಆರೋಪ ನಿರಾಕರಿಸಿದ ಐಎಎಸ್ ಅಧಿಕಾರಿ ಪಾಂಡೆ
ಕೆಪಿಟಿಸಿಎಲ್ ಎಂಡಿ ಆಗಿ ಪಂಕಜ್ ಕುಮಾರ್ ಪಾಂಡೆ ಅವರು, ಉತ್ತರ ಭಾರತದ ಬಿಡ್ಡರ್ಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಾತ್ರವಲ್ಲದೇ ಇನ್ನಿತರ ಟೆಂಡರ್ ಸಂಬಂಧಿತ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ. ಈ ಸಂಬಂಧ ಸರ್ಕಾರದ ಪರಿಶೀಲನೆಯಲ್ಲಿದ್ದರು ಎಂದು ವರದಿ ಆಗಿದೆ. ಆದರೆ ತಮ್ಮ ಮೇಲಿನ ಆರೋಪಗಳು ನಿಜವಲ್ಲ. ಟೆಂಡರ್ನಲ್ಲಿ ಪಾಲ್ಗೊಳ್ಳಲು ವಿಫಲ ಬಿಡ್ಡರ್ಗಳು ಹರಡಿದ ವದಂತಿ ಎಂದು ಅವರು ನಿರಾಕರಿಸಿದ್ದರು. ಇದೆಲ್ಲದರ ಬೆನ್ನಲ್ಲೆ ಅವರು ಇದೀಗ ಮುಂದಿನ ಆದೇಶದವರೆಗೆ ವರ್ಗಾವಣೆ ಆಗಿದ್ದಾರೆ.












Click it and Unblock the Notifications