karnataka monsoon update: 28 ವರ್ಷದಲ್ಲೇ ಅಧಿಕ ಮಳೆ ಕೊರತೆ: ಬಿದ್ದ ಮಳೆ-ಕೊರತೆ ಮಳೆ ವಿವರ ಇಲ್ಲಿದೆ
ಬೆಂಗಳೂರು, ಜೂನ್ 18: ಪ್ರಸಕ್ತ ವರ್ಷ ಮುಂಗಾರು ಮಳೆ ಮೊದಲ ವಾರವೇ ಬಾರದಿದ್ದರೂ ಸಹ ನಂತರದಲ್ಲಿ ಆದರೂ ಉತ್ತಮ ಮಳೆ ಸುರಿಯುವ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಮುಂಗಾರು ಆರಂಭದ ಮೊದಲ ಎರಡು ವಾರದಲ್ಲಿ ಅತ್ಯಧಿಕ ಮಳೆ ಕೊರತೆ ಉಂಟಾಗಿದೆ. ಇದನ್ನು ಎರಡೂವರೆ ದಶಕದಲ್ಲೇ ಅತ್ಯಧಿಕ ಕೊರತೆ ಎಂದು ಬಣ್ಣಿಸಲಾಗುತ್ತಿದೆ.
ವಾಡಿಕೆಯಂತೆ ಜೂನ್ 01ರಂದು ಮುಂಗಾರು ಮಳೆ ಆರಂಭವಾಗಬೇಕು. ಆದರೆ ಜೂನ್ 04 ಕೇರಳ ಪ್ರವೇಶಿಸಿ ನಂತರ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಬ್ಬರಿಸಲಿದೆ ಎನ್ನಲಾಗಿತ್ತು. ಅದು ಹುಸಿಯಾಗಿ ಮತ್ತಷ್ಟು ತಡವಾಗಿ ಮುಂಗಾರು ಆಗಮನವಾದರೂ ಸಹಿತ ರಾಜ್ಯದಲ್ಲಿ ಶೇಕಡಾ 72 ಮಳೆ ಕೊರತೆ ಉಂಟಾಗಿದೆ. ಇದು ಕಳೆದ 28 ವರ್ಷಗಳಲ್ಲಿಯೇ ಅತ್ಯಧಿಕ ಮಳೆ ಕೊರತೆ ಎಂದು ಹೇಳಲಾಗುತ್ತಿದೆ.

ಜೂನ್ ಆರಂಭಿಕ ಎರಡು ವಾರದ ಕಳೆದರೂ ರಾಜ್ಯದ ಒಟ್ಟು ಜಿಲ್ಲೆಗಳ ಪೈಕಿ ಒಂದೇ ಒಂದು ಜಿಲ್ಲೆಯಲ್ಲಿ ಉತ್ತಮ ಇಲ್ಲವೇ ಕನಿಷ್ಠ ಮಳೆ ಸಹ ದಾಖಲಾಗಿಲ್ಲ. ಪ್ರತಿ ವರ್ಷ ಈ ಮುಂಗಾರು ಆರಂಭಿಕ 10 ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆ 51 ಮಿಲಿ ಮೀಟರ್ನಷ್ಟು ಮಳೆ ಆಗಬೇಕಿತ್ತು.
ಆದರೆ ರಾಜ್ಯದಲ್ಲಿ ಸದ್ಯ ಮಳೆ ಸುರಿಸುವ ಮುಂಗಾರು ಮಾರುತುಗಳು ದುರ್ಬಲವಾಗಿರುವುದರಿಂದ ವಾಡಿಕೆ 51 ಪೈಕಿ ಕೇವಲ ಸುಮಾರು 14 ಮಿಲಿ ಮೀಟರ್ನಷ್ಟು ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯದೆಲ್ಲಡೆ ಮಳೆ ಕೊರತೆ ಕಾಡುತ್ತಿದ್ದು, ಬಿತ್ತನೆಗೆ ಹೊಲ ಹದ ಮಾಡಿಕೊಂಡು ಕಾಯುತ್ತಿರುವ ರೈತರಿಗೆ ನಿರಾಸೆಯಾಗಿದೆ. ಅವರೆಲ್ಲ ಮಳೆ ಬೀಳುವುದನ್ನೆ ಕಾಯುತ್ತಿದ್ದಾರೆ.
ಸೈಕ್ಲೋನ್ನಿಂದ ಮುಂಗಾರು ದುರ್ಬಲ
ಸಾಮಾನ್ಯವಾಗಿ ಹಿಂಗಾರು ಅಂತ್ಯಗೊಳ್ಳುತ್ತಿದ್ದಂತೆ ಜೂನ್ ಮೊದಲ ವಾರವೇ ಬೆಂಗಳೂರು, ಮಲೆನಾಡಿನ ಜಿಲ್ಲೆಗಳು ಸೇರಿದಂತೆ ರಾಜ್ಯದೆಲ್ಲ ಉತ್ತಮ ಮಳೆ ಆಗುತ್ತಿತ್ತು. ಆದರೆ ತಡವಾಗಿ ಆಗಮಿಸಿದ್ದ ಮುಂಗಾರು ಮಳೆ ಸುರಿಸುವ ಮಾರುತಗಳು 'ಬಿಪರ್ಜಾಯ್' ಚಂಡಮಾರುತ (Biparjoy Cyclone) ಪ್ರಭಾವದಿಂದಾಗಿ ಮುಂಗಾರು ದುರ್ಬಲವಾಗಿವೆ.

ಚಂಡಮಾರುತವೊಂದು ಸೃಷ್ಟಿಯಾದರೆ, ಆ ಭಾಗದಲ್ಲಿ ಗಾಳಿ ಸೆಳೆತ ಹೆಚ್ಚಿರುತ್ತದೆ. ಈ ವೇಳೆ ಮೋಡಗಳು ಗಾಳಿಯ ಸೆಳೆತಕ್ಕೆ ಒಳಗಾಗಿ ವಾಯಭಾರ ಕುಸಿತದ ಪ್ರದೇಶಗಳತ್ತ ಸಾಗುತ್ತವೆ. ಇದರಿಂದ ಸ್ವಚ್ಚಂದ ನೀಲಿ ಆಕಾಶದ ವಾತಾವರಣ ನಿರ್ಮಾಣವಾಗುತ್ತದೆ. ಹೀಗೆ ಮೋಡಗಳೇ ಇಲ್ಲದ ನೀಲಿ ಆಕಾಶ ಇದ್ದಾಗ ಮಳೆ ಬರುವುದಿಲ್ಲ, ತಾಪಮಾನವು ಹೆಚ್ಚಿರುತ್ತದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಜುಲೈ ಮೊದಲ ವಾರದ ಅಂತ್ಯವರೆಗೆ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ. ಇದೆಲ್ಲ ಕಾರಣಗಳಿಂದ ರೈತರ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ.
ಕರ್ನಾಟಕ ಮಳೆ ಮುನ್ಸೂಚನೆ ಮಾಹಿತಿ
ಕರ್ನಾಟಕದಲ್ಲಿ ಮುಂದಿನ ಐದು ದಿನಗಳು ವಿವಿಧೆ ಮಳೆ ಮುಂದುವರಿಯುವ ಲಕ್ಷಣಗಳು ಇವೆ. ಈ ಪೈಕಿ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳ ಹಲವೆಡೆ ಜೂನ್ 23ರವರೆಗೂ ಸಾಧಾರಣದಿಂದ ಉತ್ತಮ ಮಳೆ ಬರಲಿದೆ. ಇತ್ತ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾರ್ವಣಗೆರೆ, ತುಮಕೂರು, ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತ್ತ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಬಾಗಲಕೋಟೆ, ಕೊಪ್ಪಳ್ಳ, ಯಾದರಿಗಿ, ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸದ್ಯ ಒಣ ಹವೆ ಮುಂದುವರಿಯುತ್ತಿದೆ. ಮಳೆಯ ಕೊರತೆ ಇಲ್ಲಿಯೇ ಹೆಚ್ಚಾಗಿದೆ. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಚದುರಿದಂತೆ ತುಂತುರು ಮಳೆಯಾಗಬಹುದು. ನಂತರ ಐದನೇ ದಿನ (ಜೂನ್ 23) ಮೇಲಿನ ಎಲ್ಲ ಜಿಲ್ಲೆಗಳಿಗೆ ಉತ್ತಮ ಮಳೆ ಸಂಭವವಿದೆ ಎಂದು ವರದಿ ತಿಳಿಸಿದೆ.












Click it and Unblock the Notifications