ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಡಿಸೈನ್ ಕಲಿಕೆ ಸೇರ್ಪಡೆಗೆ ಸರ್ಕಾರದಿಂದ ಗಂಭೀರ ಚಿಂತನೆ
ಬೆಂಗಳೂರು, ಡಿಸೆಂಬರ್ 08: ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಡಿಸೈನ್ (ವಿನ್ಯಾಸ) ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪಠ್ಯಕ್ರಮದಲ್ಲಿ ಸೇರಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದರು.
ಗುರುವಾರ ನಗರದಲ್ಲಿ ನಡೆದ ಇಂಟರ್ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ ಸೇರಿದಂತೆ ಇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮೂರು ದಿನಗಳ 'ಫ್ಯೂಚರ್ ಡಿಸೈನ್ ಫೆಸ್ಟಿವಲ್' ಸಮಾರಂಭದಲ್ಲಿ ಮಾತನಾಡಿದರು.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಐಚ್ಛಿಕ ವಿಷಯಗಳ ಆಯ್ಕೆಗೆ ಮುಕ್ತ ಅವಕಾಶ ಇದೆ. ಹೀಗಾಗಿ, ಡಿಸೈನ್ ಅಧ್ಯಯನವನ್ನು ಒಂದು ವಿಷಯವಾಗಿ ಸೇರ್ಪಡೆ ಮಾಡುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಇದು ಸರ್ಕಾರದ ಚಿಂತನೆಯಾಗಿದೆ. ಡಿಸೈನ್ ಉದ್ಯಮವು ಬೆಂಗಳೂರು ನಗರದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಬೇರೂರಬೇಕು. ಸರಕಾರವು ಇದಕ್ಕೆ ಎಲ್ಲಾ ನೆರವನ್ನೂ ನೀಡಲಿದೆ ಎಂದರು.
ಬೆಂಗಳೂರು ನಗರವು ಅತ್ಯಾಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಪ್ರಶಸ್ತ ನಗರವಾಗಿದೆ. ಇಲ್ಲಿನ ಪರಿಸರವು ಅದ್ಭುತವಾಗಿದೆ. ಐಟಿ ಬಿಟಿ ವಲಯಗಳಂತೆ ಕರ್ನಾಟಕ ಮುಂಬರುವ ದಿನಗಳಲ್ಲಿ ಡಿಸೈನ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಮೂರು ದಿನದ 'ಫ್ಯೂಚರ್ ಡಿಸೈನ್ ಫೆಸ್ಟಿವಲ್ ಗೆ ಚಾಲನೆ
ನಗರದಲ್ಲಿ ನಡೆದ ಇಂಟರ್ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ ಸೇರಿದಂತೆ ಇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮೂರು ದಿನಗಳ 'ಫ್ಯೂಚರ್ ಡಿಸೈನ್ ಫೆಸ್ಟಿವಲ್' ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಎನ್ಜಿಇಎಫ್ ಕಾರ್ಖಾನೆ ಜಾಗದಲ್ಲಿ ತಲೆ ಎತ್ತುತ್ತಿರುವ ವೃಕ್ಷೋದ್ಯಾನದ ಆವರಣದಲ್ಲಿ ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯ ಕೇಂದ್ರ (ಇನ್ನೋವೇಶನ್ ಎಕ್ಸಪೀರಿಯನ್ಸ್ ಸೆಂಟರ್) ಕೂಡ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಜಗತ್ತಿನ ಎಲ್ಲ ಪ್ರಮುಖ ನಗರಗಳಲ್ಲಿಯೂ ಆ ನಗರದ ಬೆಳವಣಿಗೆಗೆ ದಿಕ್ಕುದೆಸೆ ತೋರುವ ಸಿಟಿ ಸೆಂಟರ್ ಎಂಬುದು ಇರುತ್ತದೆ. ಬೆಂಗಳೂರಿನ ವಿಸ್ತಾರವನ್ನು ಪರಿಗಣಿಸಿ ಎಂಟು ದಿಕ್ಕುಗಳಲ್ಲೂ 8 ಸಿಟಿ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಕೇಂದ್ರಗಳು ಸಮಕಾಲೀನ ಜಗತ್ತಿನ ಮಾನದಂಡಗಳಿಗೆ ತಕ್ಕಂತೆ ಸುಸ್ಥಿರತೆ ಮತ್ತು ಪರಿಸರಸ್ನೇಹಿಯಾಗಿ ಪ್ರಕೃತಿಯ ಹಸಿರು ಸಂಪತ್ತಿನೊಂದಿಗೆ ಬೆಸೆಯಲಾಗುವುದು. ಇಂತಹ ಮಾದರಿ ಬೇರೆಡೆ ಎಲ್ಲೂ ಇಲ್ಲ ಎಂದು ಬೊಮ್ಮಾಯಿ ವಿವರಿಸಿದರು.
ಈ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್, ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಮಿತಿಯ ಮುಖ್ಯಸ್ಥ ಟಾಮ್ ಜೋಸೆಫ್, ಗೀತಾ ನಾಯರ್ ಮತ್ತಿತರರು ಉಪಸ್ಥಿತರಿದ್ದರು.