ರಾಜ್ಯದಲ್ಲಿ ಸರಕಾರಿ ನರ್ಸುಗಳ ಸಂಬಳವೆಷ್ಟು ಗೊತ್ತಾ?
ಉಡುಪಿ, ಜೂನ್ 2: ಅಸಲಿಗೇ ಮೋಸ ಅಂದರೆ ಇದೇನಾ? ಅದು ಬಡಪಾಯಿ ನರ್ಸುಗಳ ವಿಷಯದಲ್ಲಿ! ಉಡುಪಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 16 ಮಂದಿ ಶುಶ್ರೂಷಕಿಯರಿಗೆ ರಾಜ್ಯ ಆರೋಗ್ಯ ಇಲಾಖೆಯು ತಿಂಗಳಿಗೆ ತಲಾ 17,650 ರೂ ಸಂಬಳಗಳನ್ನು ನೀಡುತ್ತಿದೆ. ಒಳ್ಳೆಯದೇ! ಆದರೆ ಇದು ಇಲಾಖೆಯ ಲೆಕ್ಕ ಪುಸ್ತಕದಲ್ಲಿ ಮಾತ್ರ ಕಾಣಿಸುತ್ತದೆ. ಏಕೆಂದರೆ ಶುಶ್ರೂಷಕಿಯರ ಕೈಗೆ ಬರುತ್ತಿರುವುದು ಕೇವಲ 4,575 ರೂ. ಅಂದರೆ ಇಲಾಖೆಯೇ ತಲಾ ಒಬ್ಬೊಬ್ಬ ಶುಶ್ರೂಷಕಿಯರಿಂದ 13,075 ರೂ ಸಂಬಳ ಗುಳುಂ ಮಾಡುತ್ತಿದೆ.
ಇದು ಒಂದು ಉಡುಪಿ ಜಿಲ್ಲೆಯ ಕಥೆಯೋ ಅಥವಾ ರಾಜ್ಯದ ಎಲ್ಲಾ ಜಿಲ್ಲೆಗಳ ಶುಶ್ರೂಷಕಿಯರೂ ಇಂತಹುದೇ ಪಡಿಪಾಟಲು ಅನುಭವಿಸುತ್ತಿದ್ದಾರಾ? ಈ ಬಗ್ಗೆ ಮಾನವ ಹಕ್ಕುಗಳ ಸಂರಕ್ಷಣಾ ಫೌಂಡೇಶನ್ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನಬಾಗ್ ಅವರು ಸರಕಾರದ ಕಣ್ಣುತೆರೆಸಲು ನಿರ್ಧರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಏನಾಗಿದೆಯೆಂದರೆ 2000ನೇ ಇಸ್ವಿಯಲ್ಲಿ ಈ 16 ನರ್ಸುಗಳು 3,300 ರೂ. ತಾತ್ಕಾಲಿಕ ನೇಮಕಾತಿ ಆಧಾರದಲ್ಲಿ ಇಲಾಖೆಯ ಸೇವೆಗೆ ಸೇರ್ಪಡೆಗೊಂಡರು. 2007ರಲ್ಲಿ ಈ ಸಂಬಳಗಳನ್ನು 4,575 ರೂ ಗೆ ಹೆಚ್ಚಿಸಲಾಯಿತು.

ಅದೇ ವರ್ಷ ಮೂರೇ ತಿಂಗಳಲ್ಲಿ 2006ರಿಂದಲೇ ಪೂರ್ವಾನ್ವಯವಾಗುವಂತೆ ಈ ಸಂಬಳಗಳನ್ನು 8,825 ರೂ. ಗೆ ಏರಿಸಲಾಯಿತು. ಮುಂದೆ 2012ರ ವೇಳೆಗೆ 17,650ಗೆ ಹೆಚ್ಚಿಸಲಾಯಿತು. ಆದರೆ ಅಲ್ಲಿಂದೀಚೆಗೆ ಈ ಸಂಬಳ ಏರಿಕೆ ಎಂಬುದು ಕೇವಲ ಇಲಾಕೆಯ ಲೆಕ್ಕಪುಸ್ತಕದಲ್ಲಿದೆ. 2006ರಿಂದಲೂ ಮಾಸಿಕ 4,575 ರೂ ಸಂಬಳದಲ್ಲಿಯೇ ಈ 16 ಮಂದಿ ದುಡಿಯುತ್ತಿದ್ದಾರೆ.
ಈ ಮಧ್ಯೆ, 8 ವರ್ಷಗಳಲ್ಲಿ ಈ ಏರಿಕೆಯ ಸಂಬಳದ ಮೊತ್ತ ಯಾರಿಗೆ ಸಂದಾಯವಾಗಿದೆ ಎಂಬುದು ಅಶ್ವಿನಿ ದೇವತೆಗಳಿಗೂ ತಿಳಿದಿಲ್ಲ.
ಉಡುಪಿ ಉಡುಪಿ 16 ಮಂದಿ ಶುಶ್ರೂಷಕಿಯರ ಪಡಿಪಾಟಲು ಇಷ್ಟೆ ಅಲ್ಲ. ಅವರು ಈ ಕೆಲಸವನ್ನು ನೆಚ್ಚಿಕೊಂಡು 60-70 ಕಿಮೀ ದೂರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಬಸ್ ಚಾರ್ಜಿಗೇ ತಿಂಗಳಿಗೆ 3,000 ರೂ ತೆರಬೇಕಾಗುತ್ತದೆ. ಅಂದಹಾಗೆ ಈ ಶೋಷಣೆಯನ್ನು 2013ರಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು. ಜಿಲ್ಲಾಧಿಕಾರಿಯ ಕರುಳು ಚುರಕ್ಕೆಂದು ತತ್ ಕ್ಷಣದಿಂದಲೇ ಬಾಕಿ ಸಂಬಳ ರಿಲೀಸ್ ಮಾಡಿ ಎಂದು ತಮ್ಮ ಅಧಿಕಾರ ಬಳಸಿ ಹುಕುಂ ಮಾಡಿದರು. ಆದರೆ ಅವರ ಅಧಿಕಾರವಾಣಿಯೂ ಇಲಾಖೆಯ ಕಿವಿಗೆ ಬಿದ್ದಿಲ್ಲ.
'ನಮಗೆ ತಲಾ 4,575 ರೂ ಸಂಬಳ ಕೊಡುವುದಕ್ಕಷ್ಟೇ ಬರುತ್ತದೆ. ಹೆಚ್ಚಿನ ಮೊತ್ತ ಪಾವತಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಲಾಖೆಯ ನಿರ್ದೇಶಕರೇ ಈ ಬಾಕಿ ಮೊತ್ತದ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು' ಅನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ. (ಚಿತ್ರ ಕೃಪೆ)
ರಾಜ್ಯದ ಇತರೆ ಜಿಲ್ಲೆಗಳಲ್ಲೂ ಇಂತಹುದೇ ಪಡಿಪಾಟಲು ಅನುಭವಿಸುತ್ತಿರುವುದನ್ನು ಶುಶ್ರೂಷಕಿಯರು ಡಾ. ರವೀಂದ್ರನಾಥ್ ಶಾನಬಾಗ್ ಅವರ ಗಮನಕ್ಕೆ ತರಬಹುದು. ಅವರ ಮೊಬೈಲ್ ಸಂಖ್ಯೆ ಇಲ್ಲಿದೆ: 89710 33582.












Click it and Unblock the Notifications