ಕರ್ನಾಟಕ ಪೊಲೀಸರಿಗೆ ಶುಭ ಸುದ್ದಿ ನೀಡಿದ ಸರ್ಕಾರ
Recommended Video
ಬೆಂಗಳೂರು, ಜುಲೈ 16 : ಕರ್ನಾಟಕ ಸರ್ಕಾರ ಪೊಲೀಸರಿಗೆ ಶುಭ ಸುದ್ದಿ ನೀಡಿದೆ. ಹಲವು ವರ್ಷಗಳಿಂದ ಇದ್ದ ಬೇಡಿಕೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಪೊಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಔರಾದ್ಕರ್ ವರದಿ ಜಾರಿಗೆ ಸಮ್ಮತಿ ಸೂಚಿಸಿದೆ.
ಮಂಗಳವಾರ ಕರ್ನಾಟಕ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡಿದೆ. 2016ರ ಸೆ.27ರಂದು ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸಲ್ಲಿಸಿದ್ದ ವರದಿಯನ್ನು ಜಾರಿಗೆ ತರಲು ಒಪ್ಪಿಗೆ ನೀಡಲಾಗಿದೆ. ಆಗಸ್ಟ್ 1ರಿಂದ ಪೊಲೀಸರ ವೇತನ ಹೆಚ್ಚಳವಾಗಲಿದೆ.

ರಾಘವೇಂದ್ರ ಔರಾದ್ಕರ್ ವರದಿ ಅನ್ವಯ ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಅಪರಾಧ, ಗುಪ್ತದಳ, ಸಿಐಡಿ ಆಂತರಿಕ ಭದ್ರತೆ, ಜಿಲ್ಲಾ ವಿಶೇಷ ಘಟಕ, ವೈರ್ಲೆಸ್ ವಿಭಾಗ, ಕಂಪ್ಯೂಟರ್ ವಿಭಾಗ, ಅರಣ್ಯ ಘಟಕ, ಲೋಕಾಯುಕ್ತ ಹೀಗೆ ವಿವಿಧ ಘಟಕಗಳ 86 ಸಾವಿರ ಪೊಲೀಸರ ವೇತನ ಏರಿಕೆಯಾಗಲಿದೆ.
ಔರಾದ್ಕರ್ ವರದಿ ಜಾರಿಗೊಳಿಸುವಂತೆ ಪೊಲೀಸರು ಹಲವು ದಿನದಿಂದ ಒತ್ತಾಯಿಸುತ್ತಿದ್ದರು. ವರದಿ ಜಾರಿಯಾದರೆ ಪೊಲೀಸರ ಮೂಲ ವೇತನ ಹೆಚ್ಚಳವಾಗಲಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಔರಾದ್ಕರ್ ವರದಿ ಜಾರಿಗೆ ಒಪ್ಪಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಔರಾದ್ಕರ್ ವರದಿಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪೊಲೀಸರ ವೇತನ ಕಡಿಮೆ ಇದೆ. ಆದ್ದರಿಂದ, ರಾಜ್ಯದಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪೊಲೀಸರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆಗ ವೇತನ ಹೆಚ್ಚಳದ ಬಗ್ಗೆ ವರದಿ ನೀಡಲು ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು.











Click it and Unblock the Notifications