ನವೆಂಬರ್ 28ರ ಭಾರತ ಬಂದ್ ಊಹಾಪೋಹಕ್ಕೆ ತೆರೆಬಿತ್ತು
ಮೋದಿ ಸರಕಾರದ ನೋಟು ನಿಷೇಧ ಕ್ರಮವನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಕರೆನೀಡಿರುವ ಭಾರತ್ ಬಂದ್ ಅಥವಾ ಆಕ್ರೋಶ್ ದಿವಸ್ ರಾಜ್ಯದಲ್ಲಿ ನಡೆಯಲಿದೆಯೋ, ಇಲ್ಲವೋ ಎನ್ನುವ ಊಹಾಪೋಹಕ್ಕೆ ತೆರೆಬಿದ್ದಿದೆ.
ಧಾರವಾಡ, ನ 26: ಮೋದಿ ಸರಕಾರದ ನೋಟು ನಿಷೇಧ ಕ್ರಮವನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಕರೆನೀಡಿರುವ ಭಾರತ್ ಬಂದ್ ಅಥವಾ ಆಕ್ರೋಶ್ ದಿವಸ್ ರಾಜ್ಯದಲ್ಲಿ ನಡೆಯಲಿದೆಯೋ, ಇಲ್ಲವೋ ಎನ್ನುವ ಊಹಾಪೋಹಕ್ಕೆ ತೆರೆಬಿದ್ದಿದೆ.
ಭಾರತ ಬಂದ್ ಗೆ ರಾಜ್ಯ ಸರಕಾರ ಬೆಂಬಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ 'ಆಕ್ರೋಶ ದಿವಸ್' ಹೆಸರಿನಲ್ಲಿ ಕೇಂದ್ರ ಸರಕಾರದ ವಿರುದ್ದ ರಾಜ್ಯದೆಲ್ಲಡೆ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. (ಹಳೇ ನೋಟನ್ನು ಒಂದ್ರ ಮೇಲೊಂದು ಇಟ್ರೆ ಮೌಂಟ್ ಎವರೆಸ್ಟ್ ನಾಚುತ್ತೆ)
ನಗರದಲ್ಲಿ ಶುಕ್ರವಾರ (ನ 25) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಯಾವುದೇ ಪೂರ್ವತಯಾರಿ ಇಲ್ಲದೇ ನೋಟು ನಿಷೇಧಿಸಿ ಮೋದಿ ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿದ್ದಾರೆ.

500 ಮತ್ತು 1000 ರೂಪಾಯಿ ನೋಟನ್ನು ಅಮಾನ್ಯ ಮಾಡಿ 2000 ನೋಟನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದರಿಂದ ಚಿಲ್ಲರೆ ಸಮಸ್ಯೆ ಉಂಟಾಗಿದೆ.
ಐನೂರು ರೂಪಾಯಿಯ ಹೊಸ ನೋಟನ್ನು ಮೊದಲು ಕೇಂದ್ರ ಸರಕಾರ ಬಿಡುಗಡೆ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ, ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.
ನವೆಂಬರ್ 28ರಂದು ಅಧಿವೇಶನ ರದ್ದು ಮಾಡುವುದು ನಮ್ಮ ಸರಕಾರದ ನಿರ್ಧಾರವಲ್ಲ, ಅದು ಸ್ಪೀಕರ್ ನಿರ್ಣಯ. ಎಲ್ಲದನ್ನೂ ವಿರೋಧ ಮಾಡುವುದು ಬಿಜೆಪಿಯವರ ಅಭ್ಯಾಸ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೈಕಮಾಂಡ್ ಸೂಚನೆಯಂತೆ ಆಡಳಿತರೂಢ ಕಾಂಗ್ರೆಸ್ ರಾಜ್ಯದಲ್ಲಿ ಶತಾಯಗತಾಯ ಆಕ್ರೋಶ್ ದಿವಸ್ ಅನ್ನು ಯಶಸ್ವಿಗೊಳಿಸಲು ನಿರ್ಧರಿಸಿದೆ. ಬ್ಲಾಕ್ ಮಟ್ಟದಿಂದ ಹಿಡಿದು ರಾಜ್ಯದೆಲ್ಲಡೆ ಪ್ರತಿಭಟನೆ ತೀವ್ರಗೊಳಿಸಬೇಕೆಂದು ಎಐಸಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟ ಆದೇಶ ನೀಡಿದೆ.
ಜೆಡಿಎಸ್ ಬೆಂಬಲವಿಲ್ಲ: ನವೆಂಬರ್ 28ರಂದು ಭಾರತ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ. ನೋಟು ನಿಷೇಧಿಸಿ ಮೋದಿ ಸರಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೂ, ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications