ಅಕ್ಟೋಬರ್ 2ರಂದು ರಾಜ್ಯಾದ್ಯಂತ ಮಾತೃಪೂರ್ಣ ಯೋಜನೆಗೆ ಚಾಲನೆ
ಬೆಂಗಳೂರು, ಸೆಪ್ಟೆಂಬರ್ 28: ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ತಡೆಗಟ್ಟಿ ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ನಿಯಂತ್ರಿಸುವುದು ಮತ್ತು ತಾಯಿ ಮಗುವಿನ ಆರೋಗ್ಯದಲ್ಲಿ ಪೋಷಕಾಂಶಗಳ ಪ್ರಮಾಣವನ್ನು ತೀವ್ರಗತಿಯಲ್ಲಿ ಹೆಚ್ಚಿಸುವ ಯೋಜನೆ 'ಮಾತೃಪೂರ್ಣ.'
ಪೂರಕ ಪೌಷ್ಠಿಕ ಆಹಾರ ಒದಗಿಸುವ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟದ ಈ ಕಾರ್ಯಕ್ರಮವನ್ನು ಅಕ್ಟೋಬರ್ 2ರಂದು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ತಿಳಿಸಿದರು.
ಖಾಸಗಿ ಹೊಟೇಲ್ ನಲ್ಲಿ ಸೆ.27 ರಂದು ಮಾತೃಪೂರ್ಣ ಯೋಜನೆಯ ಕುರಿತು ಮಾಧ್ಯಮದವರಿಗೆ ಸಮಗ್ರ ಮಾಹಿತಿ ನೀಡುವ ಸಲುವಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
"ಈ ಯೋಜನೆಯಡಿ ರಾಜ್ಯದ 204 ಶಿಶು ಅಭಿವೃದ್ಧಿ ಯೋಜನೆಗಳಲ್ಲಿನ 12 ಲಕ್ಷ ಅರ್ಹ ಫಲಾನುಭವಿಗಳಿಗೆ 65,911 ಅಂಗನವಾಡಿ ಕೇಂದ್ರಗಳ ಮೂಲಕ ತಲುಪುವ ಗುರಿ ಹೊಂದಲಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯೆಂದು ನೋಂದಣಿ ಹೊಂದಿದ ತಕ್ಷಣದಿಂದ ಹೆರಿಗೆಯಾದ ಆರು ತಿಂಗಳವರೆಗಿನ ಬಾಣಂತಿಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ" ಎಂದು ಅವರು ಹೇಳಿದರು.
ಮಾತೃ ಪೂರ್ಣ ಯೋಜನೆಯ ಉದ್ದೇಶದ ಕುರಿತು ಉಮಾ ಮಹಾದೇವನ್ ನೀಡಿದ ಮಾಹಿತಿ ಇಲ್ಲಿದೆ.

ಪೂರಕ ಪೌಷ್ಟಿಕ ಆಹಾರ
ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಮಧ್ಯಾಹ್ನದ ಆಹಾರದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪ್ರತಿದಿನ 600 ಕ್ಯಾಲರಿಯಂತೆ ಮತ್ತು 18 ರಿಂದ 20 ಗ್ರಾಂ ಪ್ರೋಟಿನ್ ಒಳಗೊಂಡ ಆಹಾರವನ್ನು ವಾರದಲ್ಲಿ ಆರು ದಿನಗಳು ನೀಡಲಾಗುವುದು. ಗರ್ಭಿಣಿಯರು ಪ್ರತಿದಿನ ಊಟದಲ್ಲಿ 2580 ಕ್ಯಾಲರಿ, 78 ಪ್ರೋಟಿನ್ ಹಾಗೂ 1200 ಮೀ.ಗ್ರಾಂ ಕ್ಯಾಲ್ಷಿಯಂ ಸೇವಿಸುವುದು ಅವಶ್ಯವಿರುತ್ತದೆ. ಮುಂದುವರೆದು ಮಾತನಾಡಿದ ಅವರು ಈ ಕಾರ್ಯಕ್ರಮದಡಿ ನೀಡಲು ಉದ್ದೇಶಿಸಿರುವ ಮಧ್ಯಾಹ್ನದ ಪೌಷ್ಠಿಕ ಊಟದಲ್ಲಿ ಅನ್ನ, ಸಾಂಬರ್, ಪಲ್ಯದ ಜೊತೆ ಬೇಯಿಸಿದ ಮೊಟ್ಟೆ ಮತ್ತು 200 ಮೀ. ಲಿ. ಹಾಲು ಹಾಗೂ ಬೆಲ್ಲ ಹಾಗೂ ಕಡಲೆ ಬೀಜದಿಂದ ಮಾಡಿದ ಚಿಕ್ಕಿಯನ್ನು ತಿಂಗಳಿಗೆ 25 ದಿನ ನೀಡಲಾಗುವುದು. ಮೊಟ್ಟೆ ತಿನ್ನದ ಗರ್ಭಿಣಿ/ಬಾಣಂತಿಯರಿಗೆ ಮೊಳಕೆ ಭರಿಸಿದ ಕಾಳನ್ನು ನೀಡಲಾಗುವುದು.

ಪೂರ್ಣ ಪೌಷ್ಟಿಕ ಊಟ
ಇದರಿಂದಾಗಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಒಂದು ದಿನಕ್ಕೆ ಬೇಕಾಗುವ ಪ್ರೋಟಿನ್ ಮತ್ತು ಕ್ಯಾಲ್ಷಿಯಂ ಕ್ಯಾಲರಿ ಅಂಶಗಳಲ್ಲಿ ಸುಮಾರು 40-45% ಅಂಶಗಳಷ್ಟು ಈ ಒಂದು ಪೂರ್ಣ ಪೌಷ್ಠಿಕ ಊಟದಿಂದ ಒದಗಿಸಿದಂತಾಗುತ್ತದೆ. ಇದರ ಜೊತೆ ಕಬ್ಬಿಣ ಅಂಶದ ಮಾತ್ರೆಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಿ ಬೆಂಬಲಿಸಲಾಗುವುದು.

ಕುಟುಂಬದ ಯಾರಾದರೂ ಬಂದು ಊಟ ಕೊಂಡೊಯ್ಯಬಹುದು
ಇಲಾಖೆಯ ನಿರ್ದೇಶಕರಾದ ದೀಪಾ ಚೋಳನ್, ಮಾತನಾಡಿ, ಗರ್ಭಿಣಿ-ಬಾಣಂತಿಯರನ್ನು ಕೆಲವು ಕುಟುಂಬಗಳಲ್ಲಿ ಹೊರಬಿಡದ ಸಂದರ್ಭಗಳು ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ 45 ದಿನಗಳವರೆಗೆ ಕುಟುಂಬ ಸದಸ್ಯರು ಯಾರಾದರೂ ಟಿಫಿನ್ ಡಬ್ಬಿಯಲ್ಲಿ ಪೌಷ್ಠಿಕ ಆಹಾರವನ್ನು ಮನೆಗೆ ಕೊಂಡೊಯ್ಯಲು ಅವಕಾಶ ಒದಗಿಸಲಾಗಿದೆ ಎಂದರು.

ಗಾರ್ಮೆಂಟ್ಸ್ ನೌಕರರ ಕುರಿತೂ ಚಿಂತನೆ
ಗಾರ್ಮೆಂಟ್ಸ್ ಮತ್ತಿತರ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವಂತಹ ಗರ್ಭಿಣಿಯರು ಮಧ್ಯಾಹ್ನ ಪೂರ್ಣ ಪೌಷ್ಠಿಕ ಆಹಾರ ಸೇವಿಸಲು ಅನುವಾಗುವಂತೆ ಒಂದು ಗಂಟೆಗಳ ಕಾಲ ಬಿಡುವು ನೀಡಲು ಅನುಮತಿ ನೀಡುವಂತೆ ಸಂಸ್ಥೆಯ ಮಾಲೀಕರ ಜೊತೆ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. ಮೂವತ್ತು ವಿಷಯಗಳ ಕುರಿತಂತೆ ವಾರದಲ್ಲಿ ಒಂದು ದಿನ ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಸಮಾಲೋಚನೆ ನಡೆಸಲಾಗುವುದು.

ಅಂಮಗನವಾಡಿಗಳಲ್ಲಿಶೌಚಾಲಯ ನಿರ್ಮಾಣ
ಅಂಗನವಾಡಿಗಳಲ್ಲಿ ನೈರ್ಮಲ್ಯ ಕಾಪಾಡುವ ಹಿನ್ನೆಲೆಯಲ್ಲಿ ಈ ವರ್ಷಾಂತ್ಯದಲ್ಲಿ ಎಲ್ಲ ಅಂಗನವಾಡಿಗಳಲ್ಲಿ ಶೌಚಾಲಯವನ್ನು ನಿರ್ಮಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಯುನಿಸೆಫ್ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.. ಕಾರ್ಯಕ್ರಮದಲ್ಲಿ ಯುನಿಸೆಫ್ನ ಪೌಷ್ಠಿಕ ಆಹಾರ ತಜ್ಞೆ ಡಾ. ಖಯಾತಿ ತಿವಾರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ರಾಜ್ ಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications