ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ!
ಬೆಂಗಳೂರು: ಬಿಬಿಎಂಪಿ ಸದಸ್ಯರೇ ಇಲ್ಲದೆ ಬೆಂಗಳೂರಿನ ಜನ ಒದ್ದಾಡುತ್ತಿದ್ದಾರೆ. ಯಾವ ಸಮಸ್ಯೆ ಎದುರಾದರೂ ಕಷ್ಟ ಹೇಳಿಕೊಳ್ಳಲು ಸ್ಥಳೀಯ ಪ್ರತಿನಿಧಿ ಇಲ್ಲ. ಹೀಗಾಗಿ BBMPಗೆ ಚುನಾವಣೆ ನಡೆಸಲು ನೂತನ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನ ಗೆದ್ದು, ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ಗೆ ಬಿಬಿಎಂಪಿ ಚುನಾವಣೆ ಗೆಲ್ಲುವ ಗುರಿ ಹೊಂದಿದೆ. ಹೀಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಹೊಸ ಸರ್ಕಾರಕ್ಕೆ BBMP ಚುನಾವಣೆ ಪ್ರತಿಷ್ಠೆಯ ಪಣವಾಗಿಯೂ ಮಾರ್ಪಡುತ್ತಿದೆ. ಇದೇ ಕಾರಣಕ್ಕೆ ಇಂದು ಡಿಸಿಎಂ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಮಾಜಿ ಮೇಯರ್ಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಗೆಲುವೇ ಕಾಂಗ್ರೆಸ್ ನಾಯಕರ ಮಂತ್ರ!
ತಮ್ಮ ವಿಶೇಷ ಸಭೆ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಮೇಯರ್ ಗಳೊಂದಿಗೆ ಸಭೆ ನಡೆಸಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಬರಲಿರುವ ಬಿಬಿಎಂಪಿ ಚುನಾವಣೆಗೆ ಮಾಡಿಕೊಳ್ಳಬೇಕಾದ ತಯಾರಿಗಳ ಕುರಿತು ಚರ್ಚಿಸಲಾಯಿತು, ಎಂದು ತಿಳಿಸಿದ್ದಾರೆ. ಈ ಮೂಲಕ ಬಿಬಿಎಂಪಿ ಚುನಾವಣೆಗೆ ಕ್ಷಣಗಣನೆ ಆರಂಭ ಆದಂತಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಮೇಯರ್ ಗಳೊಂದಿಗೆ ಸಭೆ ನಡೆಸಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಬರಲಿರುವ ಬಿಬಿಎಂಪಿ ಚುನಾವಣೆಗೆ ಮಾಡಿಕೊಳ್ಳಬೇಕಾದ ತಯಾರಿಗಳ ಕುರಿತು ಚರ್ಚಿಸಲಾಯಿತು. pic.twitter.com/eJ2BP0Qn3m
— DK Shivakumar (@DKShivakumar) June 1, 2023
ರಾಜಧಾನಿ ಸಮಸ್ಯೆಗಳಿಗೆ ಸಿಗುತ್ತಾ ಮುಕ್ತಿ?
2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದಿತ್ತು. ಹೀಗೆ ಅಧಿಕಾರಕ್ಕೆ ಬಂದ BBMP ಆಡಳಿತ 2020ರಲ್ಲೇ ತನ್ನ ಅಧಿಕಾರ ಅವಧಿ ಮುಗಿಸಿದೆ. ಬಿಬಿಎಂಪಿ ಅಧಿಕಾರವಧಿ ಮುಗಿದು ಹೋಗಿ ಬರೋಬ್ಬರಿ 3 ವರ್ಷ ಕಳೆದಿದ್ದು ಬೆಂಗಳೂರಿಗರ ತಾಳ್ಮೆ ಪರೀಕ್ಷೆ ಮಾಡಿದಂತಿದೆ. ಅದ್ರಲ್ಲೂ ಬೆಂಗಳೂರಿನ ವಾರ್ಡ್ಗಳಲ್ಲಿ BBMP ಸದಸ್ಯರು ಇಲ್ಲದೇ ಇರುವುದು ರಾಜಧಾನಿಯ ಸಮಸ್ಯೆ ಡಬಲ್ ಮಾಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬೇಗ ಬಿಬಿಎಂಪಿಗೆ ಚುನಾವಣೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

ಬಿಬಿಎಂಪಿ 5 ಪಾಲಿಕೆ ಆಗುತ್ತಾ?
ಅಷ್ಟಕ್ಕೂ ಬಿ.ಎಸ್.ಪಾಟೀಲ್ ವರದಿ ಹೇಳಿದ್ದಂತೆ ಬಿಬಿಎಂಪಿ 5 ಪಾಲಿಕೆಯಾಗಿ ವಿಂಗಡಿಸಿ, ಪ್ರತಿ ಪಾಲಿಕೆಗೆ ಪ್ರತ್ಯೇಕ ಮೇಯರ್ & ಆಯುಕ್ತರನ್ನು ನೇಮಿಸಲು ಸಲಹೆ ನೀಡಲಾಗಿತ್ತು. ಈ ನಡುವೆ ಐದೂ ಪಾಲಿಕೆ ನೋಡಿಕೊಳ್ಳಲು ಜನ ಆಯ್ಕೆ ಮಾಡುವ 5 ವರ್ಷ ಅಧಿಕಾರವಿರುವ ಮೇಯರ್ ಇರಬೇಕು ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿತ್ತು. ಮೇಯರ್ ಇನ್ಕೌನ್ಸಿಲ್ ಮಾದರಿ ಆಡಳಿತ ಜಾರಿಗೊಳಿಸಲು ಸಮಿತಿ ಶಿಫಾರಸು ಮಾಡಿತ್ತು.
2010ರಲ್ಲಿ ದೊಡ್ಡದಾಗಿತ್ತು ಬಿಬಿಎಂಪಿ ವ್ಯಾಪ್ತಿ!
ಪಾಟೀಲ್ ಅವರ ಸಮಿತಿ ವರದಿಯಂತೆ ಬಿಬಿಎಂಪಿ ಪುನಾರಚನೆ ಮಾಡದಿದ್ದರೆ, 2010ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ವಾರ್ಡ್ ಪ್ರದೇಶಗಳನ್ನ ಗ್ರೇಟರ್ ಬೆಂಗಳೂರು ಎಂದು ಪರಿಗಣಿಸಿ. ಅಲ್ಲಿ ಪ್ರತ್ಯೇಕ ಪಾಲಿಕೆ ರಚಿಸಿ ಪ್ರತ್ಯೇಕ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಈ ನಿರ್ಧಾರದಿಂದ ಬೆಂಗಳೂರಿಗೆ ಒಟ್ಟು ಇಬ್ಬರು ಮೇಯರ್ ಮತ್ತು ಆಯುಕ್ತರು ದೊರೆಯಲಿದ್ದು, ಆಡಳಿತ ನಡೆಸಲು ಸುಲಭವಾಗಲಿದೆ ಎಂಬ ಬಗ್ಗೆ ಚಿಂತನೆ ನಡೆದಿತ್ತು.

243 ವಾರ್ಡ್ ರಚಿಸಿರುವ ಬಿಜೆಪಿ ಸರ್ಕಾರ
ಅಂದಹಾಗೆ ಬಿಬಿಎಂಪಿ ಪುನಾರಚನೆ ಅಥವಾ ಗ್ರೇಟರ್ ಬೆಂಗಳೂರು ರಚಿಸುವ ಪ್ರಕ್ರಿಯೆ ಇದೀಗ ವಿಳಂಬವಾಗುವ ಪರಿಸ್ಥಿತಿ ಎದುರಾದರೆ, ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಿಸಿ ರಚಿಸಿದ್ದ 243 ವಾರ್ಡ್ಗಳಿಗೇ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ವಾರ್ಡ್ ಮರು ವಿಂಗಡಣೆ ವೇಳೆ ಕಾಂಗ್ರೆಸ್ ಮತಗಳನ್ನ ವಿಭಜನೆ ಮಾಡಿದ್ದ ಅಂಶ ಕೈಬಿಟ್ಟು, ಮತ್ತೊಮ್ಮೆ ಮರು ವಿಂಗಡಿಸುವ ಪ್ರಕ್ರಿಯೆ ನಡೆಸುವ ಸಾಧ್ಯತೆ ಕೂಡ ಇದೆ.
198 ವಾರ್ಡ್ ಉಳಿಸಿಕೊಳ್ಳಲು ಲೆಕ್ಕಾಚಾರ?
ಇಷ್ಟೆಲ್ಲಾ ಚರ್ಚೆಯ ನಡುವೆ, ಈ ಹಿಂದೆ ಅಂದರೆ 2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಇದ್ದ 198 ವಾರ್ಡ್ಗಳನ್ನೇ ಉಳಿಸಿಕೊಳ್ಳುವ ಯೋಜನೆ ಕೂಡ ಈಗ ಸಿದ್ಧವಾಗಿದೆ. ಏಕೆಂದರೆ ಈಗ ಹೊಸದಾಗಿ ವಾರ್ಡ್ ವಿಂಗಡಣೆ ಅಥವಾ ಬಿ.ಎಸ್.ಪಾಟೀಲ್ ವರದಿ ಅನುಷ್ಠಾನದ ಬಗ್ಗೆ ಚಿಂತಿಸುತ್ತಾ ಕೂತರೆ ಬಿಬಿಎಂಪಿ ಚುನಾವಣೆ ಮತ್ತಷ್ಟು ವರ್ಷ ಮುಂದಕ್ಕೆ ಹೋಗಬಹುದು. ಈಗಾಗಲೇ 3 ವರ್ಷ ವೇಸ್ಟ್ ಆಗಿದ್ದು, ತಕ್ಷಣಕ್ಕೆ ಚುನಾವಣೆ ನಡೆಸಲು ಬೇಕಾದ ಕ್ರಮ ಕೈಗೊಳ್ಳಲು ಹೊಸ ಸರ್ಕಾರ ಮುಂದಾಗುತ್ತಿದೆ.












Click it and Unblock the Notifications