ಬಿಬಿಎಂಪಿ ಚುನಾವಣೆ ನೆಪದಲ್ಲಿ ಬೆಂಗಳೂರು ಆಗುತ್ತಾ ಪೀಸ್ ಪೀಸ್?
ಬೆಂಗಳೂರು: ಕಾಂಗ್ರೆಸ್ ಹೊಸ ಸರ್ಕಾರ ರಚಿಸಿ & ಸಂಪುಟ ವಿಸ್ತರಣೆ ಮಾಡಿ ಒಂದೆರಡು ವಾರ ಕಳೆದಿದೆ. ಆಗಲೇ ಬಿಬಿಎಂಪಿ ಚುನಾವಣೆ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಅದರಲ್ಲೂ ಬಿಬಿಎಂಪಿ ಚುನಾವಣೆ ಹೆಸರಲ್ಲಿ ಬೆಂಗಳೂರನ್ನು ಪೀಸ್ ಪೀಸ್ ಮಾಡಲಾಗುತ್ತಾ? ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆ ಕನ್ನಡಿಗರನ್ನ ಕಾಡುತ್ತಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ ಓದಿ.
2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದಿತ್ತು. ಹೀಗೆ ಅಧಿಕಾರಕ್ಕೆ ಬಂದ BBMP ಆಡಳಿತ 2020ರಲ್ಲೇ ತನ್ನ ಅಧಿಕಾರ ಅವಧಿ ಮುಗಿಸಿದೆ. ಬಿಬಿಎಂಪಿ ಅಧಿಕಾರವಧಿ ಮುಗಿದು ಹೋಗಿ ಬರೋಬ್ಬರಿ 3 ವರ್ಷ ಕಳೆದಿದ್ದು ಬೆಂಗಳೂರಿಗರ ತಾಳ್ಮೆ ಪರೀಕ್ಷೆ ಮಾಡಿದಂತಿದೆ. ಅದ್ರಲ್ಲೂ ಬೆಂಗಳೂರಿನ ವಾರ್ಡ್ಗಳಲ್ಲಿ BBMP ಸದಸ್ಯರು ಇಲ್ಲದೇ ಇರುವುದು ರಾಜಧಾನಿಯ ಸಮಸ್ಯೆ ಡಬಲ್ ಮಾಡಿದೆ. ಹಾಗಾದ್ರೆ ಬಿಬಿಎಂಪಿ ಚುನಾವಣೆ ಯಾವಾಗ ನಡೆಯುತ್ತೆ? ತಿಳಿಯೋಣ ಬನ್ನಿ.

ಬಿಬಿಎಂಪಿ ಚುನಾವಣೆಗೆ ಬಿಜೆಪಿ ಹಿಂದೇಟು ಹಾಕಿದ್ದೇಕೆ?
ಬಹುಶಃ 2023ರ ವಿಧಾನಸಭೆ ಚುನಾವಣೆ ಸೋಲನ್ನು ಮೊದಲೇ ಊಹಿಸಿದ್ದ ರಾಜ್ಯ ಬಿಜೆಪಿ ನಾಯಕರು ಬಿಬಿಎಂಪಿ ಚುನಾವಣೆಗೆ ಸಿದ್ಧವಾಗಿರಲಿಲ್ಲ ಅಂತಾ ಕಾಣುತ್ತದೆ. ಈ ವಿಚಾರಕ್ಕೆ ಬಿಬಿಎಂಪಿ ಸದಸ್ಯರು ಪಕ್ಷ ಮರೆತು ಕೋರ್ಟ್ಗೆ ಹೋಗಿ ಆದೇಶ ತಂದರೂ ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಹಿಂದೇಟು ಹಾಕಿತ್ತು. ಆದರೆ ಇದೀಗ ಬಿಜೆಪಿಯ ಸೋಲು ಹೊಸ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ಗೆ ಬಿಬಿಎಂಪಿ ಚುನಾವಣೆ ಸವಾಲನ್ನು ಶಿಫ್ಟ್ ಮಾಡಿ ಹೋಗಿದೆ. ಹಾಗಾದ್ರೆ ಹೊಸ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸುತ್ತಾ?
ಬೆಂಗಳೂರು ಡಿವೈಡ್ ಮಾಡುತ್ತಾ ಚುನಾವಣೆ?
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸಾಗಿದೆ. ಅದರಲ್ಲೂ BBMP ಚುನಾವಣೆ ನಡೆಸೋಕೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುತ್ತಿದ್ದಂತೆ 2015ರ ಬಿಬಿಎಂಪಿ ಪುನಾರಚನಾ ವರದಿ ಕುರಿತ ಚರ್ಚೆ ಮತ್ತೆ ಶುರುವಾಗಿದೆ. ಏಕೆಂದರೆ ಈ ವರದಿ ಬಿಬಿಎಂಪಿ ಆಡಳಿತದ ಅನುಕೂಲಕ್ಕಾಗಿ ಬೆಂಗಳೂರನ್ನ ಡಿವೈಡ್ ಮಾಡಲು ಸಲಹೆ ನೀಡಿತ್ತು. ಈಗ ಇದೇ ಕಾರಣಕ್ಕೆ ಮತ್ತೆ ಬೆಂಗಳೂರು ಡಿವೈಡ್ ಆಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.
ಕಳೆದ ಚುನಾವಣೆಯಲ್ಲಿ ಸಿಕ್ಕಿತ್ತಾ ಒಳಪೆಟ್ಟು?
ಅಷ್ಟಕ್ಕೂ 2018ರ ವಿಧಾನಸಭೆ ಚುನಾವಣೆಯಲ್ಲಿ ಈ ವಿಚಾರ ಕೂಡ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಒಳಪೆಟ್ಟು ನೀಡಿತ್ತು ಅನ್ನೋ ಆರೋಪ ಇದೆ. ಹೀಗಾಗಿ ಈ ವಿಚಾರದಲ್ಲಿ ಈ ಬಾರಿ ಸೂಕ್ಷ್ಮವಾಗಿ ನಡೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬಿಜೆಪಿ ಅವಧಿಯಲ್ಲಿ ನಡೆದಿದ್ದ ವಾರ್ಡ್ ಮರು ವಿಂಗಡಣೆ ಬಿಟ್ಟು ಬೇರೆಯದ್ದೇ ಪ್ಲ್ಯಾನ್ ಮಾಡುತ್ತಿರುವ ಮಾತು ಕೇಳಿಬಂದಿದೆ. ಹಾಗಾದ್ರೆ ಆ ಪ್ಲ್ಯಾನ್ ಏನು? ಸಂಪೂರ್ಣ ವಿವರ ಇಲ್ಲಿ ತಿಳಿಯೋಣ.

ಹಳೇ ವರದಿ ಬಗ್ಗೆಯೂ ಚಿಂತನೆ
ಬಿಬಿಎಂಪಿ ಚುನಾವಣೆಗೆ ಇರುವ ತೊಡಕು ನಿವಾರಿಸಿ, ಹಿಂದಿನ ಸರ್ಕಾರದ ವಾರ್ಡ್ ವಿಂಗಡಣೆ ಕ್ರಮ ಪರಿಶೀಲಿಸಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ಕೂಡ ರಚನೆಯಾಗಿದೆ. ಸಮಿತಿಯಲ್ಲಿ ಬೆಂಗಳೂರಿನ ಶಾಸಕರು, ಮಾಜಿ ಮೇಯರ್ ಸದಸ್ಯರಾಗಿದ್ದಾರೆ. ಜತೆಗೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಲ್ಲಿಕೆಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ನೀಡಿರುವ ಬಿಬಿಎಂಪಿ ಪುನಾರಚನೆ ವರದಿ ಪರಿಶೀಲನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ.
ಬಿ.ಎಸ್.ಪಾಟೀಲ್ ವರದಿ ಹೇಳಿದ್ದು ಏನು?
ಅಷ್ಟಕ್ಕೂ ಬಿಬಿಎಂಪಿ ವ್ಯಾಪ್ತಿ ಹೆಚ್ಚಾಗಿದ್ದು, ಸ್ಥಳೀಯ ಸಂಸ್ಥೆಯಿಂದ ಜನರಿಗೆ ಸೌಕರ್ಯವನ್ನ ಒದಗಿಸಲು ಕಷ್ಟವಾಗುತ್ತದೆ. ಹೀಗಾಗಿ ಬಿಬಿಎಂಪಿ ವ್ಯವಸ್ಥೆಯಲ್ಲಿ ಯಾವೆಲ್ಲ ಬದಲಾವಣೆ ಮಾಡಬಹುದು ಎಂಬ ಬಗ್ಗೆ ಚಿಂತಿಸಲು ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದ ಸಂದರ್ಭ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಆಗ ಸಮಿತಿ 2015ರಲ್ಲಿ ತನ್ನ ವರದಿ ನೀಡಿತ್ತು. ವರದಿ ವಿವರ ಇಲ್ಲಿದೆ ಓದಿ.
ಬಿಬಿಎಂಪಿ 5 ಪಾಲಿಕೆ ಆಗುತ್ತಾ?
ಅಷ್ಟಕ್ಕೂ ಬಿ.ಎಸ್.ಪಾಟೀಲ್ ವರದಿ ಹೇಳಿದ್ದಂತೆ ಬಿಬಿಎಂಪಿ 5 ಪಾಲಿಕೆಯಾಗಿ ವಿಂಗಡಿಸಿ, ಪ್ರತಿ ಪಾಲಿಕೆಗೆ ಪ್ರತ್ಯೇಕ ಮೇಯರ್ & ಆಯುಕ್ತರನ್ನು ನೇಮಿಸಲು ಸಲಹೆ ನೀಡಲಾಗಿತ್ತು. ಈ ನಡುವೆ ಐದೂ ಪಾಲಿಕೆ ನೋಡಿಕೊಳ್ಳಲು ಜನ ಆಯ್ಕೆ ಮಾಡುವ 5 ವರ್ಷ ಅಧಿಕಾರವಿರುವ ಮೇಯರ್ ಇರಬೇಕು ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿತ್ತು. ಮೇಯರ್ ಇನ್ಕೌನ್ಸಿಲ್ ಮಾದರಿ ಆಡಳಿತ ಜಾರಿಗೊಳಿಸಲು ಸಮಿತಿ ಶಿಫಾರಸು ಮಾಡಿತ್ತು.
2010ರಲ್ಲಿ ದೊಡ್ಡದಾಗಿತ್ತು ಬಿಬಿಎಂಪಿ ವ್ಯಾಪ್ತಿ!
ಪಾಟೀಲ್ ಅವರ ಸಮಿತಿ ವರದಿಯಂತೆ ಬಿಬಿಎಂಪಿ ಪುನಾರಚನೆ ಮಾಡದಿದ್ದರೆ, 2010ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ವಾರ್ಡ್ ಪ್ರದೇಶಗಳನ್ನ ಗ್ರೇಟರ್ ಬೆಂಗಳೂರು ಎಂದು ಪರಿಗಣಿಸಿ. ಅಲ್ಲಿ ಪ್ರತ್ಯೇಕ ಪಾಲಿಕೆ ರಚಿಸಿ ಪ್ರತ್ಯೇಕ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಈ ನಿರ್ಧಾರದಿಂದ ಬೆಂಗಳೂರಿಗೆ ಒಟ್ಟು ಇಬ್ಬರು ಮೇಯರ್ ಮತ್ತು ಆಯುಕ್ತರು ದೊರೆಯಲಿದ್ದು, ಆಡಳಿತ ನಡೆಸಲು ಸುಲಭವಾಗಲಿದೆ ಎಂಬ ಬಗ್ಗೆ ಚಿಂತನೆ ನಡೆದಿತ್ತು.
243 ವಾರ್ಡ್ ರಚಿಸಿರುವ ಬಿಜೆಪಿ ಸರ್ಕಾರ
ಅಂದಹಾಗೆ ಬಿಬಿಎಂಪಿ ಪುನಾರಚನೆ ಅಥವಾ ಗ್ರೇಟರ್ ಬೆಂಗಳೂರು ರಚಿಸುವ ಪ್ರಕ್ರಿಯೆ ಇದೀಗ ವಿಳಂಬವಾಗುವ ಪರಿಸ್ಥಿತಿ ಎದುರಾದರೆ, ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಿಸಿ ರಚಿಸಿದ್ದ 243 ವಾರ್ಡ್ಗಳಿಗೇ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ವಾರ್ಡ್ ಮರು ವಿಂಗಡಣೆ ವೇಳೆ ಕಾಂಗ್ರೆಸ್ ಮತಗಳನ್ನ ವಿಭಜನೆ ಮಾಡಿದ್ದ ಅಂಶ ಕೈಬಿಟ್ಟು, ಮತ್ತೊಮ್ಮೆ ಮರು ವಿಂಗಡಿಸುವ ಪ್ರಕ್ರಿಯೆ ನಡೆಸುವ ಸಾಧ್ಯತೆ ಕೂಡ ಇದೆ.
198 ವಾರ್ಡ್ ಉಳಿಸಿಕೊಳ್ಳಲು ಲೆಕ್ಕಾಚಾರ?
ಇಷ್ಟೆಲ್ಲಾ ಚರ್ಚೆಯ ನಡುವೆ, ಈ ಹಿಂದೆ ಅಂದರೆ 2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಇದ್ದ 198 ವಾರ್ಡ್ಗಳನ್ನೇ ಉಳಿಸಿಕೊಳ್ಳುವ ಯೋಜನೆ ಕೂಡ ಈಗ ಸಿದ್ಧವಾಗಿದೆ. ಏಕೆಂದರೆ ಈಗ ಹೊಸದಾಗಿ ವಾರ್ಡ್ ವಿಂಗಡಣೆ ಅಥವಾ ಬಿ.ಎಸ್.ಪಾಟೀಲ್ ವರದಿ ಅನುಷ್ಠಾನದ ಬಗ್ಗೆ ಚಿಂತಿಸುತ್ತಾ ಕೂತರೆ ಬಿಬಿಎಂಪಿ ಚುನಾವಣೆ ಮತ್ತಷ್ಟು ವರ್ಷ ಮುಂದಕ್ಕೆ ಹೋಗಬಹುದು. ಈಗಾಗಲೇ 3 ವರ್ಷ ವೇಸ್ಟ್ ಆಗಿದ್ದು, ತಕ್ಷಣಕ್ಕೆ ಚುನಾವಣೆ ನಡೆಸಲು ಬೇಕಾದ ಕ್ರಮ ಕೈಗೊಳ್ಳಲು ಹೊಸ ಸರ್ಕಾರ ಮುಂದಾಗುತ್ತಿದೆ.
ಒಟ್ನಲ್ಲಿ ಈಗಾಗಲೇ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿರುವಂತೆ ಬಿಬಿಎಂಪಿ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಈ ವರ್ಷದ ಅಂತ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯೋದು ಬಹುತೇಕ ಗ್ಯಾರಂಟಿ. ಇದರ ನಡುವೆ ಟಿಕೆಟ್ ಆಕಾಂಕ್ಷಿಗಳು ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಓಡಾಟ ಜೋರು ಮಾಡಿದ್ದು, ಬೆಂಗಳೂರಿಗರು ಮತ್ತೊಂದು ಚುನಾವಣೆಗೆ ಸಜ್ಜಾಗಬೇಕಿದೆ.












Click it and Unblock the Notifications