10,000 ಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಪರವಾನಗಿ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು, ಅಕ್ಟೋಬರ್ 22: ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿ ವರ್ಧಕ ಪರವಾನಗಿಯನ್ನು ಬಿಜೆಪಿ ನೇತೃತ್ವದ ಸರ್ಕಾರ ನೀಡಿದೆ.
ಆಜಾನ್(ಮುಸ್ಲಿಮರು ನಡೆಸುವ ಪ್ರಾರ್ಥನೆ) ಕೂಗಲು ಧ್ವನಿ ವರ್ಧಕಗಳಿಗೆ ಪರವಾನಗಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 10,889 ಮಸೀದಿಗಳಿಗೆ ಧ್ವನಿ ವರ್ಧಕ ಬಳಸಲು ಪರವಾನಗಿ ನೀಡಿದೆ. ಈ ಕುರಿತು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಈ ವರ್ಷದ ಆರಂಭದಲ್ಲಿ ಧ್ವನಿ ವರ್ಧಕಗಳನ್ನು ನಿಷೇಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಕೋಮು ಧ್ರುವೀಕರಣಕ್ಕಾಗಿ ತೀವ್ರ ಪ್ರಚಾರ ಮಾಡಲಾಗಿತ್ತು. ಆಜಾನ್ ವಿರುದ್ಧ ಹನುಮಾನ್ ಚಾಲೀಸಾ ಪಠಿಸುವ ಯತ್ನವನ್ನೂ ಕೆಲ ಸಂಘಟನೆಗಳು ಮಾಡಿದ್ದವು.

ಪೊಲೀಸರು ನೀಡುವ ಪ್ರತಿ ಪರವಾನಗಿಗೆ 450 ರುಪಾಯಿ ಪಾವತಿ ಮಾಡಬೇಕು. ಇದನ್ನು ರಾಜ್ಯದ 10,000 ಕ್ಕೂ ಹೆಚ್ಚು ಮಸೀದಿಗಳು ಹಾಗೂ 17,850 ಸಂಸ್ಥೆಗಳಿಗೆ ನೀಡಲಾಗಿದೆ. ಈ ಪರವಾನಗಿಯು 2 ವರ್ಷ ಮಾನ್ಯತೆ ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಡೆಕ್ಕನ್ ಹೆರಾಲ್ಡ್ ಪಡೆದಿರುವ ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ಧ್ವನಿ ವರ್ಧಕ ಪರವಾನಗಿಗಳನ್ನು ರಾಜಧಾನಿ ಬೆಂಗಳೂರಿನಲ್ಲಿ (1,841 ) ನೀಡಲಾಗಿದೆ. ಇದರಲ್ಲಿ ಮಸೀದಿಗಳು, ದೇವಾಲಯಗಳು, ಚರ್ಚ್ಗಳು ಹಾಗೂ ರೆಸ್ಟೋರೆಂಟ್ಗಳು ಸೇರಿವೆ.
ವಿಜಯಪುರದಲ್ಲಿ ಅತಿ ಹೆಚ್ಚು ಮಸೀದಿಗಳಿಗೆ ಧ್ವನಿ ವರ್ಧಕ(744) ಪರವಾನಗಿ ನೀಡಲಾಗಿದೆ.
ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಬಳಕೆಯನ್ನು ವಿರೋಧಿಸಿ ಈ ವರ್ಷದ ಆರಂಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಮಸೀದಿಗಳು ಬೆಳಿಗ್ಗೆ 6 ಗಂಟೆಗೂ ಮೊದಲು ಧ್ವನಿ ವರ್ಧಕಗಳನ್ನು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ನಿರ್ದೇಶನವನ್ನು ಮಸೀದಿಗಳು ಉಲ್ಲಂಘಿಸುತ್ತಿವೆ ಎಂದು ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದವು. ಆಜಾನ್ಗೆ ಪ್ರತಿಯಾಗಿ ದೇವಾಲಯಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ಹಿಂದು ಪರ ಸಂಘಟನೆಗಳು ಯತ್ನಿಸಿದ್ದವು.

ಈ ಒತ್ತಡಕ್ಕೆ ಮಣಿದಿದ್ದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಈ ವರ್ಷದ ಮೇ ತಿಂಗಳಲ್ಲಿ ಸುತ್ತೋಲೆ ಹೊರಡಿಸಿತ್ತು. ರಾಜ್ಯದ ಧ್ವನಿ ವರ್ಧಕ ಬಳಕೆದಾರರಿಗೆ ಲಿಖಿತ ರೂಪದಲ್ಲಿ ಅನುಮತಿ ಪಡೆಯುವಂತೆ ಸೂಚಿಸಿತ್ತು. ಪರವಾನಗಿ ನೀಡಲು ಸಮಿತಿಯನ್ನು ರಚಿಸಲಾಗಿತ್ತು.
ರಾಜ್ಯ ಸರ್ಕಾರ ಧ್ವನಿ ವರ್ಧಕಗಳಿಗೆ ಪರವಾನಗಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, 'ಮಸೀದಿಗಳಿಗೆ ಧ್ವನಿ ವರ್ಧಕಗಳನ್ನು ಬಳಸಲು ಸರ್ಕಾರ ಅವಕಾಶ ನೀಡಿದೆ. ಇದು ಆಜಾನ್ ವಿರುದ್ಧ ಹಿಂದೂ ಸಂಘಟನೆಗಳು ಮಾಡಿದ ಅಭಿಯಾನದ ವೈಫಲ್ಯವಲ್ಲ' ಎಂದು ಹೇಳಿದ್ದಾರೆ.
ನಿಯಮಗಳನ್ನು ಅನುಸರಿಸಬೇಕೆಂದು ನಾವು ಹೇಳಿದ್ದೆವು. ಧ್ವನಿ ವರ್ಧಕಗಳ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಈ ಆದೇಶಗಳನ್ನು ಎಲ್ಲರೂ ಅನುಸರಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದ್ದಾರೆ.
ಧ್ವನಿ ವರ್ಧಕವನ್ನು ಬಳಸುವ ಸಾರ್ವಜನಿಕ ಸ್ಥಳದ ವ್ಯಾಪ್ತಿಯಲ್ಲಿ ಶಬ್ದದ ಮಟ್ಟವು 10 ಡೆಸಿಬಲ್ಗಳನ್ನು ಮೀರಬಾರದು ಎಂದು ಮೇ ತಿಂಗಳಲ್ಲಿ ಸುತ್ತೋಲೆ ಹೊರಡಿಸಲಾಗಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್, ಸರ್ಕಾರ ತಾರತಮ್ಯ ಮಾಡದೆ ಪರವಾನಗಿ ನೀಡಿದೆ ಎಂದು ಹೇಳಿದ್ದಾರೆ.
'ನಿಗದಿತ ಧ್ವನಿ ಮಟ್ಟವನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ನಾವು ತಿಳಿಯಬೇಕಿದೆ. ಧ್ವನಿ ವರ್ಧಕಗಳು ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಾಗೂ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತವೆ' ಎಂದು ಅವರು ತಿಳಿಸಿದ್ದಾರೆ.
'ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications