ಕೋಲಾರ ಜೆಡಿಎಸ್ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಕಾಂಗ್ರೆಸ್ಗೆ ಸೇರುವ ಸಾಧ್ಯತೆ- ಸಿದ್ದರಾಮಯ್ಯಗೆ ಮತ್ತಷ್ಟು ಸಲೀಸಾದ ದಾರಿ
ಕೋಲಾರ, ಮಾರ್ಚ್ 03: ಮೈಸೂರಿನ ( Mysuru ) ವರುಣಾದಿಂದ ಟಿಕೆಟ್ ಪಡೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ಕೋಲಾರ ( Kolar ) ಕ್ಷೇತ್ರದಿಂದಲೂ ಸ್ಪರ್ಧಿಸಲು ಬಯಸಿದ್ದಾರೆ. ಸಿದ್ದರಾಮಯ್ಯನವರಿಗೆ ಜೆಡಿಎಸ್ನ ( JDS ) ಸಿಎಂಆರ್ ಶ್ರೀನಾಥ್ ಪೈಪೋಟಿ ಒಡ್ಡುವ ಸಾಧ್ಯತೆ ಇದೆ. ಆದರೆ, ಕೋಲಾರ ಜೆಡಿಎಸ್ನಲ್ಲಿ ಭಾರೀ ಭಿನ್ನಮತ ಸ್ಪೋಟಗೊಂಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಕೋಲಾರ ಜೆಡಿಎಸ್ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಶ್ರೀನಾಥ್ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ತಾಲೂಕಿನ ವೇಮಗಲ್ನಲ್ಲಿ ಭಾನುವಾರ ಸಭೆ ನಡೆಸಿರುವ ಕುರ್ಕಿ ರಾಜೇಶ್ವರಿ, ಶ್ರೀನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿರುವ ಶ್ರೀನಾಥ್ ಮೂಲ ಜೆಡಿಎಸ್ನವರನ್ನು ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುರ್ಕಿ ರಾಜೇಶ್ವರಿ ನೇತೃತ್ವದಲ್ಲಿ ನೂರಾರು ಮಂದಿ ಜಮಾಯಿಸಿ ಶ್ರೀನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಲಾರ ತಾಲ್ಲೂಕಿನ ನರಸಾಪುರ ಹಾಗೂ ಕ್ಯಾಲನೂರಿನಲ್ಲಿ ಪ್ರಭಾವಿಯಾಗಿರುವ ರಾಜೇಶ್ವರಿ ಅವರ ಬಂಡಾಯದ ಬಿಸಿ ಜೆಡಿಎಸ್ಗೆ ತಟ್ಟಲಿದೆ. ರಾಜೇಶ್ವರಿ ಕೂಡ ಕೋಲಾರ ಟಿಕೆಟ್ ಆಕಾಂಕ್ಷಿಯಾಗಿದ್ದರು.
ದಳಪತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರಾಜೇಶ್ವರಿ ಇದೀಗ ಕಾಂಗ್ರೆಸ್ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಕಾಂಗ್ರೆಸ್ ಸೇರುವ ಸೂಚನೆ ನೀಡಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಓಡಾಡುತ್ತಿವೆ. ಒಂದು ವೇಳೆ, ಕುರ್ಕಿ ರಾಜೇಶ್ವರಿ ಕಾಂಗ್ರೆಸ್ ಸೇರ್ಪಡೆ ಆದರೆ, ಅದು ಜೆಡಿಎಸ್ಗೆ ಬಹುದೊಡ್ಡ ಆಘಾತವೆಂದೇ ಹೇಳಲಾಗುತ್ತಿದೆ. ಕೋಲಾರದಿಂದ ಸ್ಪರ್ಧಿಸಲು ಬಯಸಿರುವ ಸಿದ್ದರಾಮಯ್ಯನವರಿಗೂ ದಾರಿ ಸಲೀಸಾಗಲಿದೆ ಎಂಬುದಂತೂ ಸತ್ಯ.

ಮಂಗಳವಾರ ಕಾಂಗ್ರೆಸ್ ಸಭೆ
ಮಂಗಳವಾರ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಲಿದ್ದು, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಯ ಬಗ್ಗೆ ಚರ್ಚಿಸಲಾಗುತ್ತದೆ. ಸಿದ್ದರಾಮಯ್ಯ ಸ್ಪರ್ಧೆ ಸೇರಿದಂತೆ ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ನಾವು ಈಗಾಗಲೇ 124 ಅಭ್ಯರ್ಥಿಗಳನ್ನು ಹೆಸರಿಸಿದ್ದೇವೆ. ಏಪ್ರಿಲ್ 10 ಅಥವಾ ಅದಕ್ಕಿಂತಲೂ ಮೊದಲು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ' ಎಂದು ಹೇಳಿದ್ದಾರೆ.
'ಸ್ಕ್ರೀನಿಂಗ್ ಸಮಿತಿಯು ಕಳೆದ ವಾರ ಸಭೆ ಸೇರಿತ್ತು. ಅಂತಿಮ ಪಟ್ಟಿಯನ್ನು ಏಪ್ರಿಲ್ 4 ರಂದು ನಿಗದಿಪಡಿಸಲಾದ ಸಿಇಸಿ ಸಭೆಯಲ್ಲಿ ಸಿದ್ಧಪಡಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

ವರುಣಾದಲ್ಲಿ ರಾಜಕೀಯ ವಿರೋಧಿಗಳೇ ಇಲ್ಲ
ವರುಣಾ ಕ್ಷೇತ್ರದ ಸ್ಪರ್ಧೆಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, 'ವರುಣಾದಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ನನಗೆ ಚಿಂತೆಯಿಲ್ಲ. ನನ್ನ ರಾಜಕೀಯ ಭವಿಷ್ಯವನ್ನು ವರುಣಾದಲ್ಲಿ ಜನ ನಿರ್ಧರಿಸುತ್ತಾರೆ' ಎಂದು ತಿಳಿಸಿದ್ದಾರೆ.
'ಸಿದ್ದರಾಮಯ್ಯ ಅವರನ್ನು ಜನ ಮಾತ್ರ ಸೋಲಿಸಲು ಸಾಧ್ಯ. ಜನರ ತೀರ್ಪು ಅಂತಿಮ. ಅಭಿವೃದ್ಧಿ ಮಾಡುವವರಿಗೆ ಜನರು ಮತ ಹಾಕುತ್ತಾರೆ' ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕಿರಿಯ ಪುತ್ರ ಬಿವೈ ವಿಜಯೇಂದ್ರ ಅವರನ್ನು ವರುಣಾದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿತ್ತು. ಇದಕ್ಕೆ ತಡೆಯೊಡ್ಡಿರುವ ಬಿಎಸ್ವೈ, ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಅವರು ವರುಣಾದಿಂದ ಕಣಕ್ಕಿಳಿಯುವುದಿಲ್ಲವೆಂದು ಹೇಳಿದ್ದಾರೆ.
ಪ್ರಸ್ತುತ ವರುಣಾದಲ್ಲಿ ಸಿದ್ದರಾಮಯ್ಯನವರ ಪುತ್ರ ಡಾ ಯತೀಂದ್ರ ಅವರು ಶಾಸಕರಾಗಿದ್ದಾರೆ. ಅಪ್ಪನಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಕೋಲಾರದಿಂದ ಸ್ಪರ್ಧಿಸಿ ಗೆಲ್ಲುವುದು ಕಷ್ಟ ವಾಗಬಹುದು ಹೀಗಾಗಿ ವರುಣಾದಿಂದಲೇ ಸ್ಪರ್ಧಿಸಬೇಕೆಂದು ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಸಿದ್ದರಾಮಯ್ಯ ಇದನ್ನು ತಳ್ಳಿಹಾಕಿದ್ದಾರೆ.












Click it and Unblock the Notifications