ಡಿಸಿಎಂ ಮಾಡಿ ಏಕಕಾಲಕ್ಕೆ ಅಲ್ಲಿಂದ ಕೆಳಗಿಸುವುದು ಅಪಮಾನವೋ, ಸನ್ಮಾನವೋ? : ಕೈ ಹಿಡಿದ ಸವದಿ ಬಿಜೆಪಿ ವಿರುದ್ದ ಕೆಂಡಾಮಂಡಲ
ಬೆಂಗಳೂರು,ಏಪ್ರಿಲ್14: ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಾವು ಜೋರಾಗಿದೆ. ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯದ ಬೆಂಕಿ ಹೆಚ್ಚಾಗಿದ್ದು, ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿ ನಾಯಕರ ವಿರುದ್ದ ಕಿರಿಕಾರಿದ್ದಾರೆ.
ಈ ಕುರಿತು ಕಾಂಗ್ರೆಸ್ ಸೇರ್ಪಡೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಒಬ್ಬ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿ ಏಕಕಾಲಕ್ಕೆ ಅಲ್ಲಿಂದ ಕೆಳಗಿಸುವುದು ಅಪಮಾನವೋ, ಸನ್ಮಾನವೋ? ಎಂದು ಪ್ರಶ್ನಿಸಿದ್ದಾರೆ.

ನಾನು ಯಾವುದೇ ಟಿಕೆಟ್ ಮಾಡಲಿಲ್ಲ. ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಸಮಿತಿ ಸದಸ್ಯನಾಗಿದ್ದೆ. ಆಗ ನೀವು ಚರ್ಚೆ ಮಾಡಿದಂತೆ ನನಗೆ ಟಿಕೆಟ್ ನೀಡಬೇಕು ಎಂದು ಕೇಳಿದೆ. ನೀವು ಮಾನದಂಡಗಳ ಆಧಾರದ ಮೇಲೆ ಟಿಕೆಟ್ ನೀಡಬೇಕು ಎಂದು ಹೇಳಿದ್ದೆ. ಆದರೆ ಎಲ್ಲ ಮಾನದಂಡ ಗಾಳಿಗೆ ದೂರಿ ಟಿಕೆಟ್ ಹಂಚಿಕೆ ಮಾಡಿದ್ದು ನೋವು ತಂದಿದ್ದು, ಹೀಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ನನ್ನ ಕ್ಷೇತ್ರದ ಕಾರ್ಯಕರ್ತರು ಮಾರ್ಗದರ್ಶಕರ ಜತೆ ಚರ್ಚೆ ಮಾಡಿ ಬಿಜೆಪಿ ತೊರೆದಿದ್ದೇನೆ. ನನ್ನ ಮುಂದಿನ ಹೆಜ್ಜೆ ಯಾವ ಕಡೆ ಎಂದು ಕೇಳಿದಾಗ 30 ಸಾವಿರಕ್ಕೂ ಹೆಚ್ಚು ಜನ ನಿಮಗೆ ಮುಂದೆ ಭವಿಷ್ಯ ಇದ್ದರೆ ಅದು ಕಾಂಗ್ರೆಸ್ ಪಕ್ಷ ಸೇರಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಅವರ ಅಪ್ಪಣೆಯಂತೆ ಇಂದು ನಾನು ಬೆಂಗಳೂರಿಗೆ ಬಂದು ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚೆ ಮಾಡಿ ಪಕ್ಷ ಸೇರುತ್ತಿದ್ದೇನೆ.

ಬಿಜೆಪಿಯಲ್ಲಿ ಯಾವ ರೀತಿ ನಿಷ್ಠೆಯಿಂದ ಕೆಲಸ ಮಾಡಿದ್ದೆನೋ, ಅದೇ ರೀತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಅತ್ಯಂತ ಶ್ರದ್ಧೆಯಿಂದ ಮಾಡಲು ಸಿದ್ಧನಿದ್ದೇನೆ. ಈ ನಾಯಕರೆಲ್ಲರೂ ನನ್ನನ್ನು ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡಿದ್ದಾರೆ. ನಾನು ಬೇರೆ ಪಕ್ಷದಲ್ಲಿದ್ದಾಗಿನಿಂದ ಈ ನಾಯಕರುಗಳು ನನಗೆ ಸ್ನೇಹಿತರಾಗಿದ್ದರು. ವಿಚಾರಧಾರೆಗಳು ಮಾತ್ರ ಬೇರೆ ಇತ್ತು. ರಾಜಕಾರಣದ ಉದ್ದೇಶದಿಂದ ಟೀಕೆ ಟಿಪ್ಪಣಿ ಮಾಡಿದ್ದೆವು. ಇವೆಲ್ಲವನ್ನು ಮರೆತು ಮುಂದಿನ ದಿನಗಳಲ್ಲಿ ನನ್ನನ್ನು ಮನೆ ಮಗನಂತೆ ಭಾವಿಸಿ ಎಂದರು.
ಸವದಿ ಸೋತಾಗ ಉಪಮುಖ್ಯಮಂತ್ರಿ ಮಾಡಿದ್ದರು, ಆದರೂ ಅವರು ಕಾಂಗ್ರೆಸ್ ಯಾಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನಾನು ಸೋತಾಗ ನಾನು ಕಾರ್ಯಕರ್ತನಾಗಿ ಸಂಘಟನೆ ಮಾಡುತ್ತಿದ್ದಾಗ ರಾಷ್ಟ್ರೀಯ ನಾಯಕರು ನನ್ನನ್ನು ಕರೆದು ರಾಜ್ಯದ ಸಚಿವ ಸ್ಥಾನದ ಜತೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರು. ಆಪರೇಷನ್ ಕಮಲದ ನಂತರ ನಡೆದ ಉಪಚುನಾವಣೆ ಸಮಯದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಹಿರಿಯರು ನನಗೆ ಬೆಂಬಲ ನೀಡುವಂತೆ ಕೇಳಿದ್ದರು.
2023ರಲ್ಲಿ ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಬಿಜೆಪಿಯಲ್ಲಿ ನಾನು 13 ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೆ. ನಾನು ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನ ಕೇಳಿರಲಿಲ್ಲ. ಆದರೂ ಅವರೇ ನನಗೆ ಈ ಸ್ಥಾನ ನೀಡಿದರು. ಆದರೆ ಆ ಸ್ಥಾನದಿಂದ ಕೆಳಗಿಳಿಸುವಾಗ ಒಂದು ಮಾತು ಹೇಳಲಿಲ್ಲ. ಇನ್ನೂ ನನಗೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಪರಿಚಯ. ಶಿವಕುಮಾರ್ ಅವರು ಸಹಕಾರಿ ಸಚಿವರಾಗಿದ್ದಾಗ ನಾನು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ನನಗೆ ಕೆಲಸ ಮಾಡಿಕೊಡುತಿದ್ದರು.
ಬಿಜೆಪಿ ಆಂತರಿಕವಾಗಿ ಏನಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ಈ ಎಲ್ಲ ಹುನ್ನಾರಕ್ಕೆ ರಾಜ್ಯದ ಜನ ಮೇ 13ರಂದು ತಕ್ಕ ಪಾಠ ಕಲಿಸುತ್ತಾರೆ' ಎಂದು ನಂಬಿದ್ದೇನೆ. ಎಲ್ಲ ಪಕ್ಷದಲ್ಲೂ ಲಿಂಗಾಯತ ನಾಯಕರಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಿಂಗಾಯತ ನಾಯಕರು ಆಗಮಿಸುತ್ತಿದ್ದಾರೆ' ಎಂದು ತಿಳಿಸಿದರು.












Click it and Unblock the Notifications