ಮೋದಿ ಮ್ಯಾಜಿಕ್ ನಡೆಯಲಿಲ್ಲ: ಕಾಂಗ್ರೆಸ್ ಪಕ್ಷ 120 ರಿಂದ 140 ಸ್ಥಾನಗಳಲ್ಲಿ ಗೆಲ್ಲಲಿದೆ: ಎಂ.ಬಿ ಪಾಟೀಲ್
ವಿಜಯಪುರ, ಮೇ 11: ರಾಜ್ಯದಲ್ಲಿ ಮತದಾನ ಮುಕ್ತಾಯದ ನಂತರ ಬಂದ ಬಹುತೇಕ ಎಕ್ಸಿಟ್ ಪೋಲ್ಗಳಲ್ಲಿ ಕಾಂಗ್ರೆಸ್ಗೆ ಮುನ್ನಡೆ ದೊರಕಿದ ಕಾರಣ, ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇತ್ತ ಕಾಂಗ್ರೆಸ್ ನ ಹಲವು ನಾಯಕರು ಗೆಲ್ಲುವಿನ ಲೆಕ್ಕಾಚಾರದಲ್ಲಿದ್ದು, ಮೋದಿ ಅಲೆ ನಡೆಯಲಿಲ್ಲ ಎಂದು ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ಈ ಕುರಿತು ಗುರುವಾರ ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಪಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ ಎಂ ಬಿ ಪಾಟೀಲ್ ಮಾತನಾಡಿ, ನಮ್ಮ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಒಳ್ಳೆಯ ಲೀಡ್ ನಲ್ಲಿ ಆಯ್ಕೆಯಾಗುತ್ತೇವೆ. ದೊಡ್ಡ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ರಾಜ್ಯದಲ್ಲಿ ಬದಲಾವಣೆಗೆ ಗಾಳಿ ಬಿಸುತ್ತಿದೆ. ಕಾಂಗ್ರೆಸ್ ಪಕ್ಷ 120 ರಿಂದ 140 ಸ್ಥಾನಗಳಲ್ಲಿ ಗೆಲ್ಲಲಿದೆ. ಈಗಾಗಲೇ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಸಹ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳಿದ್ದಾರೆ. ಈ ಬಾರೀ ರಾಜ್ಯದ ಜನ ಆಶಿರ್ವಾದ ಮಾಡಲಿದ್ದಾರೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಗೆಲ್ಲುವ ಹಾಗೆ ನಾವು ಕೆಲಸ ಮಾಡಿದ್ದೇವೆ. ಜನರ ರಿಪೋರ್ಟೇ, ಸರ್ವೇ ರಿಪೋರ್ಟ್, ಪ್ರಜಾಧ್ವನಿ ಕಾರ್ಯಕ್ರಮದಲ್ಲೇ ನಮಗೆ ಜನ ಉತ್ತರ ನೀಡಿದ್ದಾರೆ. 2013-18 ರಲ್ಲಿ ನಮ್ಮ ಸರ್ಕಾರ ಹಾಗೂ ಈಗಿನ ಸರ್ಕಾರ ಹೇಗೆ ಕೆಲಸ ಮಾಡಿದೆ ಎಂದು ಜನರಿಗೆ ಗೊತ್ತಾಗಿದೆ. ಹಲವಾರು ಭಾಗ್ಯ, ರೈತರಿಗೆ ಯೋಜನೆ, ಯುವ ಜನರಿಗೆ ಯೋಜನೆ ನೀಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ. ಮೋದಿ ಪ್ರಭಾವ ಇಲ್ಲ, ಜನ ಬೆಲೆ ಏರಿಕೆ ಬಗ್ಗೆ ಜಾಗೃತವಾಗಿದ್ದಾರೆ. 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ನೋಟ್ ಬ್ಯಾನ್, ಹಳೆಯ ಉದ್ಯೋಗ ಕಡಿತ, ಬೆಲೆ ಏರಿಕೆ, ನಿರುದ್ಯೋಗ,ರೈತರ ಆದಾಯ ದುಪ್ಪಟ್ಟಾಗಿಲ್ಲ, ಖರ್ಚು ದುಪ್ಪಟ್ಟಾಗಿದೆ. ಇನ್ನೂ ರಸಗೊಬ್ಬರ ಔಷಧಿ ಬೆಲೆ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 72000 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿ ಅವರು ಉದ್ದಿಮೆದಾರರ 20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು.ಮೋದಿ ಮೋಡಿ ಮೋದಿ ಮ್ಯಾಜಿಕ್ ನಡೆಯಲಿಲ್ಲ. ಜನರ ಅಕೌಂಟಿಗೆ ತಲಾ 15 ಲಕ್ಷ ಕಪ್ಪು ಹಣ ಬಂತಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಜನತೆ 40 ಪರ್ಸೆಂಟ್ ಭ್ರಷ್ಟಾಚಾರದ ಸರಕಾರದಿಂದ ಬೇಸತ್ತಿದ್ದಾರೆ. ಜನವಿರೋಧಿ ನೀತಿಗಳಿಂದ ರೋಸಿ ಹೋಗಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಡಬಲ್ ಎಂಜಿನ್ ಸರಕಾರದ ದುರಾಡಳಿತದಿಂದ ಮತ್ತು ಕಾಂಗ್ರೆಸ್ಸಿನ ಜನಪರ ಹಳೆಯ ಯೋಜನೆಗಳು ಹಾಗೂ ಗ್ಯಾರಂಟಿ ಸ್ಕೀಂ ಗಳ ಪರ ಮನಸೋತು ಕಾಂಗ್ರೆಸ್ಸಿಗೆ ಹೆಚ್ಚಿನ ಮತ ನೀಡಿದ್ದಾರೆ. ಮೇ 13 ರಂದು ಇದು ಫಲಿತಾಂಶದ ರೂಪದಲ್ಲಿ ಬಹಿರಂಗವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಸಾರವಾಗುವ ಮುಂಚೆಯಿಂದಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಕುರಿತು ನಾವು ಸಾರ್ವಜನಿಕವಾಗಿ ತಿಳಿಸಿದ್ದೇವೆ. ಇದು ಫಲಿತಾಂಶದ ನಂತರ ನಿಜವಾಗಲಿದೆ ಎಂದು ಅವರು ತಿಳಿಸಿದರು.
ಇನ್ನೂ ಬೆಳಿಗ್ಗೆಯೇ ಆಗಮಿಸಿದ ಕಾರ್ಯಕರ್ತರ ಭೇಟಿ ಮಾಡಿ, ಮತದಾನ ಕುರಿತು ಮಾಹಿತಿ ಕಲೆ ಹಾಕಿರುವ ಎಂ ಬಿ ಪಾಟೀಲ್ ಮತದಾನ ಎಂಬಿತ್ಯಾದಿ ವಿಚಾರಗಳ ಕುರಿತು ಬೆಂಬಲಿಗರ ಜೊತೆಗೆ ಚರ್ಚೆ ನಡೆಸಿದರು. ಅಲ್ಲದೇ ರಾತ್ರಿ ತಡವಾಗಿ ಮಲಗಿದೆ, ನಮ್ಮಲ್ಲಿ ನಾಟಕ ಕಂಪನಿ ಪಾತ್ರ ಮುಂದುವರೆದಿದೆ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.












Click it and Unblock the Notifications