Amul vs Nandini: ಬಿಜೆಪಿಗೆ ರಾಜಕೀಯ ಹಿನ್ನೆಡೆ ಭೀತಿ- ಅಮೂಲ್ ಪ್ರವೇಶವನ್ನು ಮುಂದೂಡುವ ಸಾಧ್ಯತೆ, ಇನ್ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ( Karnataka ) ಮಾರುಕಟ್ಟೆಗೆ ಅಮೂಲ್ನ ( Amul ) ಪ್ರವೇಶ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು ಹಾಗೂ ವಿರೋಧ ಪಕ್ಷದ ನಾಯಕರು ಅಮೂಲ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಚುನಾವಣೆಗೂ ( Karnataka Elections 2023 ) ಮುನ್ನ ನಡೆದಿರುವ ಈ ಬೆಳವಣಿಗೆ ಆಡಳಿತಾರೂಢ ಬಿಜೆಪಿಗೆ ರಾಜಕೀಯವಾಗಿ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಅಮೂಲ್ ಎಂಟ್ರಿಗೆ ತಾತ್ಕಾಲಿಕ ತಡೆ ಒಡ್ಡಲು ಬಿಜೆಪಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೂಲ್ ಘೋಷಣೆಯು ಕರ್ನಾಟಕದ ನಂದಿನಿಯನ್ನು ಆಕ್ರಮಣ ಮಾಡಿಕೊಳ್ಳುವ ತಂತ್ರವಾಗಿದೆ ಎಂದು ಆರೋಪಿಸಲಾಗಿದೆ. ಈ ವಿಚಾರವೀಗ ರಾಜ್ಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಹೋಟೆಲ್ ಮಾಲೀಕರು ಅಮುಲ್ ಹಾಲು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಗುಜರಾತ್ ಮೂಲದ ಡೈರಿ ಕಂಪನಿಯಾದ ಅಮೂಲ್ ಅನ್ನು ಉತ್ತೇಜಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದೆ.
ಆರಂಭದಲ್ಲಿ ಒತ್ತಡಕ್ಕೆ ಮಣಿಯಲು ನಿರಾಕರಿಸಿದ ರಾಜ್ಯ ಸರ್ಕಾರ ನಂತರ ವಿರೋಧದ ಪ್ರಮಾಣ ಮತ್ತು ತೀವ್ರತೆಯಿಂದ ಗಾಬರಿಗೊಂಡಂತೆ ಕಂಡುಬರುತ್ತದೆ. ವಿಶೇಷವಾಗಿ ಈ ವಿಚಾರವಾಗಿ ಚುನಾವಣೆಯಲ್ಲಿ ಬೀರಬಹುದಾದ ಪರಿಣಾಮದ ದೃಷ್ಟಿಯಿಂದ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕತ್ವವು ಭಾನುವಾರ ಅಮೂಲ್ ಪ್ರವೇಶದ ಕುರಿತು ಚರ್ಚೆಯನ್ನು ಮಾಡಿದೆ. ಇದರಿಂದ ಆಗಬಹುದಾದ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ತಾತ್ಕಾಲಿಕವಾಗಿ ಕರ್ನಾಟಕಕ್ಕೆ ತನ್ನ ಪ್ರವೇಶವನ್ನು ನಿಲ್ಲಿಸುವಂತೆ GCMMF ( ಅಮೂಲ್ ) ಅನ್ನು ಕೇಳಲು ಬಿಜೆಪಿ ನಾಯಕತ್ವ ನಿರ್ಧರಿಸಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಏತನ್ಮಧ್ಯೆ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಸಿ ಸತೀಶ್ ಮಾತನಾಡಿ, 'ಸ್ಪರ್ಧಾತ್ಮಕ ಬೆಲೆಯಿಂದಾಗಿ ಅಮೂಲ್ ನಂದಿನಿಗೆ ಎಂದಿಗೂ ಬೆದರಿಕೆ ಹಾಕಲು ಸಾಧ್ಯವಿಲ್ಲ. ಅಮೂಲ್ನಿಂದ ನಂದಿನಿಗೆ ಯಾವುದೇ ಅಪಾಯವಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ' ಎಂಬುದಾಗಿ ತಿಳಿಸಿದ್ದಾರೆ.
ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ನಂತರವೂ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವಲ್ಲಿ ಸಫಲವಾಗಿಲ್ಲ. ಪಟ್ಟಿಗಾಗಿ ಕಾಯುವಿಕೆ ಮುಂದುವರಿದಿದ್ದು, ಪಕ್ಷದ ಹಲವು ಹಾಲಿ ಶಾಸಕರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ನಿಂದ ಎರಡು ಪಟ್ಟಿಗಳು ಬಿಡುಗಡೆ ಆಗಿದೆ. ಜೆಡಿಎಸ್ ತನ್ನ ಮೊದಲ ಮೊದಲ ಪಟ್ಟಿಯನ್ನು ಪ್ರಕಟಗೊಳಿಸಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿಯು ಮತ್ತೊಮ್ಮೆ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಿದೆ. ಆದರೆ ಒಕ್ಕಲಿಗ ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಸಹ ಗಮನಾರ್ಹ ಸಂಖ್ಯೆಯಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಿಂದ ಈಶಾನ್ಯ ರಾಜ್ಯಕ್ಕೆ ತೆರಳುವ ಮೊದಲು, ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ.
ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ರಾಜ್ಯ ನಾಯಕರು ತಮ್ಮ ನಿವಾಸಗಳಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
'ಅಭ್ಯರ್ಥಿಗಳ ಆಯ್ಕೆಗೆ ಕೆಲವು ಮಹತ್ವದ ಮಾನದಂಡಗಳನ್ನು ಪರಿಗಣಿಸಲಾಗಿದೆ. ಇವುಗಳನ್ನು ಪಕ್ಷದ ನಾಯಕರೊಂದಿಗೆ ಹಂಚಿಕೊಳ್ಳಲಾಗಿದೆ' ಎಂದು ಪಕ್ಷದ ಕೇಂದ್ರ ನಾಯಕರನ್ನು ಭೇಟಿ ಮಾಡಿದ ನಂತರ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications