ಕರ್ನಾಟಕದ ಅಧಿಕಾರ ಯಾವ ಪಕ್ಷಕ್ಕೆ?: ಸುಧಾಕರ್-ಡಿಕೆಶಿ ರಕ್ತದ ಹೇಳಿಕೆಯಲ್ಲಿದೆ ಉತ್ತರ
ಚಿಕ್ಕಬಳ್ಳಾಪುರ, ಏಪ್ರಿಲ್ 26: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ನಾಯಕರ ರಕ್ತದ ಹೇಳಿಕೆಗಳೂ ಭಾರಿ ಸದ್ದು ಮಾಡುತ್ತಿವೆ. ರಕ್ತದಲ್ಲಿ ಬರೆದು ಕೊಡುತ್ತೇನೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಸಚಿವ ಡಾ.ಕೆ.ಸುಧಾಕರ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಕ್ತದಲ್ಲಿ ಬರೆದುಕೊಟ್ಟರೆ ನಾನು ಸಹ ಅದೇ ರಕ್ತದಲ್ಲಿ ಬರೆದು ಕೊಡುತ್ತೇನೆ. ಕಾಂಗ್ರೆಸ್ ಯಾವ ಕಾರಣಕ್ಕೂ ಈ ಬಾರಿ ಅಧಿಕಾರ ಹಿಡಿಯುವುದಿಲ್ಲ. ಸರ್ಕಾರ ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿಯು ನಾವೇ ಅಧಿಕಾರ ನಡೆಲಿದ್ದೇವೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಮುಳುಗುವ ಹಡಗಿನ ಸ್ಥಿತಿಯಂತಾಗಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ಸಹ ಬಿಜೆಪಿಗೆ ಬರುವ ದಿನಗಳು ದೂರ ಉಳಿದಿಲ್ಲ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ಗೆ ರಾಜ್ಯದಲ್ಲೂ ನೆಲೆ ಕಳೆದುಕೊಳ್ಳಲಿದೆ
ಮುಂದಿನ ಮೇ 10ರಂದು ಮತದಾನ ನಡೆದರೆ ಮೇ 13ರಂದು ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯಂದು ಬಿಜೆಪಿಯ ಶವಾಚರಣೆ ನಡೆಯಲಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, ಈಗಾಗಲೇ ಭಾರತದಲ್ಲಿ ಕಾಂಗ್ರೆಸ್ ಗೆ ನೆಲೆ ಇಲ್ಲದಂತಾಗಿದ್ದು, ಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಸಹ ಅದೇ ರೀತಿ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅವನತಿ ಆಗಲಿದೆ. ಲೋಕಸಭಾ ಚುನಾವಣಾ ಹೊತ್ತಿಗೆ ವಿಪಕ್ಷ ಕಾಂಗ್ರೆಸ್ಗೆ ಅಭ್ಯರ್ಥಿಗಳೇ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.
ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಲಿಂಗಾಯತ-ಒಕ್ಕಲಿಗರ ಭಿಕ್ಷುಕರಾ? ಎಂದು ಡಿಕೆ ಶಿವಕುಮಾರ್ ಕೇಳಿದ್ದಾರೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ನೀವು (ಡಿಕೆಶಿ), ಇಂಧನ ಸಚಿವರಾಗಿ ಕೆಲಸ ಮಾಡಿದ್ದೀರಿ. ಒಕ್ಕಲಿಗ ಸಮುದಾಯದ ಮಗ ಎಂದು ಹೇಳಿಕೊಳ್ಳತ್ತೀರಿ. ಹಾಗಾದರೆ ನೀವೆ ಯಾಕೆ ಶೇಕಡಾ 1ರಷ್ಟು ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಮೀಸಲಾತಿ ಏರಿಕೆ ಕುರಿತು ನಮ್ಮ ಸರ್ಕಾರದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.

ಡಿಕೆಶಿ ಮಾಡಿದ ಶಪಥವೇನು?
ಈ ಸಲ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಈ ಬಗ್ಗೆ ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಬಿಜೆಪಿ 40 ಸೀಟಿಗೆ ಸೀಟು ಸಿಗಲಿದ್ದ, ಕಾಂಗ್ರೆಸ್ 150 ಸ್ಥಾನ ಬಾಚಿಕೊಂಡು ಗೆದ್ದು ಬರಲಿದೆ ಎಂದು ಮೈಸೂರಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಪಥ ಮಾಡಿ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರುತ್ತದೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಬಿ.ಎಸ್ ಯಡಿಯೂರಪ್ಪ ನವರು ಹೇಳಿಕೆಗೆ ಪ್ರತಿಯಾಗಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದರು. 40 ಪರ್ಸೆಂಟ್ ಭ್ರಷ್ಟಾಚಾರ ಮಾಡಿರು ಬಿಜೆಪಿಗೆ ಈ ಬಾರಿ 40 ಸೀಟುಗಳಿಗೇ ತೃಪ್ತಿಪಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದರು. ಅವರ ಈ ಹೇಳಿಕೆಗೆ ಆರೋಗ್ಯ ಸಚಿವರ ಸುಧಾಕರ್ ತಿರುಗೇಟು ನೀಡಿದರು.












Click it and Unblock the Notifications