ಆಗಸ್ಟ್ 15ರ ನಂತರ ರಾಜ್ಯಕ್ಕೆ ಭಾರೀ ಮಳೆ, ಪ್ರವಾಹ: ಜಿಲ್ಲೆಗಳ ಡಿಸಿಗೆ ಅಲರ್ಟ್
ಬೆಂಗಳೂರು, ಆಗಸ್ಟ್ 13: ಆಗಸ್ಟ್ ಮಧ್ಯ ಭಾಗದಿಂದ ಮುಂದಿನ ಒಂದೂವರೆ ತಿಂಗಳವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅತ್ಯಧಿಕ ಮಳೆ ಬರುವ ಮುನ್ಸೂಚನೆ ಸಿಕ್ಕಿದೆ. ಮುಂಗಾರು ಮಳೆ ಮತ್ತಷ್ಟು ಚುರುಕಗೊಳ್ಳಲಿದೆ. ಈ ಸಂಬಂಧ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತಗಳು ಸಜ್ಜಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇನ್ನೂ ಈಗಾಗಲೇ ಅತಿವೃಷ್ಟಿಯಿಂದ ತತ್ತರಿಸಿದ ರೈತರಿಗೆ ಮುಂದಿನ ಒಂದು ವಾರದೊಳಗೆ ಪರಿಹಾರ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಇಲ್ಲವೇ ನಂತರ ರಾಜ್ಯಾದ ಅನೇಕ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುವುದು ವಾಡಿಕೆ ಈ ಭಾರಿಯು ಭಾರೀ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಭಾಗಗಳು, ಉತ್ತರ ಒಳನಾಡಿನ ಒಂದಷ್ಟು ಜಿಲ್ಲೆಗಳೂ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮುಂದಿನ ಒಂದೂವರೆ ತಿಂಗಳು ಮುಂಗಾರು ಬಾಧಿಸಲಿದೆ. ಅತೀವ ಮಳೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ವಾರ ರೈತರಿಗೆ ಬೆಳೆಹಾನಿ ಪರಿಹಾರ
ಈ ಹಿಂದೆ ಮಳೆಗೆ ಉಂಟಾದ ಅತಿವೃಷ್ಟಿಯಿಂದ ರಾಜ್ಯದಲ್ಲಿ ಬೆಳೆದಿದ್ದ ಭತ್ತ, ಹತ್ತಿ, ಕಾಫಿ ಇನ್ನಿತರ ಬೆಳೆಗಳು ಹಾನಿಗೀಡಾಗಿವೆ. ಒಟ್ಟು 80,000 ಹೆಕ್ಟೇರ್ ಬೆಳೆ ನಾಶವಾಗಿದೆ. ಈ ಬೆಳೆ ಹಾನಿ ರೈತರಿಗೆ ಒಂದು ವಾರದೊಳಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ, ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಆಗಸ್ಟ 15ರ ನಂತರ ವ್ಯಾಪಕ ಮಳೆ ಬೀಳಲಿದೆ. ಈ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಅಲರ್ಟ್ ಮಾಡಿದ್ದಾರೆ. ಸೂಕ್ತ ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿದರು. ಅಲ್ಲದೇ ನದಿ ತೀರದ ಪ್ರದೇಶಗಳು, ಜಲಾನಯನ ಗ್ರಾಮದ ನಿವಾಸಿಗಳಿಗೆ ಪ್ರವಾಹ, ನೆರೆಯಿಂದ ಎಚ್ಚರಿಕೆ ವಹಿಸುವಂತೆ ತಿಳಿಸಬೇಕು ಎಂದರು.
ರಾಜ್ಯದಲ್ಲಿ ವಾಡಿಕೆಗಿಂತ ಉತ್ತಮ ಮಳೆ
ಕಳೆದ ಜುಲೈ ತಿಂಗಳಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಕೆಲವು ಜಿಲ್ಲೆಗಳಲ್ಲಿ ಮಾತ್ರವೇ ನಿರಂತರ ಮಳೆ ಆಗಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಆಗಿದ್ದು ಬಿಟ್ಟರೆ, ವಿಜಯಪುರ, ರಾಯಚೂರು, ಕೊಪ್ಪಳ, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ ಕೊರತೆ ಸೃಷ್ಟಿಸಿದೆ ಎಂದು ಅವರು ವಿವರಿಸಿದರು.

ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಈ ಭಾರಿ ಉತ್ತಮ ಮುಂಗಾರು ಬೆಳೆ ಕಾಣಬಹುದಾಗಿದೆ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ ಶೇಕಡಾ 26ರಷ್ಟು ಹೆಚ್ಚು ಮಳೆ ಆಗಿದೆ. ಎಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆ ಆಗಿಲ್ಲ. ಇದು ಕೃಷಿ ಚಟುವಟಿಕೆ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಬುಧವಾರ ಸಿಎಂ ನೇತೃತ್ವದಲ್ಲಿ ಸಭೆ
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ಆಗಸ್ಟ್ 17ರ ನಂತರ ನಾಲ್ಕು ದಿನ ಹೆಚ್ಚು ಮಳೆ ಹಿನ್ನೆಲೆ ಇಲ್ಲಿ ಜಾಗೃತೆ ವಹಿಸಬೇಕಿದೆ. ಇನ್ನೂ ಈಗಾಗಲೇ ದಾಖಲಾದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು, ನದಿಗಳು ಉಕ್ಕಿ ಹರಿಯುತ್ತಿವೆ. ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಭರ್ತಿಯಾಗುವ ಮೊದಲೇ ತಕ್ಕ ನೀರನ್ನು ಹೊರ ಬಿಡಲಾಗುತ್ತದೆ. ಸದ್ಯ ರಾಜ್ಯ ಪರಿಸ್ಥಿತಿ ಕುರಿತು ಇದೇ ಬುಧವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಚರ್ಚೆಯ ಬಳಿಕ ಯಾವೆಲ್ಲ ನಿರ್ಧಾರಗಳು ಕೈಗೊಳ್ಳಲಿದ್ದೇವೆ. ಏನೆಲ್ಲ ಸೂಚನೆ ಇರಲಿವೆ ಎಂಬ ಪೂರ್ಣ ಮಾಹಿತಿ ತಿಳಿಯಲಿದೆ. ಜೊತೆಗೆ ಇದೇ ವಾರ ಅತೀವೃಷ್ಠಿ ಹಾನಿ ಪರಿಹಾರ ವಿತರಣೆ ಬಗ್ಗೆ ತಿಳಿಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications