ನೀತಿ ಸಂಹಿತೆ ಸಡಿಲಿಸಲು ಆಯೋಗಕ್ಕೆ ಮನವಿ
ಬೆಂಗಳೂರು, ಏ. 22 : ಕರ್ನಾಟಕದಲ್ಲಿ ಚುನಾವಣೆ ಮುಗಿದ ಮೇಲೂ ಒಂದು ತಿಂಗಳ ಕಾಲ ಮಾದರಿ ನೀತಿ ಸಂಹಿತೆ ಮುಂದುವರಿಸುವುದು ಅವೈಜ್ಞಾನಿಕ ಆದ್ದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗಾಗಿ ನೀತಿ ಸಂಹಿತೆಯನ್ನು ತೆರವುಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಸರ್ಕಾರ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮತದಾನದ ನಂತರ ಹೆಚ್ಚೆಂದರೆ ಒಂದು ವಾರದವರೆಗೆ ನೀತಿ ಸಂಹಿತೆ ಇದ್ದರೆ ಸಮಸ್ಯೆ ಆಗದು. ಆದರೆ, ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳಿರುವುದರಿಂದ ನೀತಿ ಸಂಹಿತೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಲಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಇರುವುದರಿಂದ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಯಾವುದೇ ಕೆಲಸ-ಕಾರ್ಯಗಳಿಗೆ ಕರೆದೊಯ್ಯುವಂತಿಲ್ಲ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ನೀತಿ ಸಂಹಿತೆಯನ್ನು ಸಡಿಲಿಸಬೇಕು ಎಂದು ಶೆಟ್ಟರ್ ಮನವಿ ಮಾಡಿದರು. [ವಿಶ್ರಾಂತಿಗೆ ತೆರಳಿದ ಸಿಎಂ ಸಿದ್ದರಾಮಯ್ಯ]
ಗುಲ್ಬರ್ಗ, ವಿಜಾಪುರ, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ತೊಗರಿ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಲ್ಲಿ ಸುಮಾರು 35 ಸಾವಿರ ರೈತರು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಆದರೆ, ಈವರೆಗೆ ಕೇವಲ 15 ಸಾವಿರ ರೈತರಿಂದ ಮಾತ್ರ ಖರೀದಿ ಮಾಡಲಾಗಿದೆ. ಉಳಿದ ರೈತರಿಂದ ತೊಗರಿ ಖರೀದಿಗೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದರು.
ಪ್ರತಿಪಕ್ಷ ಬಿಜೆಪಿ ನೀತಿ ಸಂಹಿತೆ ಸಡಿಲಿಸುವಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದೆ. ಸರ್ಕಾರ ಸಹ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನೀತಿ ಸಂಹಿತೆ ಸಡಿಲಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಡ ಹೇರಬೇಕೆಂದು ಶೆಟ್ಟರ್ ಮನವಿ ಮಾಡಿದರು.
ಸರ್ಕಾರ ಮತ್ತೊಮ್ಮೆ ಮನವಿ ಮಾಡಿದೆ : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದು, ಫಲಿತಾಂಶ ಪ್ರಕಟವಾಗಲು ಒಂದು ತಿಂಗಳ ಕಾಲಾವಕಾಶವಿದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆಯನ್ನು ಸಡಿಲ ಮಾಡುವಂತೆ ಚುನಾವಣಾ ಆಯೋಗಕ್ಕೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾ.5ರಂದು ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುವ ಮೇ 16ರವರೆಗೆ ಅದು ಜಾರಿಯಲ್ಲಿರುತ್ತದೆ. ಸದ್ಯ ಕರ್ನಾಕಟದಲ್ಲಿ ಮತದಾನ ಮುಗಿದಿರುವುದರಿಂದ ನೀತಿ ಸಡಿಲಗೊಳಿಸುವಂತೆ ಮನವಿ ಮಾಡಲಾಗುತ್ತಿದೆ. ಚುನಾವಣೆ ಮುಗಿದಿರುವ ಕೇರಳ ರಾಜ್ಯ ಸಹ ನೀತಿ ಸಂಹಿತೆ ಸಡಿಲಿಸುವಂತೆ ಆಯೋಗಕ್ಕೆ ಮನವಿ ಮಾಡಿದೆ.












Click it and Unblock the Notifications