ಸಂತ್ರಸ್ತರು ಬಿಜೆಪಿ, ಆರ್ಎಸ್ಎಸ್ ಕಚೇರಿಗೆ ಬರಬೇಕಾ?
ಬೆಂಗಳೂರು, ಅಕ್ಟೋಬರ್ 08 : "ಪ್ರವಾಹ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪರಿಹಾರ ಪಡೆಯಲು ನಿಮ್ಮ ಮನೆಗೆ ಬರಬೇಕಾ, ಬಿಜೆಪಿ, ಆರ್ಎಸ್ಎಸ್ ಕಚೇರಿಗೆ ಬರಬೇಕಾ?, ಇಲ್ಲ ವಿಧಾನಸೌಧಕ್ಕೆ ಬರಬೇಕಾ?" ಎಂದು ಕರ್ನಾಟಕ ಕಾಂಗ್ರೆಸ್ ಸಚಿವ ಮಾಧುಸ್ವಾಮಿಯನ್ನು ಪ್ರಶ್ನೆ ಮಾಡಿದೆ.
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಹನುಮಂತ ಫಕೀರಪ್ಪ ಪವಾಡಿ ಎಂಬ ರೈತ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದುರ್ಘಟನೆ ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.
"ನೆರೆ ಸಂತ್ರಸ್ತರ ಪರಿಹಾರ ಕುರಿತು ರಾಜ್ಯ ಸರ್ಕಾರ ತ್ವರಿತಗತಿ ಪರಿಹಾರಕ್ಕೆ ಮುಂದಾಗಿದೆ. ಆದರೆ, ಸಂತ್ರಸ್ತರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡಲು ಸಾಧ್ಯ?" ಎಂದು ಕಾನೂನು ಸಚಿವ ಮಾಧುಸ್ವಾಮಿ ಪ್ರಶ್ನೆ ಮಾಡಿದ್ದರು.
ಮಂಗಳವಾರ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, "ನೀವು ಸಂತ್ರಸ್ತರಿಗೆ ನೆರವು ಕೊಡ್ತೀರಾ?, ಅಥವಾ ಅವರ ಸಮಾಧಿಗೆ ಕೊಡ್ತೀರಾ?" ಎಂದು ಸಚಿವರನ್ನು ಪ್ರಶ್ನಿಸಿದೆ.

ನಿಮ್ಮ ಮನೆಗೆ ಬರಬೇಕಾ?
"ಮಾಧುಸ್ವಾಮಿಯವರೇ, ಪರಿಹಾರ ತೆಗೆದುಕೊಳ್ಳಲು ನೆರೆಸಂತ್ರಸ್ತರು ಬರುತ್ತಿಲ್ಲ ಎಂದಿರಲ್ಲ ನೆರೆ ಸಂತ್ರಸ್ತರು ನಿಮ್ಮ ಮನೆಗೆ ಬರಬೇಕಾ, ಬಿಜೆಪಿ/ಆರೆಸ್ಸೆಸ್ ಕಚೇರಿಗೆ ಬರಬೇಕಾ, ಇಲ್ಲ ವಿಧಾನಸೌಧಕ್ಕೆ ಬರಬೇಕಾ?. ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಲಾಲಿಪಪ್'ಗೆ ಇಷ್ಟೊಂದು ಬೀಗಬೇಡಿ
"22 ಜಿಲ್ಲೆಗಳ 103 ತಾಲೂಕುಗಳ 2.47ಲಕ್ಷ ಮನೆಗಳು ಹಾನಿಗೀಡಾಗಿವೆ. ಸುಮಾರು 8 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. 35000 ಕಿ.ಮೀ. ರಸ್ತೆ ಹಾಳಾಗಿದೆ. 38000 ಕೋಟಿ ನಷ್ಟಕ್ಕೆ ಕೇಂದ್ರ ಕೊಟ್ಟಿರುವ ಲಾಲಿಪಪ್ ಗೆ ಇಷ್ಟೊಂದು ಬೀಗಬೇಡಿ. ಸರ್ವಪಕ್ಷ ನಿಯೋಗ ಕರೆದೊಯ್ದು ಹೆಚ್ಚಿನ ಪರಿಹಾರ ತನ್ನಿ" ಎಂದು ಕಾಂಗ್ರೆಸ್ ಟೀಕಿಸಿದೆ.

ಸಂಸದರ ನಿಯೋಗ
"ಬಿಜೆಪಿ ಸರ್ಕಾರಕ್ಕೆ ಜನತೆಯ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ನೆರೆ ಪರಿಹಾರ ಕಾರ್ಯವನ್ನು ತೀವ್ರಗೊಳಿಸಿ, ಕೇಂದ್ರದಿಂದ ಪರಿಹಾರ ಹಣ ಬಿಡುಗಡೆಗೆ ಒತ್ತಾಯಿಸಿ, ಸರ್ವಪಕ್ಷಗಳ, ಸಂಸದರ ನಿಯೋಗವನ್ನು ಕೊಂಡೊಯ್ಯಿರಿ. ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ಹೊಂದಾಣಿಕೆ ಕೊರತೆಗೆ ರಾಜ್ಯದ ಜನತೆಗೆ ಶಿಕ್ಷೆ ಕೊಡಬೇಡಿ" ಎಂದು ಕಾಂಗ್ರೆಸ್ ಸಲಹೆ ನೀಡಿದೆ.

ಕನ್ನಡಿಗರ ದುರ್ದೈವ
"ಕಷ್ಟದಲ್ಲಿ ಸಿಲುಕಿ ಕೈತೊಳೆಯುತ್ತಿರುವ ನೆರೆ ಸಂತ್ರಸ್ತರ ಬಗ್ಗೆ ಅಸಡ್ಡೆಯಾಗಿ ಮಾತನಾಡುವ ಮಾಧುಸ್ವಾಮಿ ಯವರೆ ನೀವು ಮಂತ್ರಿಯಾಗಿರುವುದು ಕನ್ನಡಿಗರ ದುರ್ದೈವ. ಅಧಿಕಾರದ ಮದವೇರಿ ನಾಡಿನ ನೆರೆ ಸಂತ್ರಸ್ತರ ಬಗ್ಗೆ ಬೇಜವಬ್ದಾರಿ ತನದ ಹೇಳಿಕೆ ನೀಡುತ್ತಿರುವ ನಿಮಗೆ ಜನ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಚ್ಚರಿಕೆ!" ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications