'ಬೊಮ್ಮಾಯಿ ಸ್ಟೇ ತರಲು ಇವರಾ ಕಾರಣ?ʼ ಇಬ್ಬರ ಹೆಸರು ಹೇಳಿದ ಕಾಂಗ್ರೆಸ್
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದು ಈ ಬಗ್ಗೆ ರಾಜ್ಯ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿಬಂಧಕಾದೇಶ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ. ಅಲ್ಲದೆ ಬೊಮ್ಮಾಯಿ ಅವರು ವಕೀಲ ಕೆ.ಎನ್.ಜಗದೀಶ್ ವಿರುದ್ಧವೂ ಯಾವುದೇ ಆಕ್ಷೇಪಾರ್ಹ ಹೇಳಿಕೆ ಮತ್ತು ಸುದ್ದಿಗಳನ್ನು ಪ್ರಕಟಿಸದಂತೆ ಪ್ರತಿಬಂಧಕಾದೇಶ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದ್ರೆ, ಬಸವರಾಜ ಬೊಮ್ಮಾಯಿ ಅವರು ಏಕೆ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ.

ಮತ್ತೊಂದೆಡೆ ವಕೀಲ ಜಗದೀಶ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಸವರಾಜ ಬೊಮ್ಮಾಯಿ ಆಪ್ತ ಸಹಾಯಕ ಪೊಲೀಸರಿಗೆ ದೂರು ಕೊಟ್ಟಿದ್ದು, ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಕೀಲ ಜಗದೀಶ್ ಕೂಡ ಹೇಳಿದ್ದಾರೆ. ವಕೀಲ ಜಗದೀಶ್ ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋಗಳ ಮೂಲಕ ಸಂಚಲನ ಸೃಷ್ಟಿಸಿದ್ದರು.
ಮಾಜಿ ಮುಖ್ಯಮಂತ್ರಿ @BSBommai ಅವರು ಕೋರ್ಟಿನಿಂದ ತಡೆಯಾಜ್ಞೆ ತರುವುದಕ್ಕೆ ಕಾರಣ ಏನು?
— Karnataka Congress (@INCKarnataka) August 28, 2024
ಯಾರು ಕಾರಣ?
ಈ ತಡೆಯಾಜ್ಞೆಗೆ ಕೆ. ಸುಧಾಕರ್ ಕಾರಣವೇ ಅಥವಾ ಸ್ಯಾಂಟ್ರೋ ರವಿ ಕಾರಣವೇ?
ಯಾವ ಸುದ್ದಿಗೆ ಬೊಮ್ಮಾಯಿಯವರು ಈ ಪರಿ ಬೆದರುತ್ತಿರುವುದು?
ಇನ್ನು ಇದೇ ವಿಚಾರವಾಗಿ ಟ್ವೀಟ್ ಮೂಲಕ ಬೊಮ್ಮಾಯಿ ಅವರಿಗೆ ಟಾಂಗ್ ನೀಡಿರುವ ರಾಜ್ಯ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೋರ್ಟಿನಿಂದ ತಡೆಯಾಜ್ಞೆ ತರುವುದಕ್ಕೆ ಕಾರಣ ಏನು? ಯಾರು ಕಾರಣ? ಎಂದು ಪ್ರಶ್ನಿಸಿದ್ದಾರೆ. ಈ ತಡೆಯಾಜ್ಞೆಗೆ ಕೆ.ಸುಧಾಕರ್ ಕಾರಣವೇ ಅಥವಾ ಸ್ಯಾಂಟ್ರೋ ರವಿ ಕಾರಣವೇ? ಯಾವ ಸುದ್ದಿಗೆ ಬೊಮ್ಮಾಯಿಯವರು ಈ ಪರಿ ಬೆದರುತ್ತಿರುವುದು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಮತ್ತೊಂದೆಡೆ ಬೊಮ್ಮಾಯಿ ಅವರ ವಿರುದ್ಧ ಷಡ್ಯಂತ್ರ ನಡೆದಿದೆಯಾ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆದರೆ ಬೊಮ್ಮಾಯಿ ಅವರು ತಡೆಯಾಜ್ಞೆ ತಂದಿರುವುದಕ್ಕೂ ಸಂಸದ ಕೆ.ಸುಧಾಕರ್ ಹಾಗೂ ಆರೋಪಿ ಸ್ಯಾಂಟ್ರೋ ರವಿಗೂ ಏನು ಸಂಬಂಧ ಎನ್ನುವ ಗೊಂದಲವನ್ನು ಕಾಂಗ್ರೆಸ್ ಮೂಡಿಸಿದೆ. ಈ ಹಿಂದೆಯೂ ಇದೇ ರೀತಿ ಹಲವು ರಾಜಕೀಯ ನಾಯಕರು ತಮ್ಮ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರೂ ಕೋರ್ಟ್ನಿಂದ ತಡೆಯಾಜ್ಞೆ ತರಲು ಮುಂದಾಗಿರುವ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಗುಸುಗುಸು ಶುರುವಾಗಿದೆ.

ಸದ್ಯ ಸಂಸದ ಬಸವರಾಜ ಬೊಮ್ಮಾಯಿ ಅವರು ವಕೀಲ ಕೆ.ಎನ್.ಜಗದೀಶ್ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಆಕ್ಷೇಪಾರ್ಹವಾದ ಹೇಳಿಕೆ ಅಥವಾ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾದೇಶ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದೆ.












Click it and Unblock the Notifications