ಸಿಎಂ ಸಿದ್ದು ದುಬಾರಿ ವಾಚ್ : ದಿಗ್ವಿಜಯ್ ಸಿಂಗ್ ಮುಗ್ದತೆಯ ಪರಮಾವಧಿ!
ಬೆಂಗಳೂರು, ಫೆ 16: ಊರೆಲ್ಲಾ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಸುದ್ದಿ, ಕಾಂಗ್ರೆಸ್ ಹೈಕಮಾಂಡ್ ಆವರಣದಲ್ಲಿ ಇನ್ನೂ ಟಿಕ್ ಟಿಕ್ ಶಬ್ದ ಮಾಡುತ್ತಿಲ್ಲವೇ?
ಸದ್ಯ ರಾಜ್ಯದಲ್ಲಂತೂ ಭಾರೀ ಸುದ್ದಿ ಮಾಡುತ್ತಿರುವ ವಾಚ್ ಬಗ್ಗೆ, ಮಾಧ್ಯಮದವರು ಸೋಮವಾರ (ಫೆ 15) ಕೇಳಿದ ಪ್ರಶ್ನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಉತ್ತರಿಸಿದ ರೀತಿ ಈ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ. (ಸಿದ್ದು ಕೈಗಡಿಯಾರ ಟೈಂಲೈನ್)
ಹೌದಾ, ಸಿದ್ದರಾಮಯ್ಯ ಅಷ್ಟು ದುಬಾರಿ ಬೆಲೆಯ ವಾಚ್ ಧರಿಸುತ್ತಾರಾ? ನಾನೆಂದೂ ಅವರ ಕೈಯಲ್ಲಿ ಅಂತಹ ದುಬಾರಿ ವಾಚ್ ನೋಡಲಿಲ್ಲವೇ ಎಂದು ದಿಗ್ವಿಜಯ್ ಸಿಂಗ್ ಮುಗ್ದತೆಯಿಂದ ಉತ್ತರಿಸಿದ್ದಾರೆ.
ಈ ಮಧ್ಯೆ, ದುಬಾರಿ ವಾಚ್ ಸುದ್ದಿ ವಿಪಕ್ಷಗಳಿಗೆ ಆಹಾರವಾಗುವುದನ್ನು ತಪ್ಪಿಸಲು ಮತ್ತು ಜನತೆಯ ಮುಂದೆ ತನ್ನ ಇಮೇಜ್ ಕಾಪಾಡಿಕೊಳ್ಳಲು ಸಿದ್ದರಾಮಯ್ಯ ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ. (ಸಿದ್ದು ವಾಚ್ ಬೆಲೆ ಅಷ್ಟೊಂದಾ)
ಒಂದಾ ವಾಚನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಸೈನಿಕರ ಕುಟುಂಬಕ್ಕೆ ನೀಡುವುದು ಇಲ್ಲವೇ ವಿಧಾನಸೌಧದಲ್ಲಿ ಅದನ್ನು ರಾಜ್ಯದ ಸ್ವತ್ತು ಎಂದು ಘೋಷಿಸಲು ಸಿದ್ದು ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿಯಿದೆ.
ದಿಗ್ವಿಜಯ್ ಸಿಂಗ್ ಹೇಳಿದ್ದೇನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...
ಮುಜುಗರಕ್ಕೀಡಾಗುತ್ತಿರುವ ಸಿದ್ದರಾಮಯ್ಯ
ಕುಮಾರಸ್ವಾಮಿಯವರಿಂದ ಚಾಲನೆ ಪಡೆದ ದುಬಾರಿ ವಾಚ್ ಸುದ್ದಿಯಿಂದಾಗಿ ಮುಜುಗರ ಎದುರಿಸುತ್ತಿರುವ ಸಿದ್ದರಾಮಯ್ಯ, ಪಂಚಾಯತ್ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಮಾಮೂಲಿ ವಾಚ್ ಮತ್ತು ಕನ್ನಡಕ ಧರಿಸಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅಷ್ಟರ ಮಟ್ಟಿಗೆ 'ಹ್ಯೂಬ್ಲೋಟ್' ವಾಚ್ ಸಿದ್ದು ಅವರಿಗೆ ಬಿಸಿ ಮುಟ್ಟಿಸಿದೆ.
ಫೆಬ್ರವರಿ 21ಕ್ಕೆ ಸಿದ್ದು ಫೈನಲ್ ನಿರ್ಧಾರ
ಕಾನೂನು ತಜ್ಞರ ಮೊರೆ ಹೋಗಿರುವ ಸಿದ್ದು, ಪಂಚಾಯತ್ ಚುನಾವಣಾ ಪ್ರಚಾರ ಮುಗಿದ ನಂತರ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿಯಿದೆ. ತಜ್ಞರ ವರದಿ ಜೊತೆ ಆಪ್ತರ ಜೊತೆ ಚರ್ಚಿಸಿ, ಫೆಬ್ರವರಿ 21ರಂದು ಸಿದ್ದು ತನ್ನ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವ ಮಾಹಿತಿಯಿದೆ.
ದಿಗ್ವಿಜಯ್ ಸಿಂಗ್ ಹೇಳಿದ್ದು
ದುಬಾರಿ ವಾಚ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ದಿಗ್ವಿಜಯ್ ಸಿಂಗ್, ನಾನೆಂದೂ ಸಿದ್ದರಾಮಯ್ಯನವರ ಕೈಯಲ್ಲಿ ಅಂತಹ ದುಬಾರಿ ವಾಚ್ ನೋಡಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಎಂತಹ ವಾಚ್ ಧರಿಸುತ್ತಾರೆ, ನನ್ನ ಕೈಯಲ್ಲೂ ದುಬಾರಿ ವಾಚ್ ಇಲ್ಲ, ನೋಡಿ ಬೇಕಾದರೆ ಎಂದು ಮಾಧ್ಯಮದವರ ಮುಂದೆ ಮುಗ್ದತೆಯಿಂದ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿ 'ವಾಚ್ ಮ್ಯಾನ್'
ಮುಖ್ಯಮಂತ್ರಿಗಳ ವಾಚ್ ವಿಷಯವನ್ನು ರಾಜಕೀಯ ದಾಳವಾಗಿ ಉಪಯೋಗಿಸುತ್ತಿರುವ ಕುಮಾರಸ್ವಾಮಿಯವರಿಗೆ ಬೇರೇನೂ ಕೆಲಸವಿಲ್ಲ. ಅದಕ್ಕಾಗಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ 'ವಾಚ್ ಮ್ಯಾನ್' ಆಗಿ ಕೆಲಸ ಮಾಡುತ್ತಿದ್ದಾರೆಂದು ಸಚಿವೆ ಉಮಾಶ್ರೀ ಔರಾದ್ ನಲ್ಲಿ ಲೇವಡಿ ಮಾಡಿದ್ದಾರೆ.
ಪೂಜಾರಿ, ಕೃಷ್ಣಗೆ ವಯಸ್ಸಿನ ದೋಷ
ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾರ್ಧನ ಪೂಜಾರಿ ಮತ್ತು ಎಸ್ ಎಂ ಕೃಷ್ಣ ಅವರಿಗೆ ವಯಸ್ಸಾಗಿದೆ, ಅವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ, ಹಿರಿಯರಾದ ಇವರಿಬ್ಬರು ಪಕ್ಷದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಸ್ವಪಕ್ಷೀಯ ಸಂಸದ ವೀರಪ್ಪ ಮೊಯ್ಲಿ ಉಡುಪಿಯಲ್ಲಿ ಎರಡು ದಿನದ ಹಿಂದೆ ಹೇಳಿಕೆ ನೀಡಿದ್ದರು. ಜನಾರ್ಧನ ಪೂಜಾರಿ, ಸಿಎಂ ವಾಚ್ ಬಗ್ಗೆ ನೀಡಿದ್ದ ಹೇಳಿಕೆಗೆ ಮೊಯ್ಲಿ ಈ ರೀತಿ ಪ್ರತಿಕ್ರಿಯಿಸಿದ್ದರು. ತನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಂಡ ಮೊಯ್ಲಿ, ಪೂಜಾರಿ ಮತ್ತು ಕೃಷ್ಣ ಅವರ ಬಗ್ಗೆ ನನಗೆ ಬಹಳ ಗೌರವವಿದೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸೋಮವಾರ (ಫೆ 15) ಉಲ್ಟಾ ಹೊಡೆದಿದ್ದಾರೆ.
ನಿಖಿಲ್ ಗೌಡ ಹೇಳಿದ್ದು
ನನ್ನನ್ನು ಈ ವಿಚಾರದಲ್ಲಿ ಎಳೆದು ತರಬೇಡಿ. ನಾನು ನನ್ನದೇ ಸಂಸ್ಥೆ ನಡೆಸುತ್ತಿದ್ದೇನೆ, ಜೊತೆಗೆ ನಾನು ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ, ನನ್ನ ಆಸಕ್ತಿ ಏನಿದ್ದರೂ ಸಿನಿಮಾ ರಂಗದಲ್ಲಿ. ನನ್ನ ಸಂಪಾದನೆಯ ದುಡ್ಡಿನಲ್ಲಿ ನಾನು ಕಾರ್ ಖರೀದಿಸಿದ್ದೇನೆಂದು ಕುಮಾರಸ್ವಾಮಿ ಪುತ್ರ ನಿಖಿಲ್ ಹೇಳಿಕೆ ನೀಡಿದ್ದಾರೆ.
ಕಾಗೋಡು ತಿಮ್ಮಪ್ಪ
ಕೆಲವರಿಗೆ ಒಳ್ಳೆ ಶರ್ಟ್ ಧರಿಸಬೇಕೆಂದು ಇರುತ್ತೆ, ಕೆಲವರಿಗೆ ಒಳ್ಳೆ ಪ್ಯಾಂಟ್, ಪೆನ್ನು, ವಾಚ್ ಧರಿಸಬೇಕೆಂದು ಇರುತ್ತೆ. ಇದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರ, ಅದನ್ನೆಲ್ಲಾ ನಾವು ಪ್ರಶ್ನಿಸಬಾರದೆಂದು ಕರ್ನಾಟಕ ಅಸೆಂಬ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.