ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ
ಬೆಂಗಳೂರು, ಮಾ.10: ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದ್ದು, ನರೇಂದ್ರ ಮೋದಿ ನಾಯಕತ್ವಕ್ಕೆ ಸಿಕ್ಕ ಜಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಣದಲ್ಲಿಯೂ ಅಭಿನಂದನಾ ಪೋಸ್ಟ್ಗಳನ್ನು ಹಾಕಿದ್ದಾರೆ.
Koo Appಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಶ್ರೀ @narendramodi ರವರ ನಾಯಕತ್ವ ಮತ್ತು ಬಿಜೆಪಿಯ ಅಭಿವೃದ್ಧಿ ರಾಜಕಾರಣ ಪರವಾದ ಸುಸ್ಪಷ್ಟ ಜನಾದೇಶವಾಗಿದೆ. ಬಿಜೆಪಿ ಆಡಳಿತವಿದ್ದ 4 ರಾಜ್ಯಗಳಲ್ಲಿ, ಮತ್ತೊಮ್ಮೆ ಪಕ್ಷಕ್ಕೆ ಜನತೆ ಆಶೀರ್ವದಿಸಿದ್ದು, ವಿಪಕ್ಷಗಳ ಅಪಪ್ರಚಾರವನ್ನು ಮೀರಿ, ಸುಶಾಸನ ಮತ್ತು ಅಭಿವೃದ್ಧಿಗೆ ದೊರೆತ ಮನ್ನಣೆಯಾಗಿದೆ. (1/2) - BS Yediyurappa (@bsybjp) 10 Mar 2022
'ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಬಿಜೆಪಿಯ ಅಭಿವೃದ್ಧಿ ರಾಜಕಾರಣ ಪರವಾದ ಸುಸ್ಪಷ್ಟ ಜನಾದೇಶವಾಗಿದೆ' ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತವಿದ್ದ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡಿದ್ದಾರೆ. ವಿರೋಧ ಪಕ್ಷಗಳ ಅಪಪ್ರಚಾರವನ್ನೂ ಮೀರಿ, ಸುಶಾಸನ ಮತ್ತು ಅಭಿವೃದ್ಧಿಗೆ ದೊರೆತ ಮನ್ನಣೆಯಾಗಿದೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬುದುರಲ್ಲಿ ಯಾವುದೆ ಹುರುಳಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಈ ಸರ್ಕಾರದ ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬಿಜೆಪಿ ಜನಪರ ರಾಜಕಾರಣಕ್ಕೆ ಮತದಾರರ ಬೆಂಬಲ: ಡಾ.ಸಿ.ಎನ್.ಅಶ್ವತ್ಥನಾರಾಯಣ
'ಕೋವಿಡ್ ಸೇರಿದಂತೆ ದೇಶಕ್ಕೆ ಸವಾಲೊಡ್ಡಿದ ಹಲವಾರು ಸಂಕಷ್ಟಗಳನ್ನು ಜನಪರ ಕಾಳಜಿಯಿಂದ ಪರಿಹರಿಸಲು ಬಿಜೆಪಿ ಪರಿಶ್ರಮಿಸಿರುವುದನ್ನು ಮತದಾರರು ಬೆಂಬಲಿಸಿರುವುದನ್ನು ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಸ್ಪಷ್ಟ ಮುನ್ನಡೆ ಪಡೆದಿರುವ ಫಲಿತಾಂಶ ಸೂಚಿಸುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬಿ.ಜೆ.ಪಿ. ಅಧಿಕಾರವನ್ನು ಯಾವತ್ತೂ ಪ್ರತಿಷ್ಠೆಯ ಸ್ಥಾನಮಾನ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಅದು ಜನಹಿತಕ್ಕಾಗಿ ಕೆಲಸ ಮಾಡಲು ಸಿಗುವ ಅವಕಾಶ ಎಂದೇ ಭಾವಿಸುತ್ತದೆ. ಪಕ್ಷದ ಸಾಧನೆ ನಮ್ಮನ್ನು ಇನ್ನಷ್ಟು ವಿನೀತರನ್ನಾಗಿಯೂ, ಜನಪರವನ್ನಾಗಿಯೂ ಮಾಡಲಿದೆ ಎಂದಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಾಧನೆ ಬಹುತೇಕ ಸಿಂಗಲ್ ಡಿಜಿಟ್ ಗೆ ಇಳಿದಿದೆ. ಒಂದೇ ಕುಟುಂಬಕ್ಕೆ ಸೀಮಿತವಾದ ವಂಶಪಾರಂಪರ್ಯ ರಾಜಕಾರಣವನ್ನು ನಮ್ಮ ಜನರು ಬೆಂಬಲಿಸುವುದಿಲ್ಲ ಎಂಬ ಸಂದೇಶ ಈ ಚುನಾವಣಾ ಫಲಿತಾಂಶದಲ್ಲಿ ಇದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕೂಡ ಜನವಿರೋಧಿ ಕಾಂಗ್ರೆಸ್ಸಿಗೆ ಇದೇ ಸ್ಥಿತಿ ಬರುವ ಸೂಚನೆ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರಕ್ಕೆ ಆನೆಬಲ: ಸಚಿವ ಸಿ. ಸಿ. ಪಾಟೀಲ್
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಇವುಗಳಲ್ಲಿ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ 4 ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ಜನಬೆಂಬಲ ವ್ಯಕ್ತವಾಗಿರುವುದು ರಾಷ್ಟ್ರದ ಭವಿಷ್ಯದ ದ್ರಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ಈ ಫಲಿತಾಂಶವನ್ನು ಅವಲೋಕಿಸಿದರೆ ದೇಶದ ಅಭಿವೃದ್ಧಿಯ ಹಿನ್ನಲೆಯಲ್ಲಿ ಡಬಲ್ ಎಂಜಿನ್ ಸರ್ಕಾರವೇ ಅಗತ್ಯ ಎಂಬ ಸಂದೇಶವಿದೆ. ನರೇಂದ್ರ ಮೋದಿಜಿ ಸಾರಥ್ಯದ ಪ್ರಗತಿಯ ರಥದ ನಾಗಲೋಟವನ್ನು ಇತರ ಪಕ್ಷಗಳು ಸರಿಗಟ್ಟಲು ಸಾಧ್ಯವೇ ಇಲ್ಲ ಎಂಬುದನ್ನು ಮತದಾರ ಪ್ರಭುಗಳೇ ಈ ಫಲಿತಾಂಶದಲ್ಲಿ ಸ್ಪಷ್ಟಗೊಳಿಸಿದ್ದಾರೆ ಎಂದು ಸಿ. ಸಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕರ್ತರಿಗೆ ಅಭಿನಂದನೆ
'ಪಕ್ಷದ ಅಭಿವೃದ್ಧಿ ಕಾರ್ಯಗಳು ಹಾಗೂ ರಾಷ್ಟ್ರ ಸೇವಾ ಮನೋಭಾವದ ಪರಿಣಾಮವಾಗಿ ಮತದಾರ ಪ್ರಭುಗಳು ಇಂದು ಮತ್ತೆ ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಕಾಣುವುದು ನಿಶ್ಚಿತ. ಮತದಾರ ಪ್ರಭುಗಳಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು' ಎಂದು ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ಗೆ ತಕ್ಕಪಾಠ
ಕೃಷಿ ಸಚಿವ ಬಿ.ಸಿ. ಪಾಟೀಲ, 'ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತದಾರರು ತಕ್ಕಪಾಠ ಕಲಿಸಿದ್ದು,ನಾಯಕ ಪ್ರಧಾನಿನರೇಂದ್ರ ಮೋದಿಯವರ ಜನಪರಕಾರ್ಯಗಳಿಗೆ ಅಭಿವೃದ್ಧಿಗೆ ಜನ ಕೈಹಿಡಿದಿದ್ದಾರೆ.ಪಂಚರಾಜ್ಯಗಳ ಚುನಾವಣೆ ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳಜಗಳದಿಂದಾಗಿಯೇ ರಾಜ್ಯದಲ್ಲಿ ಧೂಳಿಪಟವಾಗಲಿದೆ' ಎಂದು ಹೇಳಿದ್ದಾರೆ.
ಮೋದಿ ಅಭಿವೃದ್ಧಿಗೆ ಜನಮನ್ನಣೆ: ಕಾರಜೋಳ
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಚ್ಚಾರಿತ್ರ ಮತ್ತು ಮತ್ತು ಅಭಿವೃದ್ಧಿಪರ ಆಡಳಿತಕ್ಕೆ ನೀಡಿದ ಇಂದಿನ ಪಂಚರಾಜ್ಯಗಳು ನೀಡಿದ ಚುನಾವಣಾ ಫಲಿತಾಂಶ ಇದು. ಅವರ ಹೆಜ್ಜೆಯಲ್ಲಿಯೇ ಹೆಜ್ಜೆ ಹಾಕುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಚ್ಚಾರಿತ್ರ ಮತ್ತು ಜನಪರ ಆಡಳಿತಕ್ಕೆ ಅಭೂತಪೂರ್ವ ಐತಿಹಾಸಿಕ ಮನ್ನಣೆಯನ್ನು ಜನತೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಜನಸಾಮಾನ್ಯರ, ದೀನ-ದಲಿತರ, ಹಿಂದುಳಿದವರ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡ ಮತ್ತು ಕೈಗೆತ್ತಿಕೊಂಡಿರುವ ಹಲವಾರು ಕಾರ್ಯಕ್ರಮಗಳಿಗೆ ಜನತೆ ಇದೀಗ ಅನುಮೋದನೆ ನೀಡಿದ್ದಾರೆ. ಈ ಗೆಲುವಿನಿಂದ ಮತ್ತಷ್ಟು ವಿನಮ್ರವಾಗಿ ಭಾರತೀಯ ಜನತಾ ಪಕ್ಷ ಜನ ಕಲ್ಯಾಣಕ್ಕೆ ಮತ್ತು ದೇಶಸೇವೆಗೆ ಸಮರ್ಪಿಸಿಕೊಳ್ಳಬೇಕಾದದ್ದು ನರೇಂದ್ರ ಮೋದಿಯವರಿಗೆ ಸಲ್ಲಿಸಬಹುದಾದ ಗೌರವ ಎಂದು ಕಾರಜೋಳ ಆಭಿಪ್ರಾಯಪಟ್ಟಿದ್ದಾರೆ.












Click it and Unblock the Notifications