ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು
ಬೆಂಗಳೂರು, ಡಿಸೆಂಬರ್. 12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ವಿವರಗಳು ಇಲ್ಲಿವೆ.
* ಮುಂದಿನ ಆರ್ಥಿಕ ವರ್ಷದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯದವರೆಗಿನ 22.33 ಲಕ್ಷ ನೀರಾವರಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲು 2018-19 ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ ರೂ.12,000 ಕೋಟಿ ಮೀಸಲಾಗಿಡಲು ಒಪ್ಪಿಗೆ.
* ಕುಮದ್ವತಿ ನದಿಯ ನೀರನ್ನು ಎತ್ತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ತಾಲ್ಲೂಕಿನ ಅಸುಂಡಿ ಹಾಗೂ ಸುತ್ತಮುತ್ತಲಿನ 17 ಕೆರೆಗಳನ್ನು ತುಂಬಿಸುವ ರೂ.79.8 ಕೋಟಿ ಮೊತ್ತದ ಸವಿವರ ಯೋಜನಾ ವರದಿಗೆ ಸಂಪುಟದ ಆಡಳಿತಾತ್ಮಕ ಅನುಮೋದನೆ.

* ರಾಜ್ಯದಲ್ಲಿ 418.16 ಕಿ. ಮೀ.ರಸ್ತೆ ಅಭಿವೃದ್ಧಿಪಡಿಸಲು ರೂ. 5,334 ಕೋಟಿ ವೆಚ್ಚದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂರನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲು ಒಪ್ಪಿಗೆ.
* ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ 32 ಕೆರೆಗಳಿಗೆ ಶಿಕಾರಿಪುರ ತಾಲ್ಲೂಕಿನ ಭಾರ್ಸಿ ಗ್ರಾಮದ ಸಮೀಪದಲ್ಲಿರುವ ವರದಾ ನದಿಯ ಮೂಲದಿಂದ ನೀರನ್ನು ಎತ್ತಿ ತುಂಬಿಸುವ ರೂ.62.58 ಕೋಟಿ ವೆಚ್ಚದ ಬನವಾಸಿ ಏತ ನೀರಾವರಿ ಯೋಜನೆಯ ಸವಿವರ ಯೋಜನಾ ವರದಿಗೆ ಅನುಮೋದನೆ.
* ಕನ್ನಡ ಚಲನಚಿತ್ರ ಅಮೃತ ಮಹೋತ್ಸವ ಭವನದ ಕಾಮಗಾರಿಗೆ ಈಗಾಗಲೇ ಬಿಡುಗಡೆ ಮಾಡಿರುವ ರೂ.9.62 ಕೋಟಿ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ ರೂ.13.22 ಕೋಟಿ ಒದಗಿಸಿ ಪರಿಷ್ಕೃತ ಅಂದಾಜು ಮೊತ್ತ ರೂ.22.84 ಕೋಟಿಗೆ ಸಂಪುಟದ ಒಪ್ಪಿಗೆ.
* ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರ ವಿಭಾಗಕ್ಕೆ ಉಪಕರಣ ಹಾಗೂ ಸಲಕರಣೆಗಳನ್ನು ರೂ.8.06 ಕೋಟಿ ವೆಚ್ಚದಲ್ಲಿ ಖರೀದಿಸಲು ನಿರ್ಧಾರ ಹಾಗೂ ಈ ಆಸ್ಪತ್ರೆಗಳಲ್ಲಿನ ನೇತ್ರ ತಜ್ಞರಿಗೆ ಪ್ರತಿ ಮಾಹೆ 75 ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯ ಗುರಿ ನಿಗದಿ.
* ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಹೊಸ ಕಟ್ಟಡದ ಮೇಲೆ 30 ಕೋಟಿ ರೂ. ವೆಚ್ಚದಲ್ಲಿ ಐದು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಸಂಪುಟದ ಆಡಳಿತಾತ್ಮಕ ಅನುಮೋದನೆ.
* ಚಿಕ್ಕಮಗಳೂರು ಜಿಲ್ಲೆಯ ಮಸ್ಕಲಿ ಮತ್ತು ಸರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಒತ್ತುವರಿ ಭೂಮಿಯಲ್ಲಿ ವಾಸಿಸುತ್ತಿದ್ದ ಕುಟುಂಬಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಆ ಕುಟುಂಬಗಳ ಪುನರ್ವಸತಿಗೆ ರೂ.20.78 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಕಲ್ಪಿಸಲು ನಿರ್ಧಾರ.
* ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ 346 ಸೇವೆಗಳನ್ನು ಒಂದೆಡೆ ದೊರಕಿಸಿಕೊಡುವ ಕೇಂದ್ರಿಕೃತ ಅಂತರ್ಜಾಲ ವ್ಯವಸ್ಥೆಯನ್ನು ರಾಷ್ಟ್ರೀಯ ಸೂಚನಾ ಕೇಂದ್ರದ ಸಹಯೋಗದೊಡನೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ-ಆಡಳಿತ ನಿರ್ದೇಶನಾಲಯದ ಮೂಲಕ ಸೇವಾ ಸಿಂಧು ಪೋರ್ಟಲ್ ಪ್ರಾರಂಭಕ್ಕೆ ನಿರ್ಧಾರ.
* ರಾಜ್ಯದ ಎಲ್ಲೆಡೆ ಆಹಾರೋತ್ಪಾದನೆಯನ್ನು ಹೆಚ್ಚಿಸಲು ಹೆಸರಾಂತ ಕೃಷಿ ತಜ್ಞ ಡಾ ಎಂ. ಎಸ್. ಸ್ವಾಮಿನಾಥನ್ ಅವರ ನೇತೃತ್ವದ ದಾರ್ಶನಿಕ ಗುಂಪಿನ ಸಲಹೆಯ ಮೇರೆಗೆ ನಗರ ಪ್ರದೇಶಗಳಲ್ಲಿ ವಿಶೇಷ ಕೃಷಿ ಉತ್ಪನ್ನ ವಲಯಗಳ ರಚಿಸಲು ಸಚಿವ ಸಂಪುಟದ ಅನುಮೋದನೆ.
* ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ದಾಸನಾಪುರ ಹೋಬಳಿಯ ಮಾಚೋಹಳ್ಳಿ ಗ್ರಾಮದಲ್ಲಿ ಲಭ್ಯವಿರುವ 96.12 ಎಕರೆ ಸರ್ಕಾರಿ ಖರಾಬು ಗೋಮಾಳ ಜಮೀನಿನ ಪೈಕಿ 19.20 ಎಕರೆ ಜಮೀನನ್ನು ಸರ್ಕಾರಿ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಒಳಗೊಂಡಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲು ಪ್ರಸ್ತಾವನೆಗಳಿಗೆ ಒಪ್ಪಿಗೆ.












Click it and Unblock the Notifications