ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ನಿಗದಿ
ಪಂಚರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶವನ್ನು ತನ್ನದಾಗಿಸಿಕೊಂಡಿರುವ ಭಾರತೀಯ ಜನತಾ ಪಕ್ಷ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಉತ್ತರಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಆಧಿಕಾರ ಮರು ಸ್ಥಾಪನೆ ಬೆನ್ನಲ್ಲೇ ಮುಂಬರುವ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಕರ್ನಾಟಕದಲ್ಲೂ ಬಿರುಸಿನ ರಾಜಕೀಯ ಚಟುವಟಿಕೆ, ರಾಜ್ಯ ನಾಯಕರ ದೆಹಲಿ ಪ್ರವಾಸ ಹೆಚ್ಚಾಗುವ ಮುನ್ಸೂಚನೆ ಸಿಗಬಹುದು ಎಂದೆನಿಸಲಾಗಿತ್ತು. ಆದರೆ, ಇದಕ್ಕೆಲ್ಲ ಸದ್ಯಕ್ಕೆ ಅಲ್ಪವಿರಾಮ ಇಡಲಾಗಿದೆ. ಯುಗಾದಿ ತನಕ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂಬ ಸಂದೇಶ ಹೈಕಮಾಂಡ್ ಕಡೆಯಿಂದ ಕರ್ನಾಟಕ ಬಿಜೆಪಿಗೆ ಸಿಕ್ಕಿದೆ.
ಈಗ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದಿದ್ದು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಆಡಳಿತವಿರುವ ಇತರೆ ರಾಜ್ಯಗಳ ಮೇಲೆ ಚುನಾವಣೆ ಫಲಿತಾಂಶ ಪರಿಣಾಮ ಬೀರಲಿದೆ.
ಶೀಘ್ರದಲ್ಲೇ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿ ಸಂಸ್ಥೆ ಐಎಎನ್ಎಸ್ಗೆ ತಿಳಿಸಿದ್ದಾರೆ. 2023 ರ ರಾಜ್ಯ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ತನ್ನ ನ್ಯೂನತೆಗಳನ್ನು ನಿವಾರಿಸಲು ಪಕ್ಷಕ್ಕೆ ಎನರ್ಜಿ ಟಾನಿಕ್ ನೀಡಲು ಸಿದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಇನ್ನೊಂದೆಡೆ ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಚರ್ಚೆ ಮಾಡಿರುವ ಸುದ್ದಿ ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯಕ್ಕಂತೂ ಇಲ್ಲ, ಏಪ್ರಿಲ್ ತಿಂಗಳ ಮೊದಲ ವಾರದ ನಂತರವಷ್ಟೇ ಈ ಬಗ್ಗೆ ಕೇಂದ್ರ ಬಿಜೆಪಿ ನಾಯಕರು ಗಮನ ಹರಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. "ಗುಜರಾತ್ ರಾಜ್ಯ" ಮಾದರಿಯ ಸಂಪುಟ ಪುನರ್ ರಚನೆಯನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ಹೇಳಿವೆ. 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಬಿಜೆಪಿ ಯೋಜನೆ ಹಾಕಿಕೊಂಡಿದ್ದು, ಸಂಪುಟ ವಿಸ್ತರಣೆಯೂ ಈ ಯೋಜನೆಯ ಭಾಗವಾಗಲಿದೆ.

ಬೊಮ್ಮಾಯಿ ಕೂಡಾ ದೆಹಲಿಗೆ ಹೋಗ್ತಿಲ್ಲ
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ರಾಜ್ಯದ ಪ್ರಮುಖ ನಾಯಕರು, ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ನಿರೀಕ್ಷೆಯಿತ್ತು. ತಮ್ಮ ರಾಜಕೀಯ ಆಪ್ತರೊಂದಿಗೆ ಸಮಾಲೋಚನೆಗಾಗಿ ನವದೆಹಲಿಗೆ ವಿಮಾನ ಹತ್ತಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿಯಿತ್ತು. ಆದರೆ, ಸದ್ಯಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದರೂ ಬಿಜೆಪಿ ಹೈಕಮಾಂಡ್ ನಾಯಕರ ದರ್ಶನ, ಚರ್ಚೆ ಈ ತಿಂಗಳಲ್ಲಿ ಸಾಧ್ಯವಿಲ್ಲ ಎಂಬ ಸತ್ಯ ಅರಿವಾಗಿದೆ. ಹೀಗಾಗಿ, ಸಿಎಂ ಬೊಮ್ಮಾಯಿ ಕೂಡಾ ಬಜೆಟ್ ಅಧಿವೇಶನ ಮುಕ್ತಾಯಗೊಳಿಸಿದ ಬಳಿಕ ದೆಹಲಿ ನಾಯಕರ ಜೊತೆ ಸಮಾಲೋಚನೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ನಾಲ್ಕು ಸಚಿವ ಸ್ಥಾನ ಭರ್ತಿ ಖಚಿತ
ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ.ಆದರೆ, ಇನ್ನೂ ಎರಡು ಸ್ಥಾನವನ್ನು ತುಂಬುವ ಸಾಧ್ಯತೆಯೂ ಇದೆ. ಬಿಜೆಪಿಯ ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಕೈಬಿಡುವ ಸಾಧ್ಯತೆಯೂ ಇದೆ. ಕೆಲವರು ತಮಗೆ ಅವಕಾಶ ನೀಡುವಂತೆ ಸಂಪುಟದಿಂದ ಹಿರಿಯ ನಾಯಕರನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ವರದಿಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರಗೆ ಪ್ರಮುಖ ಕ್ಯಾಬಿನೆಟ್ ಸ್ಥಾನವನ್ನು ಕಾಯ್ದಿರಿಸಲಾಗಿದೆ. ಆದರೆ, ಎಲ್ಲವೂ ಸದ್ಯಕ್ಕೆ ರಾಜಕೀಯ ಪಡಸಾಲೆಯ ಗುಸು ಗುಸು ಸುದ್ದಿಯಾಗಿದ್ದು, ಯಾವುದಕ್ಕೂ ಸ್ಪಷ್ಟ ಆಧಾರಗಳಿಲ್ಲ.

ಯುಗಾದಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆ
ಐಎಎನ್ಎಸ್ ವರದಿ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ಯುಗಾದಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಬಿಜೆಪಿ ಮೂಲಗಳ ಪ್ರಕಾರ, ಪಕ್ಷದ ಕೇಂದ್ರ ನಾಯಕತ್ವವು ಕರ್ನಾಟಕದಲ್ಲಿ ಪಕ್ಷ ಮತ್ತು ಸರ್ಕಾರವನ್ನು ಮರುಸಂಘಟಿಸಲು ಉತ್ಸುಕವಾಗಿದೆ. ಹೀಗಾಗಿ, ಹಿರಿತಲೆಗಳಿಗೆ ಕೊಕ್ ನೀಡಿ, ಉತ್ಸಾಹಿ ಯುವ ಶಾಸಕರನ್ನು ಸಚಿವ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ಬಯಸಿದೆ. ಹೀಗಾಗಿ ಈ ಬಾರಿ ಸಂಪುಟ ವಿಸ್ತರಣೆ/ ಪುನರ್ ರಚನೆ ಹಲವು ಅಚ್ಚರಿಗೆ ಕಾರಣವಾಗಬಹುದು.

ನಿರಂತರವಾಗಿ ಕ್ಯಾಬಿನೆಟ್ ಖಾತೆ
ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಕರ್ನಾಟಕದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಪಕ್ಷವು ತಮ್ಮನ್ನು ಆಯ್ಕೆ ಮಾಡಿದರೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧ ಎಂದು ಶುಕ್ರವಾರ ಹೇಳಿದ್ದಾರೆ. ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತನ್ನ ಸಚಿವರ ನಿರ್ಲಕ್ಷ್ಯ ಧೋರಣೆಯನ್ನು ಟೀಕಿಸಿದ್ದಾರೆ. 2006, 2008 ಮತ್ತು 2019 ರಲ್ಲಿ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರಗಳ ಅವಧಿಯಲ್ಲಿ ನಿರಂತರವಾಗಿ ಕ್ಯಾಬಿನೆಟ್ ಖಾತೆಗಳನ್ನು ಪಡೆದಿರುವವರನ್ನು ಕೈಬಿಡಬೇಕು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.












Click it and Unblock the Notifications