ರಾಜೀನಾಮೆ ಕೊಟ್ಟು ಬಂದಿರುವ ಶಾಸಕರ ಸ್ಥಿತಿ ಅತಂತ್ರ?
ಬೆಂಗಳೂರು, ಜ. 24: ಮಂತ್ರಿ ಪದವಿಗಾಗಿಯೆ ರಾಜಿನಾಮೆ ಕೊಟ್ಟು ಬಿಜೆಪಿಗೆ ಬಂದಿರುವ ಶಾಸಕರ ಸ್ಥಿತಿ ಅತಂತ್ರವಾಗುತ್ತಿದೆ. ಸಿಎಂ ವಿದೇಶ ಪ್ರವಾಸದಿಂದ ಬಂದ ಬಳಿಕ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ಭರವಸೆಯಲ್ಲಿದ್ದವರಿಗೆ ನಿರಾಸೆ ಆಗಿದೆ. ಶೀಘ್ರ ಸಂಪುಟ ವಿಸ್ತರಣೆ ಮಾಡುವಂತೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ. ಪಾಟೀಲ್, ಮಾಜಿ ಶಾಸಕ ಆರ್. ಶಂಕರ್ ಬಹಿರಂಗವಾಗಿ ಒತ್ತಡ ಹಾಕಿದ್ದಾರೆ. ಇನ್ನು ದೆಹಲಿ ಚುನಾವಣೆಯ ನೆಪದಿಂದ ಹೈಕಮಾಂಡ್ ಕೂಡ ಸಂಪುಟ ವಿಸ್ತರಣೆ ಬಗ್ಗೆ ಸೂಚನೆ ಕೊಟ್ಟಿಲ್ಲ.

ಸಂಪುಟ ವಿಸ್ತರಣೆ ಮೇಲೆ ದೆಹಲಿ ಚುನಾವಣೆ ನೆರಳು
ಮಂತ್ರಿ ಆಗುವ ಉದ್ದೇಶದಿಂದ ಬಿಜೆಪಿ ಸೇರಿದ್ದವರಿಗೆ ನಿರಾಸೆ ಆಗುತ್ತಿದೆ. ಸಂಪುಟ ವಿಸ್ತರಣೆ ವಿಳಂಬ ಇದಕ್ಕೆ ಕಾರಣ. ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಈಗ ಬಹಿರಂಗವಾಗಿಯೆ ಶಾಸಕರು ಮಾತನಾಡುತ್ತಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಗಮನ ಕೊಟ್ಟಿದೆ. ಅದೇ ಕಾರಣವನ್ನು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ರವಾನೆ ಮಾಡಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ವಿಳಂಬದಿಂದ ಬೇಸರವಾಗಿದೆ ಎಂದ ಬಿ.ಸಿ. ಪಾಟೀಲ್
ಉಪ ಚುನಾವಣೆಯಲ್ಲಿ ಗೆದ್ದವರಿಗೆ ಮೊದಲು ಮಂತ್ರಿ ಮಾಡಲಾಗುತ್ತದೆ ಎಂಬ ಮಾಹಿತಿ ಬರುತ್ತಿದ್ದಂತೆಯೆ ಎಲ್ಲ 17 ಶಾಸಕರು ಗಲಿಬಿಲಿಯಾಗಿದ್ದಾರೆ. ಮೊದಲು ಎಲ್ಲರಿಗೂ ಮಂತ್ರಿ ಮಾಡುವ ಭರವಸೆಯನ್ನು ಯಡಿಯೂರಪ್ಪ ಕೊಟ್ಟಿದ್ದರು ಎನ್ನಲಾಗಿದೆ. ಹಾಗಾಗಿಯೆ ಇವತ್ತು ಬೆಂಗಳೂರಿನಲ್ಲಿ ಮಾತನಾಡಿರುವ ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ. ಪಾಟೀಲ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ತಕ್ಷಣ ಸಂಪುಟ ವಿಸ್ತರಣೆ ಮಾಡಬೇಕು ಎಂದಿದ್ದಾರೆ. ಕೇವಲ 16-17 ಜನರು ಮಾತ್ರ ಆಡಳಿತ ನಡೆಸುತ್ತಿದ್ದಾರೆ. ಅದರಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಪರೋಕ್ಷವಾಗಿ ಬಿಜಪಿ ಹೈಕಮಾಂಡ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ರಾಜೀನಾಮೆ ಪಡೆಯಲು ಆರ್. ಶಂಕರ್ ಒತ್ತಾಯ
ಪರಿಷತ್ ಸದಸ್ಯತ್ವಕ್ಕೆ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಅವರು ಕೊಟ್ಟಿರುವ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಆರ್. ಶಂಕರ್ ಒತ್ತಾಯ ಮಾಡಿದ್ದಾರೆ. ಬೇಕಾದರೆ ಡಿಸಿಎಂ ಲಕ್ಷ್ಮಣ ಸವದಿ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆದುಕೊಳ್ಳಲಿ. ಹಿಂದೆ ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸರ್ಕಾರ ಬರಲು ಕಾರಣನಾಗಿದ್ದೇವೆ. ಹಾಗಾಗಿ ನನಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಹೆಚ್ಚಾಗುತ್ತಿದೆ ಸಂಪುಟ ವಿಸ್ತರಣೆ ವಿಳಂಬದ ಅತೃಪ್ತಿ
ಸಂಪುಟ ವಿಸ್ತರಣೆ ವಿಳಂಬದಿಂದ ಬಿಜೆಪಿ ಸರ್ಕಾರ ರಚನೆ ಆಗಲು ರಾಜೀನಾಮೆ ಕೊಟ್ಟಿದ್ದ ಶಾಸಕರಲ್ಲಿ ಆತಂಕ ಹಾಗೂ ಅತೃಪ್ತಿ ಹೆಚ್ಚಾಗುತ್ತಿದೆ. ಇದರಿಂದಾಗಿ ಇದೀಗ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಧೋರಣೆ ಹೀಗೆ ಮುಂದುವರೆದರೆ ಈ ವಾರದಲ್ಲಿ ಸಭೆ ಸೇರಲು ಎಲ್ಲ 17 ಜನರು ಮುಂದಾಗಿದ್ದಾರೆ. ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಆದರೆ ಇದೇ ತಿಂಗಳಲ್ಲಿ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಬಹುತೇಕ ಎಲ್ಲವೂ ಸರಿ ಆಗಲಿದೆ. ಆದರೆ ಅಂತಹ ಲಕ್ಷಣಗಳು ಬಿಜೆಪಿ ವಲಯದಲ್ಲಿ ಕಂಡು ಬರುತ್ತಿಲ್ಲ. ಹಾಗಾಗಿ ಮತ್ತೊಂದು ರಾಜಕೀಯ ಮೇಲಾಟಕ್ಕೆ ಸಂಪುಟ ವಿಸ್ತರಣೆ ವಿಳಂಬ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications