ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ರದ್ದು ಮಾಡ್ತಾರಾ ಸಿಎಂ?
ಬೆಂಗಳೂರು, ಮಾ. 03: ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆ ( NPS ) ಯೋಜನೆಯನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರದ್ದು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
ರಾಜ್ಯದಲ್ಲಿ 2006 ರಿಂದ ನೇಮಕವಾದ ಸರ್ಕಾರಿ ನೌಕರರಿಗೆ NPS ಯೋಜನೆ ಅಡಿ ಪಿಂಚಣಿ ನಿಗದಿ ಗೊಳಿಸಲಾಗುತ್ತಿದೆ. ರಾಜ್ಯದ 2. 20 ಲಕ್ಷ ರಾಜ್ಯ ಸರ್ಕಾರಿ ನೌಕರರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಈ ಯೋಜನೆಯಡಿ ಸರ್ಕಾರಿ ನೌಕರನ ಪಾಲು ಶೇ. 10 ರಷ್ಟು ಮತ್ತು ಸರ್ಕಾರದ ಪಾಲು ಶೇ. 14 ರಷ್ಟು ಕಟಾವು ಮಾಡಿ ಪೆನ್ಸನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಪ್ ಮೆಂಟ್ ಅಥಾರಿಟಿಯ ನ್ಯಾಷನಲ್ ಸೆಕ್ಯುರಿಟಿ ಅಂಡ್ ಡೆವಲಪ್ ಮೆಂಟ್ ಲಿ. ಪಾವತಿಸಲಾಗಿದೆ. ಈವರೆಗೂ ಸುಮಾರು 15,500 ಕೋಟಿ ರೂ. ಆಗಿರುತ್ತದೆ.
ಅರಂಭದಲ್ಲಿ ಯೋಜನೆಯಿಂದ ನಿವೃತ್ತ ನೌಕರರು ಕೋಟ್ಯಧಿಪತಿಗಳಾಗುತ್ತಾರೆ. ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಿಸಬಹುದು ಎಂಬ ಭ್ರಮೆ ಮೂಡಿಸಲಾಗಿತ್ತು. ವಾಸ್ತವದಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಸರಿಯಾದ ಪಿಂಚಣಿ ಸಿಗದೇ ನಿವೃತ್ತ ನೌಕರರು ಮತ್ತು ಅವರ ಅವಲಂಬಿತರು ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಈ ಎನ್ಪಿಎಸ್ ಯೋಜನೆಯಿಂದ ನಿವೃತ್ತ ನೌಕರರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ ಯ ಪ್ರಕಾರ ನೌಕರರ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ಒದಗಿಸಿಲ್ಲ ಇದರಿಂದ ನೌಕರರು ನಿವೃತ್ತಿ ಬಳಿಕ ಅಭದ್ರತೆಗೆ ಒಳಗಾಗುತ್ತಿದ್ದಾರೆ ಎಂದು ಎನ್ ಪಿಎಸ್ ಯೋಜನೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಂಘ ವಿವರ ನೀಡಿದೆ.

ಎನ್ಪಿಎಸ್ ಯೋಜನೆ ರದ್ದು ಪಡಿಸುವಂತೆ ಈಗಾಗಲೇ ಅನೇಕ ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಹೋರಾಟಗಳು ನಡೆಯುತ್ತಿವೆ. ಎನ್ಪಿಎಸ್ ಯೋಜನೆಯಿಂದ ನೌಕರರಿಗೆ ಆಗುತ್ತಿರುವ ಅನ್ಯಾಯ ಪರಿಗಣಿಸಿ ರಾಜಸ್ಥಾನ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಎನ್ ಪಿಎಸ್ ಯೋಜನೆಯನ್ನು ರದ್ದು ಗೊಳಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸಹ ಎನ್ಪಿಎಸ್ ಯೋಜನೆ ರದ್ದು ಮಾಡಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಆಗ್ರಹಿಸಿದ್ದಾರೆ.

ಎನ್ಪಿಎಸ್ ಯೋಜನೆ ಅಳವಡಿಸುವ ಸಂದರ್ಭದಲ್ಲಿ ಈ ಯೋಜನೆಗೆ ಒಳಪಡುವ ನೌಕರರು ಕೋಟ್ಯಧಿತಿಗಳಾಗುತ್ತಾರೆ ಎಂದು ಹೇಳಲಾಗಿತ್ತು. ವಾಸ್ತವದಲ್ಲಿ ಹನ್ನೆರಡು ವರ್ಷದ ಅವಧಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರು ಮಾಸಿಕ ಪಿಂಚಣಿ 978 ರೂ. ರಿಂದ 2500 ರೂ. ಪಡೆಯುತ್ತಿದ್ದಾರೆ. ಇದರಿಂದ ನಿವೃತ್ತಿ ಜೀವನ ಸಾಗಿಸಲು ಸಾಧ್ಯವೇ? ನಿವೃತ್ತಿ ನೌಕರರ ಅವಲಂಭಿತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತಿವೆ. ಎನ್ಪಿಎಸ್ ಯೋಜನೆ ಅಳವಡಿಸುವ, ರದ್ದು ಪಡಿಸುವ ಅಧಿಕಾರ ರಾಜ್ಯ ಸರ್ಕಾರಗಳ ವಿವೇಚನೆಗೆ ನೀಡಿದ್ದು, ಕರ್ನಾಟಕ ಸರ್ಕಾರ ಈ ಕೂಡಲೇ ಎನ್ಪಿಎಸ್ ಪಿಂಚಣಿ ಯೋಜನೆ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications