ಕುಮಾರಸ್ವಾಮಿ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?
ಬೆಂಗಳೂರು, ಫೆಬ್ರವರಿ 08: ಕುಮಾರಸ್ವಾಮಿ ಮಂಡಿಸುತ್ತಿರುವ ಕರ್ನಾಟಕ ರಾಜ್ಯ 2019-20ನೇ ಸಾಲಿನ ಬಜೆಟ್ನಲ್ಲಿ ಶಿಕ್ಷಣಕ್ಕೆ ಬೃಹತ್ ಅನುದಾನ ದೊರೆಯದಿದ್ದರೂ ಸಹ ಶಿಕ್ಷಕರಿಗೆ ತರಬೇತಿ, ಮೂಲಭೂತ ಸೌಕರ್ಯ ಹೆಚ್ಚಳ ಮತ್ತು ಕೌಶಲ್ಯ ತರಬೇತಿ ಹೆಚ್ಚಿಸಲು ಹೆಚ್ಚು ಒತ್ತು ನೀಡಲಾಗಿದೆ.
ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ಬಜೆಟ್ನಲ್ಲಿ ನೀಡಿರುವ ಅನುದಾನ ಮತ್ತು ಘೋಷಣೆಗಳು ಹೀಗಿವೆ...

* ಶಾಲೆಗಳ ಮೂಲಭೂತ ಸೌಕರ್ಯ ಆಧುನಿಕರಣಕ್ಕೆ ಕ್ರಮ. 1500 ಹೊಸ ಶಾಲಾ ಕೊಠಡಿ ನಿರ್ಮಾಣ, 5000 ಶಾಲಾ ಕೊಠಡಿಗಳ ಉನ್ನತೀಕರಣ, 1000 ಶಾಲೆಗಳಿಗೆ ಕಲಿಕೆ ಉಪಕರಣ ವಿತರಣೆ, ಶಾಲಾ ಕಟ್ಟಡ ನಿರ್ವಹಣೆಗೆ ಒಬ್ಬ ಎಸ್ಟೇಟ್ ಅಧಿಕಾರಿ ನೇಮಕ.
* 'ಗುರು ಚೇತನ' ಕಾರ್ಯಕ್ರಮದಡಿ 1 ಲಕ್ಷ ಶಿಕ್ಷಕರಿಗೆ 10 ದಿನ ತರಬೇತಿ. ಶಾಲಾ ಆಡಳಿತದಲ್ಲಿ ಪಾರದರ್ಶಕತೆ ತರಲು ಆರ್ಟಿಇ ಕಾಯ್ದೆಯಡಿ ರಚಿಸಲಾಗಿರುವ ಮೇಲುಸ್ತುವಾರಿ ಸಮಿತಿಗಳಿಗೆ ಹೆಚ್ಚಿನ ಜವಾಬ್ದಾರಿ. ಪ್ರತಿ ಶಿಕ್ಷಣ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳ ರಿಪೋರ್ಟ್ ಕಾರ್ಡ್ ತಯಾರಿಸಿ, ಶಿಕ್ಷಕರ-ಪಾಲಕರ ಸಭೆಯಲ್ಲಿ ಚರ್ಚಿಸಿ ಶಾಲೆಯ ಗುಣಮಟ್ಟ ಹೆಚ್ಚಳಕ್ಕೆ ಕ್ರಮ.
* ಕಲಿಕೆಯ ಫಲಿತಾಂಶ ಸುಧಾರಣೆಗೆ ಆದ್ಯತೆ: ಟೀಚರ್-ಮೆಂಟರ್ ಕಾರ್ಯಕ್ರಮದ ಮೂಲಕ ಶಿಕ್ಷಕರಿಗೆ ಅರಿವು ಮೂಡಿಸಲು ಕ್ರಮ; ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಮಕ್ಕಳ ಮೇಲೆ ವೈಯಕ್ತಿಕ ಗಮನ ಹರಿಸಲು ಕ್ರಮ.
* ಮುಂದಿನ ನಾಲ್ಕು ವರ್ಷಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿ ವರೆಗೆ ಒಂದೇ ಸೂರಿನಡಿ ಶಿಕ್ಷಣ ಒದಗಿಸುವ ಒಂದು ಸಾವಿರ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಈ ಶಾಲೆಗಳಿಗೆ ಕೇಂದ್ರೀಯ ವಿದ್ಯಾಲಯ ಮಾದರಿಯ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿ ನಿಗದಿ.
* ಸರ್ಕಾರಿ ಶಾಲಾ ಶಿಕ್ಷಕರಿಗೆ ಭಾಷಾ ವಿಷಯಗಳಲ್ಲಿ ನಿರಂತರ ತರಬೇತಿ ನೀಡಲು 2 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಆಲೂರು ವೆಂಕಟರಾವ್ ಅವರ ಹೆಸರಿನಲ್ಲಿ ಸುಸಜ್ಜಿತ ಭಾಷಾ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭ.
ಕರ್ನಾಟಕ ಬಜೆಟ್ 2019 : 176 ಪಬ್ಲಿಕ್ ಸ್ಕೂಲ್ ಸ್ಥಾಪನೆ
* ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರತಿಭೆ, ಸಾಮರ್ಥ್ಯ ಹೆಚ್ಚಿಸಲು ವಿಶೇಷ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಲು 'ಸ್ಪರ್ಧಾ ಕಲಿ' ಯೋಜನೆ ಪ್ರಾರಂಭ. ರಾಷ್ಟ್ರೀಯ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಹೆಚ್ಚು ಅಂಕ ಪಡೆವ ಪ್ರತಿ ಶೈಕ್ಷಣಿಕ ಜಿಲ್ಲೆಯ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1.5 ಕೋಟಿ ಮೀಸಲು.
* ಎಸ್ಎಸ್ಎಲ್ಸಿ ಮೌಲ್ಯಮಾಪನ ಕೇಂದ್ರಗಳ ಡಿಜಿಟಲೀಕರಣಕ್ಕೆ 1 ಕೋಟಿ ರೂಪಾಯಿ ಅನುದಾನ. ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆಸಕ್ತಿಕರ ವಿಷಯದಲ್ಲಿ ಕೌಶಲ್ಯ ತರಬೇತಿ ಪಡೆಯಲು 2 ಕೋಟಿ ಅನುದಾನ ನೀಡಲಾಗುತ್ತದೆ.
ಉನ್ನತ ಶಿಕ್ಷಣಕ್ಕೆ ಕೊಡುಗೆಗಳು
* ಹೊಸ ತಲೆಮಾರಿನ ಉನ್ನತ ಶಿಕ್ಷಣ (next generation learning intiative) ಕಾರ್ಯಕ್ರಮದ ಮೂಲಕ ಉನ್ನತ ಶಿಕ್ಷಣ ಕಲಿಕೆಯ ವಿಧಾನಗಳ ಅಳವಡಿಕೆ. ಇದಕ್ಕೆ ಸಿಎಂ ನೇತೃತ್ವದಲ್ಲಿ ಸಮಿತಿ ರಚನೆ.
* ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯನ್ನು ಆನ್ಲೈನ್ ಮೂಲಕ ಮಾಡಲು ಕ್ರಮ. ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಆಧಾರದಲ್ಲಿ ಡಿಜಿಟಲ್ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ವಿತರಣೆಗೆ ಕ್ರಮ. ಇದಕ್ಕಾಗಿ ಎರಡು ಕೋಟಿ ಮೀಸಲು.
* ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮರುವಿಂಗಡಣೆ ಮಾಡಿ, ಹಾಸನದಲ್ಲಿ ಒಂದು ಹೊಸ ತಾಂತ್ರಿಕ ವಿವಿ ಸ್ಥಾಪನೆಗೆ ಕ್ರಮ.
* ಎಲ್ಲಾ ಪ್ರಥಮ ದರ್ಜೆ ಕಾಲೇಜು ಮತ್ತು ವಿವಿಗಳಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ನೀಡಲು ತರಬೇತಿ ಕೇಂದ್ರ ಸ್ಥಾಪನೆ.
* ಉನ್ನತ ಶಿಕ್ಷಣ ಗುಣಮಟ್ಟ ವೃದ್ಧಿಗೆ ಎಲ್ಲ ಕಾಲೇಜುಗಳ ಅಧ್ಯಾಪಕರಿಗೆ ಮುಂದಿನ 3 ವರ್ಷಗಳಲ್ಲಿ ಅಗತ್ಯ ಭೋಧನಾ ವಿಷಯದಲ್ಲಿ ತರಬೇತಿ.
* ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಸರ್ಕಾರಿ/ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ತತ್ಸಮಾನ ವೃಂದಗಳ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ.
* ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಕೆಟ್ನಿಕ್ಗಳಲ್ಲಿ ಪ್ರಯೋಗಾಲಯ/ ಕಾರ್ಯಾಗಾರ ಸೌಲಭ್ಯ ಕಲ್ಪಿಸಲು 10 ಕೋಟಿ ರೂಪಾಯಿ ಅನುದಾನ.












Click it and Unblock the Notifications