ಕರ್ನಾಟಕ ಬಿಜೆಪಿಗೆ 7-8 ಕ್ಷೇತ್ರಗಳ ಟಿಕೆಟ್ ಹಂಚಿಕೆಯೇ ಸವಾಲು
ಬೆಂಗಳೂರು, ಮಾರ್ಚ್ 12: ಲೋಕಸಭಾ ಚುನಾವಣೆ ಸಂಬಂಧ ಕರ್ನಾಟಕ ಬಿಜೆಪಿಯು ಟಿಕೆಟ್ ಘೋಷಣೆಯ ಕಸರತ್ತು ನಡೆದಿದೆ. ಆದರೆ ರಾಜ್ಯದ 7 ರಿಂದ 8 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಲು ಕಠಿಣ ಸವಾಲು ಎದುರಿಸಬೇಕಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸೋಮವಾರ ಒಪ್ಪಿಕೊಂಡಿದ್ದಾರೆ.
ಸದ್ಯ ಕರ್ನಾಟಕ ಸೇರಿದಂತೆ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಟಿಕೆಟ್ ಅಂತಿಮಗೊಳಿಸಲು ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸಭೆ ನಡೆದಿದೆ. ಈ ಪೈಕಿ ಕರ್ನಾಟಕದಲ್ಲಿ ಸುಮಾರು 20ಕ್ಕೂ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡು ಯಾವ ಕ್ಷಣದಲ್ಲಾದರೂ ಪಟ್ಟಿ ಬಿಡುಗಡೆ ಆಗಲಿದೆ.

ಪಕ್ಷದ ನಡೆಗೆ ಕಾರ್ಯಕರ್ತರ ಆಕ್ಷೇಪ
ಕರ್ನಾಟಕ ಬಿಜೆಪಿ ಬೀದರ್, ಉಡುಪಿ-ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಸೇರಿದಂತೆ ಒಟ್ಟು ಮೂರು ಹಾಲಿ ಲೋಕಸಭಾ ಸದಸ್ಯರನ್ನು ಬದಲಿಸುವ ಚಿಂತನೆಯಲ್ಲಿದೆ. ಈ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದಂತೆ ಕೇಸರಿ ಪಡೆ ಕಾರ್ಯಕರ್ತರಿಂದ ಪ್ರತಿರೋಧ ಎದುರಿಸುತ್ತಿದೆ.
ಉತ್ತರ ಕರ್ನಾಟಕದ ಹಾವೇರಿ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಗೆ ತೀವ್ರ ಪೈಪೋಟಿ ಎದುರಾಗಿದೆ. ಇಲ್ಲಿ ಪ್ರಬಲ ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾಲಿ ಸಂಸದರ ಪರ ಆನ್ ಲೈನ್ ಪ್ರಚಾರ ಸಹ ನಡೆಯತ್ತಿದ್ದ, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಟಿಕೆಟ್ ಹಂಚಿಕೆ 80ರಷ್ಟು ಪೂರ್ಣ
ಯಾವ ಕ್ಷಣದಲ್ಲಾದರೂ ಚುನಾವಣೆ ಘೋಷಿಸಲಾಗುತ್ತದೆ. ಬಿಜೆಪಿ ಟಿಕೆಟ್ ಅಂತಿಮಗೊಳಿಸುವ ಸಲುವಾಗಿ ನವದೆಹಲಿಗೆ ತೆರಳುವ ಮೊದಲು ಅಶೋಕ್ ಅವರು ಸುಮಾರು 80 ರಷ್ಟು ಸ್ಥಾನಗಳನ್ನು ಅಂತಿಮಗೊಳಿಸುವ ಚರ್ಚೆ ಬಹುತೇಕ ಮುಗಿದಿದೆ ಮತ್ತು ಉನ್ನತ ನಾಯಕತ್ವದ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆದರೆ ಏಳರಿಂದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರದಲ್ಲಿ ಬಿಜೆಪಿಯು ಸ್ಪಷ್ಟ ನಿಲುವು ಬಂದಿಲ್ಲ ಎಂದು ಅವರು ತಿಳಿಸಿದರು. ಈ ಮೂಲಕ ಕೆಲವು ಕ್ಷೇತ್ರಗಳು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿವೆ ಎಂದು ಅವರು ಒಪ್ಪಿಕೊಂಡರು.
ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಬಿಜೆಪಿ
ಸದ್ಯ ಬಿಜೆಪಿಗೆ ಸವಾಲಾಗಿರುವ ಸ್ಥಾನಗಳೆಲ್ಲವು ಬಿಜೆಪಿಯ ಭದ್ರಕೋಟೆಗಳೆ ಆಗಿವೆ. ಹೀಗಾಗಿ ಅವಸರದಲ್ಲಿ ಇಲ್ಲ ಒತ್ತಡ ಒಳಗಾಗಿ ಟಿಕೆಟ್ ನೀಡಿ ಯಡವಟ್ಟಾದರೆ ಅದು ಗೆಲುವಿನ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣದಿಂದ ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಂತಿಮವಾಗಿಲ್ಲ ಎನ್ನಲಾಗಿದೆ.
ಈ ಏಳೆಂಟು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು (ನಾಯಕರು) ಟಿಕೆಟ್ ಪಡೆಯಲು ತೀವ್ರ ಲಾಬಿ ಮಾಡುತ್ತಿದ್ದಾರೆ. ಯಾವುದೇ ನಿರ್ಧಾರವು ಕೆಲವು ನಾಯಕರನ್ನು ಅಸಮಾಧಾನಗೊಳಿಸುವ ಸಾಧ್ಯತೆಯೂ ಇದೆ. ಈ ಕ್ಷೇತ್ರಗಳಲ್ಲಿನ ಕಾರ್ಯಕರ್ತರ ಮೂಲವು ಯಾವಾಗಲೂ ಪಕ್ಷದ ಆಯ್ಕೆಯಿಂದ ನಿಲ್ಲುವುದರಿಂದ ಪಕ್ಷವು ಶೀಘ್ರದಲ್ಲೇ ಈ ಸ್ಥಾನಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ. ಆದರೆ ಮುಂದಿನ ದಿನಗಳಲ್ಲಿ ಈ ನಾಯಕರನ್ನು ಹೇಗೆ ಮನವೊಲಿಸಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ ಎಂದು ಆರ್. ಅಶೋಕ್ ಅವರು ತಿಳಿಸಿದರು.
ಮಾಜಿ ಸಿಎಂ ಬಿಎಸ್ವೈ ಹೇಳಿದ್ದೆನು?
ಇನ್ನೂ ಟಿಕೆಟ್ ಹಂಚಿಕೆ ಕುರಿತು ಸುದ್ದಿಗಾರರ ಜತೆ ಪ್ರತ್ಯೇಕವಾಗಿ ಮಾತನಾಡಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಧಾನಿ ಮೋದಿ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
ರಾಜ್ಯದ 28 ಸ್ಥಾನಗಳಲ್ಲಿ ಸಮ್ಮಿಶ್ರ ಪಾಲುದಾರರಾದ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ 25 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದಿಂದ ಪ್ರಧಾನಿ ದೊಡ್ಡ ಗೆಲುವು ನೀಡಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಹಿಂದಿನ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಯಡಿಯೂರಪ್ಪ ನಿರಾಕರಿಸಿದರು.












Click it and Unblock the Notifications