BJPvsBJP: ಬೊಮ್ಮಾಯಿ, ಬಿಎಸ್ವೈರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿದ್ದಾರೆಯೇ ಸಿಟಿ ರವಿ, ಪ್ರತಾಪ್ ಸಿಂಹ?
ಬೆಂಗಳೂರು, ಜೂನ್ 14: ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಸಂಸದ ಪ್ರತಾಪ ಸಿಂಹ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. BJPvsBJP ಎಂಬ ಟ್ಯಾಗ್ಲೈನ್ ಬಳಸಿ ಸರಣಿ ಟ್ವೀಟ್ಗಳನ್ನು ಕಾಂಗ್ರೆಸ್ ಮಾಡುತ್ತಿದೆ. ಚುನಾವಣೆಗೂ ಮುನ್ನ ಇಂತಹುದೇ ಅಭಿಯಾನವನ್ನು ಕಾಂಗ್ರೆಸ್ ಕೈಗೊಂಡಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು.
'ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿಎಸ್ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ ಹಾಗೂ ಮಾಜಿ ಸಚಿವ ಸಿಟಿ ರವಿ ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಜೋಶಿ, ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಟೀಕಿಸಿದೆ.

'ರಿಟೈರ್ಡ್ ಹರ್ಟ್ ಆಗಿರುವ ಸಿಟಿ ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅವರ ಅರಣ್ಯ ರೋಧನಕ್ಕೆ ಪ್ರತಾಪ ಸಿಂಹ ದನಿ ಜೋಡಿಸಿದ್ದಾರೆ. ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ?' ಎಂದು ಪ್ರಶ್ನಿಸಿದೆ.
'ಬಿಜೆಪಿಯಲ್ಲಿ ಸೋಲಿನ ಆತ್ಮಾವಲೋಕನ ಮಾಡುವುದಕ್ಕಿಂತ ಪರಸ್ಪರ ಕೆಸರೆರಾಚಾಟ ನಡೆದಿದೆ. ಈ ಎರಚಾಟದಲ್ಲಿ ಕೆಸರು ಖಾಲಿಯಾಗಿ ಕಮಲ ಕರಕಲಾಗುವುದು ನಿಶ್ಚಿತ. ಅಧಿಕಾರದುದ್ದಕ್ಕೂ ಅಹಂಕಾರದಿಂದ ಅನಾಚಾರ ನಡೆಸಿ ಈಗ ಮೈಪರಚಿಕೊಂಡರೆ ಏನು ಉಪಯೋಗ ಸಿಟಿ ರವಿ ಹಾಗೂ ಪ್ರತಾಪ ಸಿಂಹ ಅವರೇ? ಚುನಾವಣೆ ಮುಂಚಿನ #BJPvsBJP ಕಾದಾಟವನ್ನು ಈಗಲೂ ಮುಂದುವರೆಸಿ, ನಿಮಗೆ ಅರ್ಹವಾಗಿದ್ದು ಅದೊಂದೇ' ಎಂದು ಕಾಂಗ್ರೆಸ್ ಕಿಚಾಯಿಸಿದೆ.
ಸಂಸದ ಪ್ರತಾಪ್ ಸಿಂಹ ಆರೋಪವೇನು?
ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮಂಗಳವಾರ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದಾಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣ, 40 ಪರ್ಸೆಂಟ್ ಕಮಿಷನ್ ಮತ್ತು ಬಿಟ್ಕಾಯಿನ್ ಹಗರಣದಂತಹ ವಿಷಯಗಳಲ್ಲಿ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಆದರೆ, ನಮ್ಮ ನಾಯಕರು ಅರ್ಕಾವತಿ ಬಡಾವಣೆಯಲ್ಲಿನ ಭೂ ಡಿನೋಟಿಫಿಕೇಷನ್ ಹಗರಣದ ಬಗ್ಗೆ ತನಿಖೆ ಮಾಡಲು ಮುಂದಾಗಲೇ ಇಲ್ಲ' ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಅರ್ಕಾವತಿ ಬಡಾವಣೆಯಲ್ಲಿನ ಜಮೀನು ಡಿನೋಟಿಫಿಕೇಷನ್ ಆರೋಪ ಆಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಳಿಬಂದಿತ್ತು. ಕೆಂಪಣ್ಣ ಆಯೋಗದ ವರದಿಯನ್ನು ಬಹಿರಂಗ ಪಡಿಸುವುದಾಗಿ ಆಡಳಿತಾರೂಢ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದರೂ ಅದನ್ನು ವಿಧಾನಸಭೆಯಲ್ಲಿ ಮಂಡಿಸಲೇ ಇಲ್ಲ ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ನೀವು ( ಕಾಂಗ್ರೆಸ್ ನಾಯಕರು ) ಬಿಜೆಪಿ ನಾಯಕರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡದಿದ್ದರೆ, ಬಿಜೆಪಿ ಸರ್ಕಾರದ ವಿರುದ್ಧ ನೀವು ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿ ಎಂದೂ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಲ್ಗಳನ್ನು ತೆರವುಗೊಳಿಸಲು ಶೇ 40 ಕಮಿಷನ್ ಕೇಳಿದ ಆರೋಪದ ಬಗ್ಗೆ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಅದೇ ರೀತಿ ಪಿಎಸ್ಐ ನೇಮಕಾತಿ ಮತ್ತು ಬಿಟ್ಕಾಯಿನ್ ಹಗರಣಗಳ ಬಗ್ಗೆಯೂ ತನಿಖೆಯಾಗಲಿ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications