ಸಿದ್ದರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರ, ಬಿಜೆಪಿಯಿಂದ ವರದಿ ಬಹಿರಂಗ
ಬೆಂಗಳೂರು, ಡಿಸೆಂಬರ್ 06 : ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಸಿಎಜಿ ವರದಿಯಲ್ಲಿನ ಲೋಪದೋಷಗಳ ಬಗ್ಗೆ ಕಿರು ಪುಸ್ತಕ ಬಿಡುಗಡೆ ಮಾಡಿದರು.
ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವಥ್ ನಾರಾಯಣ ಮುಂತಾದವರು ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸಿದ್ದರಾಮಯ್ಯ ಆಡಳಿತದ ಬಗ್ಗೆ ಟೀಕಿಸಿದರು.
2016-17ನೇ ಸಾಲಿನ ಸಿಎಜಿ ವರದಿಯಲ್ಲಿ ಖರ್ಚು ಮತ್ತು ಸ್ವೀಕೃತಿ ಹೊಂದಾಣಿಕೆ ಆಗುತ್ತಿಲ್ಲ. ಸಿದ್ದರಾಮಯ್ಯ ಅವರು ಮಂಡಿಸಿದ್ದ 2016-17ರ ಬಜೆಟ್ನಲ್ಲಿ 35 ಸಾವಿರ ಕೋಟಿ ರೂ.ಗಳಿಗೆ ನೀಡಿರುವ ವೆಚ್ಚ ಮತ್ತು ಸ್ವೀಕೃತಿ ಲೆಕ್ಕ ತಾಳೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಹಿಂದಿನ ಸರ್ಕಾರದ ವರದಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದೆ ಎಂದು ಸಿಎಜಿ ವರದಿ ಹೇಳುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಮಾಡಿರುವ ಆರೋಪಗಳು ಚಿತ್ರಗಳಲ್ಲಿ....

ಕೋಟಿ-ಕೋಟಿ ಅವ್ಯವಹಾರ ನಡೆದಿದೆ
'ಹಿಂದಿನ ಸರ್ಕಾರದ ಅವಧಿಯಲ್ಲಿ ಕೋಟಿ-ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ಹೇಳಿದೆ. ಸಿಎಜಿ ವರದಿಯಿಂದಲೇ 2ಜಿ, ಕಾಮನ್ ವೆಲ್ತ್, ಆದರ್ಶ ಹಗರಣಗಳು ಬೆಳಕಿಗೆ ಬಂದಿದ್ದು. ಆದ್ದರಿಂದ, ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಆಗಬೇಕು' ಎಂದು ರವಿ ಕುಮಾರ್ ಒತ್ತಾಯಿಸಿದರು.

ಕೆರೆಗೆ ನೀರು ತುಂಬಲಿಲ್ಲ
788 ಕೆರೆಗಳಿಗೆ ನೀರು ತುಂಬಿಸಲು 1500 ಕೋಟಿ ಬಿಡುಗಡೆಯಾಗಿದೆ. ಆದರೆ, ಕೆರೆಗೆ ನೀರು ತುಂಬಿಲ್ಲ. ಸಮವಸ್ತ್ರ ವಿಷಯದಲ್ಲಿ ಅಗತ್ಯಕ್ಕಿಂತ ಅಧಿಕ ಸಮವಸ್ತ್ರ ಖರೀದಿ ಮಾಡಲಾಗಿದೆ. ಈ ಖರೀದಿಯಲ್ಲಿ 1 ಕೋಟಿ 77 ಲಕ್ಷ ರೂ. ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ವಿವಿಧ ಇಲಾಖೆಗಳ ಲೆಕ್ಕ
ಲ್ಯಾಪ್ಟಾಪ್ ಖರೀದಿಗೆ ಎಂದು ತೆಗೆದಿಟ್ಟ ಹಣ ಇನ್ನೂ ಬ್ಯಾಂಕ್ನಲ್ಲಿಯೇ ಇದೆ. ಕ್ಯಾಬಿನೆಟ್ ಅನುಮೋದನೆ ಇಲ್ಲದೇ 7378.84 ಕೋಟಿ ಮೌಲ್ಯದ ಕಾಮಗಾರಿ ನಡೆಸಲಾಗಿದೆ. 254 ಕೋಟಿ ರೂ. ಬಳಕೆಗೆ ಪ್ರಮಾಣ ಪತ್ರವನ್ನೇ ಕೊಟ್ಟಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕೆ 612 ಕೋಟಿ ಮೀಸಲಾಗಿಡಲಾಗಿದೆ. ಆದರೆ, ಇನ್ನೂ 12 ಕೋಟಿ ಖರ್ಚು ಮಾಡಿಲ್ಲ.

ಕುಮಾರಸ್ವಾಮಿ ಲೆಕ್ಕ ಕೊಟ್ಟಿಲ್ಲ
ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ನಲ್ಲಿ ಈ ಹಣದ ಲೆಕ್ಕ ಕೊಟ್ಟಿಲ್ಲ. ಆ ಹಣ ಎಲ್ಲಿದೆ?, ಬಜೆಟ್ನಲ್ಲಿ ಏಕೆ ತೋರಿಸಿಲ್ಲ?, ಅನುಮೋದನೆ ಇಲ್ಲದೆ 6057 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಪೊಲೀಸ್ ಇಲಾಖೆ
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ 290.98 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಬಳಕೆ ಮಾಡಿದ್ದು 222.48 ಕೋಟಿ. ನಗರಾಭಿವೃದ್ಧಿ ಇಲಾಖೆಯಲ್ಲಿ 5625 ಬಿಲ್ಗಳಲ್ಲಿ ನೀರು ಬಳಕೆಯಾಗಿದ್ದರೂ ಬಿಲ್ಲಿನ ಮೊತ್ತ ಶೂನ್ಯ ಅಂತ ಸೂಚಿಸಿದೆ. ಅಧಿಕಾರಿಗಳ ಅಸಡ್ಡೆಯಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.












Click it and Unblock the Notifications