ಫೆ. 13ರ ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?
Recommended Video
ಬೆಂಗಳೂರು, ಫೆಬ್ರವರಿ 12 : ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ.
ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬಂದ್ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರಿನ ಟೌನ್ ಹಾಲ್ನಿಂದ ಫ್ರೀಡಂ ಪಾರ್ಕ್ ತನಕ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿವೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ಫೆ.13ರ ಗುರುವಾರ 100ನೇ ದಿನಕ್ಕೆ ಕಾಲಿಡುತ್ತಿದೆ. ಆದ್ದರಿಂದ, ಕರ್ನಾಟಕ ಬಂದ್ ಕರೆ ನೀಡಲಾಗಿದೆ.
ಬಂದ್ಗೆ 600 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ. ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ನೀಡಿವೆ. ಪರಿಸ್ಥಿತಿ ನೋಡಿಕೊಂಡು ಸರ್ಕಾರಿ ಬಸ್ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣಾ ವೇದಿಕೆ ಬೆಂಬಲವಿಲ್ಲ
ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಬೆಂಬಲ ನೀಡಿಲ್ಲ. "ರಕ್ಷಣಾ ವೇದಿಕೆ 1999ರಿಂದಲೂ ವರದಿ ಜಾರಿಗೆ ಹೋರಾಟ ಮಾಡುತ್ತಲೇ ಬಂದಿದೆ. ಅದೇ ವಿಚಾರವಾಗಿ ಕೆಲ ಸಂಘಟನೆಗಳು ಹೋರಾಟ ಮಾಡಲು ಮುಂದಾಗಿವೆ. ಸರೋಜಿನಿ ಮಹಿಷಿ ವರದಿ ಜಾರಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ, ಕರ್ನಾಟಕ ಬಂದ್ಗೆ ನಮ್ಮ ಬೆಂಬಲವಿಲ್ಲ" ಎಂದು ಟಿ. ಎ. ನಾರಾಯಣ ಗೌಡ ಹೇಳಿದ್ದಾರೆ.

ಹೋಟೆಲ್ಗಳ ಬೆಂಬಲವಿಲ್ಲ
ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ ಬಂದ್ಗೆ ಬೆಂಬಲ ನೀಡಿಲ್ಲ. "ಕರ್ನಾಟಕ ಬಂದ್ಗೆ ನಮ್ಮ ಸಂಘವು ಬೆಂಬಲ ನೀಡುವುದಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ತರೆಯಲಾಗುತ್ತದೆ. ಎಲ್ಲಾ ಹೋಟೆಲ್ ತೆರೆದಿರುತ್ತದೆ" ಎಂದು ಸಂಘದ ಅಧ್ಯಕ್ಷ ಪಿ. ಸಿ. ರಾವ್ ಹೇಳಿದ್ದಾರೆ.

ಬಸ್ ಸಂಚಾರವಿದೆಯೇ?
ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರು ನೈತಿಕ ಬೆಂಬಲ ನೀಡಿದ್ದಾರೆ. ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಕಲ್ಲು ತೂರಾಟದಂತಹ ಪ್ರಕರಣಗಳು ನಡೆದರೆ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಬಂದ್ಗೆ ಬೆಂಬಲ ಕೊಟ್ಟವರು ಯಾರು?
ಲಾರಿ ಮಾಲೀಕರ ಸಂಘ, ಓಲಾ ಮತ್ತು ಊಬರ್ ಚಾಲಕರ ಸಂಘ, ಬೀದಿ ವ್ಯಾಪಾರಿಗಳು, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ, ಆದರ್ಶ ಆಟೋ ಯೂನಿಯನ್, ಪೀಸ್ ಆಟೋ ಯೂನಿಯನ್, ಜೈ ಭಾರತ ಚಾಲಕರ ಸಂಘ, ಸಾರಥಿ ಸೇನೆ ಸೇರಿದಂತೆ 600 ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.

ಆಟೋಗಳ ಸಂಚಾರವಿಲ್ಲ
ಆದರ್ಶ ಆಟೋ ಯೂನಿಯನ್, ಪೀಸ್ ಆಟೋ ಯೂನಿಯನ್ ಸೇರಿದಂತೆ ವಿವಿಧ ಆಟೋ ಚಾಲಕರ ಸಂಘಟನೆಗಳು ಬಂದ್ಗೆ ಬೆಂಬಲವನ್ನು ನೀಡಿವೆ. ಆದ್ದರಿಂದ, ಆಟೋಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಮೆಟ್ರೋ ಸ್ಥಗಿತವಿಲ್ಲ
ಫೆಬ್ರವರಿ 13ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಆದರೆ, ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸೇವೆ ಎಂದಿನಂತೆ ಇರಲಿದೆ. ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ.

ಶಾಲಾ ಕಾಲೇಜುಗಳು
* ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಅಧಿಕಾರವನ್ನು ಡಿಡಿಪಿಐಗಳಿಗೆ ನೀಡುವ ಸಾಧ್ಯತೆ ಇದೆ.
* ಖಾಸಗಿ ಶಾಲೆಗಳು ಸಹ ಬಂದ್ ಬೆಂಬಲಿಸಿಲ್ಲ. ಆದ್ದರಿಂದ, ಶಾಲಾ-ಕಾಲೇಜುಗಳು ಬಂದ್ ಆಗುವುದಿಲ್ಲ.
* ವಿವಿಧ ಪರೀಕ್ಷೆಗಳು ನಡೆಯುತ್ತಿದ್ದು, ಯಾವುದೇ ಪರೀಕ್ಷೆಗಳನ್ನು ಇದುವರೆಗೂ ಮುಂದೂಡಲಾಗಿಲ್ಲ.

ಓಲಾ, ಊಬರ್ ಸಂಚಾರವಿಲ್ಲ
* ಓಲಾ ಮತ್ತು ಊಬರ್ ಚಾಲಕರು ಬಂದ್ಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ, ಟ್ಯಾಕ್ಸಿ ಇರುವುದಿಲ್ಲ. ಆದರೆ, ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ.
* ಪೆಟ್ರೋಲ್ ಬಂಕ್ ಮಾಲೀಕರು ಬಂದ್ ಬೆಂಬಲಿಸಿಲ್ಲ. ಬಂಕ್ ತೆರೆದಿರುತ್ತದೆ.
* ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ಆಂಬ್ಯುಲೆನ್ಸ್ಗೆ ಬಂದ್ ನಿಂದ ವಿನಾಯಿತಿ ಇದೆ.












Click it and Unblock the Notifications