ಬಿಎಸ್ವೈಗೆ ಕರ್ನಾಟಕ ಚುನಾವಣೆ ನೇತೃತ್ವ: ಬಿಜೆಪಿಗೆ ಲಿಂಗಾಯತ ನಾಯಕನೇ ಅನಿವಾರ್ಯ- ವರದಿ, ವಿಶ್ಲೇಷಣೆ
ಕರ್ನಾಟಕದ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ದೊಡ್ಡ ವೈರಿಯಾಗಿ ಪರಿಣಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮತ್ತೆ ಯಡಿಯೂರಪ್ಪನವರ ಆಸರೆ ಬಯಸುತ್ತಿದೆ. ಈ ವರದಿ, ವಿಶ್ಲೇಷಣೆ ಓದಿ
ಬೆಂಗಳೂರು, ಫೆಬ್ರವರಿ 22: ಕರ್ನಾಟಕದ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ದೊಡ್ಡ ವೈರಿಯಾಗಿ ಪರಿಣಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮತ್ತೆ ಯಡಿಯೂರಪ್ಪನವರ ಆಸರೆ ಬಯಸುತ್ತಿದೆ. ರಾಜ್ಯ ರಾಜಕಾರಣದ ಮಟ್ಟಿಗೆ ನೋಡುವುದಾದರೆ, ಬಿಜೆಪಿಗೆ 'ಲಿಂಗಾಯತ ನಾಯಕ' ಬಿಎಸ್ವೈ ಅನಿವಾರ್ಯವೆಂದೇ ಹೇಳಲಾಗುತ್ತಿದೆ.
ಈ ವಿಚಾರವಾಗಿ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, 'ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿಸಿದೆ. ಅವರನ್ನು ಬಿಜೆಪಿ ಬದಿಗೊತ್ತಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಉತ್ತರದ ವೇಳೆ ಕಾಂಗ್ರೆಸ್ ಸದಸ್ಯರು ಪದೇ ಪದೇ ಬಿಎಸ್ವೈ ಕುರಿತಾಗಿ ಮಾತನಾಡಿದ್ದಾರೆ. ಇದಕ್ಕೆ ವಿಧಾನ ಪರಿಷತ್ತಿನಲ್ಲಿ ಪ್ರತಿಕ್ರಿಯಿಸಿರುವ ಮಾಧುಸ್ವಾಮಿ ವಿಧಾನ ಈ ಮಾತುಗಳನ್ನು ಆಡಿದ್ದಾರೆ.
'ಬಿಜೆಪಿ ಅಥವಾ ಪಕ್ಷದ ಕೇಂದ್ರ ನಾಯಕರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಂದಿಗೂ ಕೇಳಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅವರ ಸ್ವಂತ ನಿರ್ಧಾರವಾಗಿತ್ತು' ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.
'ವಾಸ್ತವವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪನವರಿಗೆ ಸಿಎಂ ಆಗಿ ಉಳಿಯಲು ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ವಿನಂತಿಸಿದ್ದರು. ಆದರೆ, ತಮಗೆ ವಯಸ್ಸಾಗಿದೆ ಎಂದು ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟವರು ಯಡಿಯೂರಪ್ಪನವರೇ. ಈ ಮೂಲಕ ಪಕ್ಷದಲ್ಲಿ ಕಿರಿಯ ನಾಯಕರೊಬ್ಬರಿಗೆ ಸರ್ಕಾರದ ಅಧಿಕಾರವನ್ನು ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ' ಎಂದು ಹೇಳಿದ್ದಾರೆ.

ಇದೇ ವೇಳೆ, ರಾಜೀನಾಮೆ ಸಲ್ಲಿಸುವ ಮುನ್ನ ಯಡಿಯೂರಪ್ಪ ಅಳಲು ತೋಡಿಕೊಂಡಿದ್ದನ್ನು ಕಾಂಗ್ರೆಸ್ ಸದಸ್ಯರು ಸಚಿವ ಮಾಧುಸ್ವಾಮಿ ಅವರಿಗೆ ನೆನಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಯಡಿಯೂರಪ್ಪ ಅವರಂತೆ ಕಷ್ಟಪಟ್ಟು ಕೆಲಸ ಮಾಡಿದವರಿಗೆ ನಿವೃತ್ತಿ ಹೇಗೆ ಅನಿವಾರ್ಯವೆಂಬುದು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಮಾಧುಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಟ್ವೀಟ್
ಮಾಧುಸ್ವಾಮಿ ಹೇಳಿಕೆಗಳಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್, BSY ವಯಸ್ಸಿನ ಕಾರಣದಿಂದ ರಾಜೀನಾಮೆ ಕೊಟ್ಟಿದ್ದಿದ್ದರೆ , 'ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ' ಎಂದು ಕೊನೆಯ ದಿನದವರೆಗೂ ಹೇಳಿದ್ದೇಕೆ? ಏಕಾಏಕಿ ರಾಜೀನಾಮೆ ಕೊಟ್ಟಿದ್ದೇಕೆ? ಕಣ್ಣೀರು ಹಾಕಿದ್ದೇಕೆ? BSY ಅನಿವಾರ್ಯವಲ್ಲ ಎಂದು ಕಟೀಲ್ ಹೇಳಿದ್ದೇಕೆ? ಮೂಲೆಗುಂಪು ಮಾಡಿದ್ದೇಕೆ? #BSYmuktaBJP ಪೂರ್ವಯೋಜಿತ ಅಭಿಯಾನವಲ್ಲವೇ?' ಎಂದು ಪ್ರಶ್ನಿಸಿದೆ.
ಈ ಎಲ್ಲ ಬೆಳವಣಿಗೆಗಳ ಮೂಲಕ ನೋಡುವುದಾದರೆ, ಯಡಿಯೂರಪ್ಪನವರ ರಾಜೀನಾಮೆಯನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಲಿದೆ ಎಂಬುದಂತೂ ಶತಸಿದ್ಧವಾಗಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಗೆ ಯಡಿಯೂರಪ್ಪನವರೇ ಅನಿವಾರ್ಯವಾಗಿದ್ದಾರೆ ಎಂಬುದೂ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲಿಂಗಾಯರ ಸಮುದಾಯದಲ್ಲಿ ಯಡಿಯೂರಪ್ಪ ಬೆಳಿಸಿಕೊಂಡಿರುವ ಪ್ರಭಾವ ರಾಜ್ಯ ಬಿಜೆಪಿಯನ್ನು ಮೊದಲಿನಿಂದಲೂ ಕಾಡುತ್ತಿದೆ.
2013ರಲ್ಲಿ ಬಿಜೆಪಿಗೆ ಡ್ಯಾಮೇಜ್ ಮಾಡಿದ್ದ ಯಡಿಯೂರಪ್ಪ
2013ರಲ್ಲಿ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಕಟ್ಟಿದ್ದರು. ಆ ಚುನಾವಣೆಯಲ್ಲಿ ಬಿಎಸ್ವೈ ಪಕ್ಷಕ್ಕೆ ಐದು ಸೀಟುಗಳು ಬಂದಿದ್ದವು. ಬಿಜೆಪಿಯ ಶೇಕಡಾವಾರು ಮತಗಳಲ್ಲಿ ಕುಸಿತ ಕಂಡಿತ್ತು. ಇದು ಬಿಜೆಪಿ ಸೋಲಿಗೆ ಬಹುಮುಖ್ಯ ಕಾರಣವೆಂದೂ ವಿಶ್ಲೇಷಿಸಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಎಸ್ವೈ ಅವರನ್ನು ಕಡೆಗಣಿಸಲಾಗಿದೆ ಎಂದು ವಿಪಕ್ಷಗಳು ಹೇಳುತ್ತಿವೆ. ಇದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಬಿಎಸ್ವೈ ಬಿಜೆಪಿಗೆ ಅನಿವಾರ್ಯವಾಗಿದ್ದಾರೆ. ಹೀಗಾಗಿ ಬಿಜೆಪಿಯು ಯಡಿಯೂರಪ್ಪನವರನ್ನು ಕಡೆಗಣಿಸಿಲ್ಲ ಎಂಬುದನ್ನು ತೋರಿಸಿಕೊಳ್ಳಬೇಕಿದೆ. ಇದರ ಭಾಗವಾಗಿ ಬಿಎಸ್ವೈ ಅವರ ಕಿರಿಯ ಪುತ್ರ ವಿಜಯೇಂದ್ರ ಅವರಿಗೆ ಪ್ರಚಾರದ ಹೊಣೆಯನ್ನು ಹೊರಿಸಲಾಗಿದೆ. ಶಿಕಾರಿಪುರ ವಿಧಾನಸಭೆ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯೂ ಹೆಚ್ಚಿದೆ.












Click it and Unblock the Notifications