ಆಪರೇಷನ್ ಕಮಲದ ಆಡಿಯೋ ಕ್ಲಿಪ್ ಪ್ರಕರಣ ಎಸ್ಐಟಿ ತನಿಖೆಗೆ
Recommended Video
ಬೆಂಗಳೂರು, ಫೆಬ್ರವರಿ 11: ಆಪರೇಷನ್ ಕಮಲ ಆಡಿಯೋ ಕ್ಲಿಪ್ ವಿಚಾರದಲ್ಲಿ ಎದುರಾಗಿರುವ ಆರೋಪವನ್ನು ವಿಶೇಷ ತನಿಖಾ ದಳದ ತನಿಖೆಗೆ ಒಳಪಡಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.
ಸುದೀರ್ಘ ಕಾಲ ನಡೆದ ಚರ್ಚೆಯ ಬಳಿಕ ಅವರು, ನಾನು ನಿಮಗೆ ನಿರ್ದೇಶನ ನೀಡುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲು ತನಿಖಾ ದಳ ರಚಿಸಿ. ನನಗೆ 15 ದಿನಗಳ ಒಳಗೆ ಈ ಸಂಕಟದಿಂದ ಮುಕ್ತಿ ನೀಡಿ ಎಂದು ಹೇಳಿದರು.
ಹಣ ಪಡೆದ ಆರೋಪ: ಗದ್ಗದಿತರಾದ ರಮೇಶ್ ಕುಮಾರ್ ರಾಜೀನಾಮೆ ಮಾತು
ಇದಕ್ಕೆ ಒಪ್ಪಿಕೊಂಡ ಕುಮಾರಸ್ವಾಮಿ, ವಿಶೇಷ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು.
'ನಿಮ್ಮ ಮನಸ್ಸಿಗೆ ಗಾಸಿಯಾಗಿದೆ. ನೀವು ಭಾವನಾತ್ಮಕ ಜೀವಿ. ಸಣ್ಣ ಘಟನೆಯನ್ನೂ ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೀರಿ. ಈಶ್ವರಪ್ಪ ಹೇಳಿದರು ಸಮಗ್ರ ತನಿಖೆ ಆಗಲಿ ಎಂದು. ಅದನ್ನು ಒಪ್ಪುತ್ತೇನೆ. ಮೈತ್ರಿ ಸರ್ಕಾರ ರಚನೆಯಾದ ದಿನದಿಂದ ಪ್ರತಿದಿನ ಘಟನೆಗಳು ನಡೆಯುತ್ತಲೇ ಇವೆ. ಮಾಧ್ಯಮಮಿತ್ರರು ಪ್ರತಿದಿನ ಸರ್ಕಾರದ ಅವಧಿಯ ಗಡುವುಗಳನ್ನು ವಿಸ್ತರಿಸಿಕೊಳ್ಳುತ್ತಲೇ ಬಂದಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದರು.
ನಾವು ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದೇವೆ. ಸರ್ಕಾರದ ವಿರುದ್ಧ ನಿರಂತರ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಸ್ಥಿತ್ಯಂತರಗಳಿಗೆ ಇತಿಶ್ರೀ ಆಗಬೇಕು ಎಂದು ನಿಮ್ಮ ಹೆಸರು ಕೂಡ ಇಲ್ಲಿ ಬಂದಿದೆ ಎನ್ನುವ ಅನಿಸಿಕೆ ನನಗಿದೆ. ಇಂತಹ ಪರಿಸ್ಥಿತಿಗೆ ನಿಮ್ಮನ್ನು ದೂಡಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಇಂದು ಸಮಗ್ರ ತನಿಖೆಗೆ ಅನುಮತಿ ನೀಡುತ್ತಿದ್ದೇನೆ ಎಂದರು.
ಇದಕ್ಕೆ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಸರ್ಕಾರವೇ ಈ ಆಡಿಯೋ ಕ್ಲಿಪ್ನಲ್ಲಿ ಭಾಗಿಯಾಗಿದೆ, ಹೀಗಿರುವಾಗ ಸರ್ಕಾರವೇ ರಚಿಸುವ ತನಿಖಾ ಸಂಸ್ಥೆ ತನಿಖೆಯನ್ನು ಹೇಗೆ ನಂಬುವುದು. ಅದು ವಿಶ್ವಾಸಾರ್ಹವಾಗಲಾರದು ಎಂದು ಹೇಳಿದರು. ಅಲ್ಲದೆ, ಈಗ ಸ್ಪೀಕರ್ ವಿರುದ್ಧ ಕೇಳಿಬಂದ 50 ಕೋಟಿ ರೂ. ಲಂಚ ಆರೋಪದ ಪ್ರಕರಣ ಮಾತ್ರ ಚರ್ಚೆಯಾಗಲಿ. ಉಳಿದ ಸಂಗತಿ ಪ್ರತ್ಯೇಕವಾಗಿ ಚರ್ಚೆಗೆ ಬರಲಿ ಎಂದು ಆಗ್ರಹಿಸಿದರು.
ಸರ್ಕಾರದ ಮೇಲೆ ವಿಶ್ವಾಸವಿಲ್ಲ
ತಾವೇ ತನಿಖಾ ತಂಡ ನೇಮಿಸಿ. ಸರ್ಕಾರ ನಡೆಸುವ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ ಎಂದು ಬಿಜೆಪಿಯ ಮಾಧುಸ್ವಾಮಿ ಹೇಳಿದರು.
ಸರ್ಕಾರವನ್ನು ವಿರೋಧಿಸಲು ಘಟನೆ ನಡೆದ ದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ನಾನೇ ಇದನ್ನು ಮಾಡಿಸಿದ್ದೇನೆ ಎಂದು. ಆ ಕಾರಣದಿಂದ ಪ್ರತ್ಯೇಕ ತನಿಖೆ ನಡೆಯಲಿ ಎಂದು ಮಾಧುಸ್ವಾಮಿ ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಉಪ್ಪು ತಿಂದವರು ನೀರು ಕುಡಿಯಬೇಕು
ಎಲ್ಲ ಸತ್ಯ ರಾಜ್ಯದ ಜನತೆಗೆ ಗೊತ್ತಾಗಲಿ. ಬರಿ ಸ್ಪೀಕರ್ ಅಲ್ಲ, ಆಡಿಯೋದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ತಪ್ಪು ತಿಳಿಯಬಾರದು. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿ ಇದ್ದೇವೆ. ಯಾರು ಯಾರ ಬಗ್ಗೆ ಬೇಕಾದರೂ ಲಘುವಾಗಿ, ಅವಹೇಳನಕಾರಿಯಾಗಿ ಮಾತನಾಡಬಹುದು. ಅಪ್ರಾಮಾಣಿಕ ಎಂದು ಧಾರಾಳವಾಗಿ ಮಾತನಾಡಬಹುದು ಎಂಬುದು ಅಂತ್ಯವಾಗಬೇಕು. ಸಮಗ್ರ ತನಿಖೆ ಆಗಬೇಕು. ಶಿಕ್ಷೆ ಆಗಲೇಬೇಕು. ನಮ್ಮೆಲ್ಲರ ಮಾನಮರ್ಯಾದೆ ಕಾಪಾಡುವುದು ನಿಮ್ಮ ಕೈಯಲ್ಲಿದೆ. ನಿಮ್ಮ ನಡೆಗಳು ದಾರಿದೀಪವಾಗಬೇಕಿದೆ. ನಿಮಗೆ ನೋವಾದರೆ ನಮಗೆ ನೋವಾದಂತೆ. ಉಪ್ಪು ತಿಂದವರು ನೀರು ಕುಡಿಯಲೇಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ
ಸದನಕ್ಕೆ ಘನತೆ ಇದೆಯೇ
ಈ ವೇಳೆ ಮತ್ತೆ ಗದ್ದಲ ಆರಂಭವಾಯಿತು. ಆಗ ರಮೇಶ್ ಕುಮಾರ್, ಎಲ್ಲರಿಗೂ ಮಾತನಾಡಲು ಅವಕಾಶ ನೀಡುತ್ತೇನೆ. ನನಗೆ ಆತುರವಿಲ್ಲ. ಅಪರೂಪಕ್ಕೆ ಗಂಭೀರ ಚರ್ಚೆ ಆಗುತ್ತಿದೆ. ಯಾವಾಗಲೂ ಗದ್ದಲ ನಡೆಯುವ ಸದನಕ್ಕೆ ಈ ಘನತೆಯೂ ಇದೆಯೇ ಎಂದು ಮಾಧ್ಯಮದವರೂ ಅಚ್ಚರಿಪಡುತ್ತಿದ್ದಾರೆ. ಎಲ್ಲರೂ ಮಾತನಾಡಲಿ ಎಂದರು.
ನಿಮ್ಮ ಮೇಲೆ ಆರೋಪದ ಮೇಲಿನ ತನಿಖೆ, ಚರ್ಚೆ ನಡೆಯುವುದು ಮೊದಲು ಆಗಲಿ. ಉಳಿದ ಆರೋಪಗಳ ಬಗ್ಗೆ ಬೇರೆ ಚರ್ಚೆ ಮಾಡೋಣ. ಅದರ ತನಿಖೆ ಏನು ಮಾಡುತ್ತೀರೋ ಆಮೇಲೆ ತೀರ್ಮಾನ ಆಗಲಿ. ಬೇರೆ ವಿಚಾರಗಳಲ್ಲಿ ಸಹಮತವಿಲ್ಲ. ನೋಟಿಸ್ ಕೊಟ್ಟು ಚರ್ಚೆಗೆ ತರಲಿ. ಶ್ರೀನಿವಾಸಗೌಡ ಅವರದ್ದೂ ಚರ್ಚೆ ಆಗಲಿ. ನಮ್ಮ ಹತ್ತಿರ ಯಾರು ಬಂದಿದ್ದರು, ನಿಮ್ಮ ಬಳಿ ಯಾರು ಬಂದಿದ್ದರು ಎಂಬ ಬಗ್ಗೆ ಚರ್ಚಿಸಲಿ ಎಂದು ಮಾಧುಸ್ವಾಮಿ ಹೇಳಿದಾಗ, ಸದನದಲ್ಲಿ ಗದ್ದಲ ಜೋರಾಯಿತು.
ಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು
ಮಾಧುಸ್ವಾಮಿ-ಸಾ.ರಾ. ಮಹೇಶ್ ವಾಗ್ವಾದ
ಸಾ.ರಾ. ಮಹೇಶ್, ವೇದ ಸುಳ್ಳಾದರೂ ಗಾದೆ ಸುಳ್ಳಾಗೊಲ್ಲ, ನಾಯಿ ಬೊಗಳಿದರೆ ದೇವಲೋಕ ಹಾಳಾಗೊಲ್ಲ ಎಂಬ ಮಾತಿದೆ. ವಿರೋಧಪಕ್ಷದವರಿಗೂ ನೀವು ಕಳಂಕಿತರಲ್ಲ ಎಂಬುದಕ್ಕೆ ಸಹಮತವಿದೆ. ಅಧ್ಯಕ್ಷರ ವಿಚಾರ ಮಾತ್ರ ತನಿಖೆ ಆಗಬೇಕು ಎಂಬುದು ಸರಿಯಲ್ಲ. ಸ್ಪೀಕರ್ ವಿರುದ್ಧ ಮಾತನಾಡಿದವರು ಚುನಾವಣೆಗೆ ಮತ್ತೆ ಸ್ಪರ್ಧಿಸದಂತೆ ಮಾಡಬೇಕು ಎಂದು ಆಗ್ರಹಿಸಿದರು.
ಮಾಧುಸ್ವಾಮಿ ಮಾತನಾಡಿ, ಈ ಹಿಂದೆ ಬೋಪಯ್ಯ ಅವರ ಬಗ್ಗೆ ಮಾತನಾಡಿದವರನ್ನೂ ಕರೆಸಿ. ಅವರೂ ಸ್ಪೀಕರ್ ಆಗಿದ್ದರಲ್ಲವೇ. ಅವರ ಬಗ್ಗೆ ವಿಧಾನಸೌಧದ ಪಡಸಾಲೆಯಲ್ಲಿಯೇ ಏನೆಲ್ಲ ಮಾತನಾಡಿದ್ದಾರೆ ಅದನ್ನೂ ತಂದು ಅವರ ಮೇಲೆಯೂ ಕ್ರಮ ತೆಗೆದುಕೊಳ್ಳಿಎಂದು ಆಗ್ರಹಿಸಿದರು.
ನಾನು ತನಿಖೆಗೆ ಆದೇಶ ನೀಡಲು ಸಾಧ್ಯವಿಲ್ಲ
ಅದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ವಿರೋಧಪಕ್ಷದವರು ಕೂಡ ಆಕ್ಷೇಪ ಮಾಡಿಲ್ಲ. ಅಪರಾಧ ಪ್ರಕ್ರಿಯೆಗೆ ಚಾಲನೆ ನೀಡಿದಾಗ ಹಲವು ಹಂತಗಳಿರುತ್ತವೆ. ಎಫ್ಐಆರ್ ಆದ ಬಳಿಕ ದೋಷಾರೋಪ ನೀಡಲಾಗುತ್ತದೆ. ಮೆಟೀರಿಯಲ್ ಫ್ಯಾಕ್ಟ್ಸ್ಅನ್ನು ನಾನೇ ನೀಡಿದ್ದೇನೆ. ಮೆಟೀರಿಯಲ್ ಪರ್ಟಿಕ್ಯುಲರ್ಸ್ ನಮಗೆ ಬೇಕು. ನನ್ನ ಬಳಿ ಮೆಟೀರಿಯಲ್ ಪರ್ಟಿಕ್ಯುಲರ್ಸ್ ಇಲ್ಲ. ಅದನ್ನು ತನಿಖೆ ನಡೆಸುವವರು ಕಂಡುಕೊಳ್ಳಬೇಕು.
ಯಾರು ತನಿಖೆ ನಡೆಸಬೇಕು ಎಂದು ನಾನು ಆದೇಶ ಮಾಡಲು ಆಗುವುದಿಲ್ಲ. ಸಮಿತಿ ಒಳಗೆ ಮಾತ್ರ ತನಿಖೆ ನಡೆಸಬಹುದು. ಸರ್ಕಾರದ ಮೇಲೆ ನಂಬಿಕೆ ಇಲ್ಲ, ಎಸ್ಐಟಿಯ ತನಿಖೆ ಬೇಡ ಎಂದು ಹೇಳುತ್ತೀರಿ. ಸತ್ಯ ಸ್ಥಾಪನೆ ಮಾಡುವ ವಿಚಾರ ಇರಬೇಕು. ತನಿಖೆ ನಡೆಸುವ ಅಧಿಕಾರಿಗಳು ನಿಮ್ಮ ಸೇವಕರಲ್ಲ. ಅವರು ಸಾರ್ವಜನಿಕರ ಸೇವಕರು ಎಂದು ಬಿಜೆಪಿಯವರಿಗೆ ಹೇಳಿದರು.
ಆಡಿಯೋದಲ್ಲಿರುವ ಧ್ವನಿ ನನ್ನದೇ : ಯಡಿಯೂರಪ್ಪ
ಭಯವೇಕೆ? ಗುಂಡೂರಾವ್ ಪ್ರಶ್ನೆ
ದಿನೇಶ ಗುಂಡೂರಾವ್, ಬಿಜೆಪಿಯವರಿಗೆ ಭಯ ಏಕೆ. ಎಲ್ಲ ಆರೋಪಗಳ ತನಿಖೆಯೂ ಆಗಲಿ ಎಂದರು. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಮೇಲೆ ಅನುಮಾನ ಇದೆ. ಅವರೇ ಇನ್ವಾಲ್ವ್ ಆಗಿದ್ದಾರೆ. ಈಗ ಅವರೇ ತನಿಖೆ ನಡೆಸುವುದು ಹೇಗೆ ಸರಿ ಎಂದು ಬಿಜೆಪಿಯ ಗೋವಿಂದ ಕಾರಜೋಳ ಹೇಳಿದರು.
ಎಲ್ಲ ಸರ್ಕಾರಗಳೂ ಸಂವಿಧಾನಬದ್ಧವಾಗಿ ಸ್ಥಾಪಿತವಾಗಿರಬೇಕು. ಸಂವಿಧಾನಬದ್ಧವಾಗಿ ಸ್ಥಾಪಿತವಾಗದ ಸರ್ಕಾರವನ್ನು ಪಾಲಿಸಬಾರದು. ಸರ್ಕಾರದ ಎಲ್ಲ ಅಧಿಕಾರಿಗಳೂ ಹೇಳಿದಂತೆ ಕೇಳುವವರಾ? ನಾಳೆ ನೀವು ಅಧಿಕಾರಕ್ಕೆ ಬಂದಾಗ ನೀವು ಹೇಳಿದಂತೆ ಅವರು ಕೇಳುತ್ತಾರಾ? ನಾನು ರೂಲಿಂಗ್ ಮಾಡುತ್ತೇನೆ. ಎಸ್ಐಟಿ ತನಿಖೆ ನಡೆಯಲಿ ಎಂದು ರಮೇಶ್ ಕುಮಾರ್ ಹೇಳಿ, ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.