ವಿಧಾನಸಭೆ ಕಲಾಪ; 3 ವಿಧೇಯಕಗಳು ಅಂಗೀಕಾರ
ಬೆಂಗಳೂರು, ಸೆಪ್ಟೆಂಬರ್ 23 : ಕರ್ನಾಟಕದ ವಿಧಾನಸಭೆಯ ಮುಂಗಾರು ಅಧಿವೇಶನದ ಮೂರನೇ ದಿನ ಮೂರು ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಸಾಂಕ್ರಾಮಿಕ ರೋಗಗಳು ಯಾವುದು? ಎಂಬುದರ ಬಗ್ಗೆ ವಿವರವಾದ ಚರ್ಚೆಗಳು ನಡೆದವು.
ಬುಧವಾರದ ವಿಧಾನಸಭೆ ಕಲಾಪದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಆರೋಗ್ಯ ಚೇತರಿಕೆ ಕಾಣಲಿ. ಅವರು ದೀರ್ಘಾಯುಷ್ಯ ಆಗಲಿ ಎಂದು ಪ್ರಾರ್ಥನೆ ಮಾಡುವೆ ಎಂದರು.
ಬಿ. ನಾರಾಯಣರಾವ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೋವಿಡ್ ಸೋಂಕು ತಗುಲಿದ ಬಳಿಕ ಶಾಸಕರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಸಕರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಇಂದಿನ ಕಲಾಪದಲ್ಲಿ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ 2020, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ತಿದ್ದುಪಡಿ ವಿಧೇಯಕ, ಸಾಂಕ್ರಾಮಿಕ ರೋಗಗಳ ಕಾಯಿದೆ ತಿದ್ದುಪಡಿ ವಿಧೇಯಕ 2020ಕ್ಕೆ ಅಂಗೀಕಾರ ಪಡೆಯಲಾಗಿದೆ.

ವಿಧೇಯಕಗಳ ಅಂಗೀಕಾರ
ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ 2020, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ತಿದ್ದುಪಡಿ ವಿಧೇಯಕಗಳು ಯಾವುದೇ ಚರ್ಚೆ ಇಲ್ಲದೇ ಅನುಮೋದನೆ ಗೊಂಡವು. ವಿಧೇಯಕ ಮಂಡನೆ ಮಾಡಿದಾಗ ಯಾವುದೇ ವಿರೋಧ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹಲ್ಲೆ ಮಾಡಿದವರಿಗೆ ಶಿಕ್ಷೆ
ಸಾಂಕ್ರಾಮಿಕ ರೋಗಗಳ ಕಾಯಿದೆ ತಿದ್ದುಪಡಿ ವಿಧೇಯಕ 2020 ಮಂಡನೆ ಮಾಡಿದಾಗ ಸದನದಲ್ಲಿ ಚರ್ಚೆ ನಡೆಯಿತು.
ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯೆ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಲಿದೆ.
ಕಾಂಗ್ರೆಸ್ ಸದಸ್ಯ ಎಚ್. ಕೆ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. "ಕಾಯ್ದೆಯಡಿಯಲ್ಲಿ ಕೆಲವೊಂದು ತಿದ್ದುಪಡಿ ಮಾಡುವ ಅಗತ್ಯ ಇದೆ. ಜಂಟಿ ಪರಿಶೀಲನಾ ಸಮಿತಿಗೆ ವಹಿಸುವಂತೆ ಸೂಚಿಸಿ. ಆನಂತರ ಬೇಕಾದರೆ ಸುಗ್ರೀವಾಜ್ಞೆ ತನ್ನಿ" ಎಂದು ಸರ್ಕಾರವನ್ನು ಆಗ್ರಹಿಸಿದರು.

ಈಗ ತಿದ್ದುಪಡಿ ಮಾಡೋದು ಕಷ್ಟ
ಕಾನೂನು ಸಚಿವ ಮಾಧುಸ್ವಾಮಿ ಅವರು ಮಾತನಾಡಿ, "ಈಗ ತಿದ್ದುಪಡಿ ಮಾಡುವುದು ಕಷ್ಟ. ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿದೆ. ಕೆಲವು ಕಡೆ ಕೂಡಿ ಹಾಕಿದ್ದಾರೆ. ಈಗಾಗಲೇ ಸುಗ್ರೀವಾಜ್ಞೆ ತರಲಾಗಿದೆ,ಹೀಗಾಗಿ ಈ ಬಿಲ್ ಪಾಸ್ ಮಾಡಿಕೊಡಿ" ಎಂದು ಮನವಿ ಮಾಡಿದರು.
Recommended Video

ಸಾಂಕ್ರಾಮಿಕ ರೋಗಗಳು?
ಸಾಂಕ್ರಾಮಿಕ ರೋಗಗಳ ಕಾಯಿದೆ ತಿದ್ದುಪಡಿ ವಿಧೇಯಕ 2020 ಮಂಡನೆ ಮಾಡಿದಾಗ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು, "ಸಾಂಕ್ರಾಮಿಕ ರೋಗಗಳಿಗೆ ವಾಂತಿ, ಭೇದಿ ಎಲ್ಲವೂ ಸೇರುತ್ತೆ. ಮೊದಲು ಸಾಂಕ್ರಾಮಿಕ ರೋಗಗಳು ಯಾವುದು ಎಂದು ಪಟ್ಟಿ ಮಾಡಿ, ಆಮೇಲೆ ಬಿಲ್ ತನ್ನಿ" ಎಂದರು.
"ಸಾಂಕ್ರಾಮಿಕ ರೋಗಗಳು ಯಾವುದು ಅಂತಾ ಹೇಳೋಕೆ ಆಗಲ್ಲ. ನಾಳೆ ಹೊಸ ರೋಗ ಬರಬಹುದು" ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
"ಸರ್ಕಾರದಿಂದ ನೋಟಿ ಫೈ ಆಗುವ ಸಾಂಕ್ರಾಮಿಕ ರೋಗಗಳಿಗೆ ಈ ಕಾಯ್ದೆ ಜಾರಿಯಾಗಲಿದೆ" ಎಂದು ಹೇಳಿದ ಸಚಿವ ಮಾಧುಸ್ವಾಮಿ ಸಾಂಕ್ರಾಮಿಕ ರೋಗಗಳ ಪಟ್ಟಿ ಹೇಳಿದರು.












Click it and Unblock the Notifications