ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?
Recommended Video

ಬೆಂಗಳೂರು, ಮೇ 18: ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳುವಂತೆ ಮಾಡುವಲ್ಲಿ ಯಶಸ್ವಿಯಾದ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಈಗ ಅಗ್ನಿಪರೀಕ್ಷೆ ಎದುರಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಜ್ಜಾಗುತ್ತಿದ್ದಾರೆ.
ನಾಳೆ(ಮೇ 19) ಸಂಜೆ 4 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ, ನಾಳೆ ದಿನ ವಿಧಾನಸಭೆಯಲ್ಲಿ ಏನೆಲ್ಲ ಘಟನಾವಳಿಗಳು ನಡೆಯಲಿವೆ. ವಿಶ್ವಾಸಯತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಲಿದೆ? ಅಗ್ನಿಪರೀಕ್ಷೆ ಗೆಲ್ಲಲು ಬಿಜೆಪಿ ಏನು ಮಾಡಬೇಕು? ಸದ್ಯ ಪಕ್ಷಗಳ ಬಲಾಬಲ ಏನಿದೆ? ವಿವರ ಇಲ್ಲಿದೆ...
ಪಕ್ಷಗಳ ಬಲಾಬಲ :
ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲ 221*/224
ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 111.
ಬಿಜೆಪಿಯ ಬಳಿ ಇರುವ ಶಾಸಕರು: 104
ಕಾಂಗ್ರೆಸ್ 78
ಜೆಡಿಎಸ್ ಪ್ಲಸ್:37*
ಇತರೆ: 2
ಪ್ರತಿಪಕ್ಷದ ಸಂಖ್ಯಾಬಲ 117.
ಗಮನಿಸಿ: ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದು, ಒಂದು ಕ್ಷೇತ್ರವನ್ನು ಪರಿಗಣಿಸಲಾಗುತ್ತದೆ. ಹೀಗಾಗಿ
* ಜಯನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಚುನಾವಣೆ ನಡೆದಿಲ್ಲ.

ಬಿಜೆಪಿ ಗೆಲ್ಲಲು ಏನು ಮಾಡಬೇಕು?
* ಬಿಜೆಪಿ ತನ್ನ ಬಳಿ ಇರುವ ಎಲ್ಲಾ ಶಾಸಕರು ನಾಳೆ ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು.
* ಬೆಳಗ್ಗೆ ಚುನಾಯಿತ ಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಬೇಕು.
* ನಂತರ ಮುಖ್ಯ ಸಚೇತಕ ಅವರು ಬಿಜೆಪಿ ಶಾಸಕರಿಗೆ ವಿಪ್ ಜಾರಿಗೊಳಿಸಿ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ಅಧಿವೇಶನಕ್ಕೆ ಹಾಜರಾಗುವಂತೆ ಸೂಚಿಸಲಿದ್ದಾರೆ.
* 111 ಮ್ಯಾಜಿಕ್ ನಂಬರ್ ದಾಟಲು ಬಿಜೆಪಿಗೆ ಇರುವ ಏಕೈಕ ಮಾರ್ಗವೆಂದರೆ ಕೆಲ ಕಾಂಗ್ರೆಸ್ ಶಾಸಕರನ್ನು ನಾಳೆ ಮತದಾನ ಮಾಡದಂತೆ ತಡೆಯುವುದು ಅಥವಾ ನಾಳೆ ಆ ಶಾಸಕರು ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳುವುದು. ಅಂದರೆ ಸದನದಲ್ಲಿ ಪ್ರತಿಪಕ್ಷ ಸದಸ್ಯರ ಹಾಜರಾತಿ ಸಂಖ್ಯೆ ಇಳಿಮುಖ ಮಾಡುವುದು ಬಿಜೆಪಿಯ ಟಾರ್ಗೆಟ್.

ಅಡ್ಡ ಮತದಾನ ಮಾಡಲು ಸಿದ್ಧರಿಲ್ಲ
* ಒಮ್ಮೆ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೆ ಕಾಂಗ್ರೆಸ್/ಜೆಡಿಎಸ್ ಕೂಡಾ ವಿಪ್ ಜಾರಿಗೊಳಿಸಲಿದೆ.
* ವಿಪ್ ಉಲ್ಲಂಘಿಸಿ ಅಡ್ಡಿ ಮತದಾನ ಮಾಡಲು ಜೆಡಿಎಸ್ /ಕಾಂಗ್ರೆಸ್ ಶಾಸಕರು ಸಿದ್ಧರಾಗಿಲ್ಲ. ಅಡ್ಡ ಮತದಾನ ಮಾಡಿದರೆ ಅಂಥ ಶಾಸಕರು ಅನರ್ಹಗೊಳ್ಳಲಿದ್ದು, 6 ವರ್ಷ ಯಾವುದೇ ಚುನಾವಣೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
* ಜೆಡಿಎಸ್ ಶಾಸಕರು ಯಾವುದೇ ಕಾರಣಕ್ಕೂ ಅಡ್ಡ ಮತದಾನ, ಮತದಾನಕ್ಕೆ ಗೈರು ಅಥವಾ ರಾಜೀನಾಮೆ ನೀಡಲು ಸಿದ್ಧರಿಲ್ಲ ಎಂದು ತಿಳಿದು ಬಂದಿದೆ.

ಕೈ ಶಾಸಕರು ಗೈರು ಹಾಜಾರಾಗಬೇಕು
* ನಾಳೆ ಕಾಂಗ್ರೆಸ್ ಶಾಸಕರನ್ನು ಗೈರು ಹಾಜಾರಾಗುವಂತೆ ಮಾಡಲು ವೀರಶೈವ ಮಠ ಮಾನ್ಯಗಳ ಸಹಾಯವನ್ನು ಬಿಜೆಪಿ ಪಡೆದುಕೊಂಡಿದೆ.
* ಆದರೆ, ಸರ್ಕಾರ ರಚನೆ ಮಾಡುವ ಪಕ್ಷಕ್ಕೆ ಶಾಸಕರು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬುದು ನಿರೀಕ್ಷಿತ.
* ಇದೆಲ್ಲದರ ಜತೆಗೆ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದಿಂದ ಮೂರನೇ ಎರಡರಷ್ಟು ಮಂದಿಯನ್ನು ತಮ್ಮತ್ತ ಸೆಳೆದುಕೊಳ್ಳಬೇಕು. ಅಂದರೆ ಜೆಡಿಎಸ್ ನ 26 (37) ಅಥವಾ ಕಾಂಗ್ರೆಸ್ಸಿನ 52(78) ಮಂದಿ ಬಿಜೆಪಿಗೆ ಬೆಂಬಲಿಸಬೇಕು.

ವಿಶ್ವಾಸಮತ ಯಾಚನೆ ಯಾವ ರೀತಿ ನಡೆಯಬೇಕು
* ಬಿಜೆಪಿ ಕಡೆಯಿಂದ ಜೇಷ್ಠತೆಯ ಆಧಾರದ ಮೇಲೆ ನೇಮಕವಾಗಿರುವ ಸ್ಪೀಕರ್ (ಕೆ.ಜಿ ಬೋಪಯ್ಯ) ಅವರು ನಾಳೆ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಸಂಜೆ ವಿಶ್ವಾಸಮತ ಯಾಚನೆ ಯಾವ ರೀತಿ ನಡೆಯಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
* ಸದನದ ವಿಧಿ ವಿಧಾನ, ಪ್ರಕ್ರಿಯೆ ಬಗ್ಗೆ ಸೂಚನೆ ನೀಡಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನದಂತೆ ಗುಪ್ತ ಮತದಾನ ಆಯ್ಕೆ ಮಾಡುವಂತಿಲ್ಲ. ಹೀಗಾಗಿ, ನಾಳೆ ಸದನಕ್ಕೆ ಹಾಜರಾಗುವ ಎಲ್ಲಾ ಶಾಸಕರ ತಲೆಗಳನ್ನು ಎಣಿಕೆ ಮಾಡಿ, ಹಾಜರಾತಿ ಸಂಖ್ಯೆ ಘೋಷಿಸಲಾಗುತ್ತದೆ.
* ಧ್ವನಿ ಮತದಾನಕ್ಕೆ ಕರೆ ನೀಡಲಿದ್ದಾರೆ. ಮತ ಹಾಕುವ ಆಯ್ಕೆಯನ್ನು ಸೂಚಿಸುವುದಿಲ್ಲ ಎನ್ನಲಾಗಿದೆ.












Click it and Unblock the Notifications