ಕರ್ನಾಟಕ ಚುನಾವಣೆ; 3130 ನಾಮಪತ್ರಗಳು ಕ್ರಮಬದ್ಧ
ಬೆಂಗಳೂರು, ಏಪ್ರಿಲ್ 23; ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿದೆ. ಮೇ 10ರಂದು ನಡೆಯುವ ಚುನಾವಣೆಗೆ 3130 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಆಯೋಗ ಹೇಳಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 24 ಸೋಮವಾರ ಕೊನೆಯ ದಿನವಾಗಿದೆ.
ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿತ್ತು. ಏಪ್ರಿಲ್ 21ರಂದು ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನೆ ಕಾರ್ಯ ಕೈಗೊಂಡರು. ತಡರಾತ್ರಿ ತನಕ ಪರಿಶೀಲನೆ ನಡೆದಿದ್ದು, ಶನಿವಾರ ಅಂತಿಮ ಮಾಹಿತಿಯನ್ನು ಆಯೋಗ ನೀಡಿದೆ. ಒಟ್ಟು 502 ಅಭ್ಯರ್ಥಿಗಳ ಉಮೇದುವಾರಿಕೆ ತಿರಸ್ಕಾರ ಮಾಡಲಾಗಿದೆ.

ನಾಮಪತ್ರಗಳ ಪರಿಶೀಲನೆ ವೇಳೆ ಸವದತ್ತಿ-ಯಲ್ಲಮ್ಮ, ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರಗಳ ನಾಮಪತ್ರಗಳ ಬಗ್ಗೆ ವಿವಿಧ ದೂರು ಸಲ್ಲಿಕೆಯಾಗಿದ್ದವು. ಆದ್ದರಿಂದ ಪರಿಶೀಲನೆ ಕಾರ್ಯವು ತಡರಾತ್ರಿಯವರೆಗೆ ನಡೆಯಿತು. ಅಂತಿಮವಾಗಿ 3130 ನಾಮಪತ್ರಗಳು ಕ್ರಮಬದ್ಧವಾಗಿದೆ.
ಎಷ್ಟು ನಾಮಪತ್ರ ಸಲ್ಲಿಕೆ; ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಾಗ 3632 ಅಭ್ಯರ್ಥಿಗಳಿಂದ ಒಟ್ಟು 5102 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಅಂತಿಮ ಪರಿಶೀಲನೆ ವೇಳೆ 3130 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 502 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕಾರಗೊಂಡಿವೆ.

3130 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ 2890 ಪುರುಷ ಅಭ್ಯರ್ಥಿಗಳು, 239 ಮಹಿಳಾ ಅಭ್ಯರ್ಥಿಗಳು ಮತ್ತು ಒಂದು ಇತರೆ ಅಭ್ಯರ್ಥಿಯ ನಾಮಪತ್ರವಾಗಿದೆ. ಪಕ್ಷದವಾರು ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211, ಎಎಪಿ 212, ಬಿಎಸ್ಪಿ 137, ಸಿಪಿಐಎಂ 4, ಎನ್ಪಿಪಿಯ 4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ನೋಂದಣಿಯಾಗಿರುವ ಮಾನ್ಯತೆ ಪಡೆಯದ ಪಕ್ಷಗಳ 736 ಅಭ್ಯರ್ಥಿಗಳು ಮತ್ತು 1379 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಏಪ್ರಿಲ್ 24ರ ಸೋಮವಾರ ಮಧ್ಯಾಹ್ನ 3 ಗಂಟೆಯ ತನಕ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದೆ. ಅವಧಿಯು ಮುಕ್ತಾಯಗೊಂಡ ಬಳಿಕ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದ ಬಳಿಕ ಚುನಾವಣಾ ಆಯೋಗ ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಿದೆ. ಮಾನ್ಯತೆ ಪಡೆಯದ ರಾಜಕೀಯ ಪಕ್ಷ, ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವನಾ ಚಿನ್ಹೆಯನ್ನು ಹಂಚಿಕೆ ಮಾಡಲಿದೆ. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಕಣದಲ್ಲಿರುವ ಅಭ್ಯರ್ಥಿ ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಬಹುದಾಗಿದೆ.
ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಪ್ರಚಾರದತ್ತ ಗಮನಹರಿಸಿದ್ದಾರೆ. ರೋಡ್ ಶೋ, ಸಮಾವೇಶ, ಮನೆ-ಮನೆ ಪ್ರಚಾರದ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದದಲ್ಲಿ ಮತದಾನ ನಡೆಯಲಿದೆ, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ ಅಭ್ಯರ್ಥಿಗೆ ರಿಲೀಫ್; ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಿ. ಕೆ. ಶಿವಕುಮಾರ್, ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ನ ಜಮೀರ್ ಅಹಮದ್ ಖಾನ್ ನಾಮಪತ್ರಗಳ ಕುರಿತು ಭಾರೀ ಚರ್ಚೆ ಆಗಿತ್ತು. ಆದರೆ ಇಬ್ಬರ ನಾಮಪತ್ರಗಳು ಕ್ರಮಬದ್ದವಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ನಾಮಪತ್ರ ತಿರಸ್ಕಾರವಾಗುವ ಆತಂಕದಲ್ಲಿ ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಬಳಿ ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಹಾಕಿಸಿದ್ದರು.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾ ಆನಂದ ಮಾಮನಿ ನಾಮಪತರ ತಿರಸ್ಕಾರ ಆಗುವ ಭೀತಿ ಎದುರಾಗಿತ್ತು. 2018ರ ಮಾದರಿಯಲ್ಲಿಯೇ ಸಲ್ಲಿಕೆ ಮಾಡಿದ್ದಾರೆ. 2019ರಲ್ಲಿ ಫಾರ್ಮ್ ಸಂಖ್ಯೆ 26 ಪರಿಷ್ಕರಣೆ ಮಾಡಿದ್ದು, ಇದರ ಅಡಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಎಎಪಿಯ ಬಾಪುಗೌಡ ಪಾಟೀಲ ಚುನಾವಣಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ಶನಿವಾರ ಆಕ್ಷೇಪಣೆ ಬಗ್ಗೆ ವಿಚಾರಣೆ ನಡೆಸಿದ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕಾರವಾಗಿದೆ ಎಂದು ಘೋಷಣೆ ಮಾಡಿದರು. ಈ ಮೂಲಕ ಬಿಜೆಪಿ ನಿಟ್ಟಿಸಿರು ಬಿಟ್ಟಿದೆ. ಕಾಂಗ್ರೆಸ್ 224 ಕ್ಷೇತ್ರಗಳ ಪೈಕಿ ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡಿರುವುದರಿಂದ, 223 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.












Click it and Unblock the Notifications