Karnataka Elections 2023: ರಾಜ್ಯದಲ್ಲಿ ಪ್ರಧಾನಿ ಮೋದಿ ದಾಖಲೆಯ 21 ರ್ಯಾಲಿ
ಬೆಂಗಳೂರು ಏಪ್ರಿಲ್ 1: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳ ಮತಬೇಟೆ ಜೋರಾಗಿದೆ. ಇದರ ಬೆನ್ನಲ್ಲೇ ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ 21 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೇ 6 ರಿಂದ 8 ರವರೆಗೆ ಅವರು ಮೈಸೂರಿನಲ್ಲಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಮೋದಿ ಅವರು ಭೇಟಿ ನೀಡಿದ ಸ್ಥಳಗಳಲೆಲ್ಲಾ ಅದ್ಧೂರಿ ಸ್ವಾಗತ ಅವರಿಗೆ ಸಿಕ್ಕಿದೆ. ಇದರಿಂದ ಬಿಜೆಪಿ ರಾಜ್ಯದಲ್ಲಿ ಗೆಲುವಿನ ಭರವಸೆ ಹೆಚ್ಚಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ರಾಜ್ಯ ಬಿಜೆಪಿ ನಾಯಕರು ಮೋದಿ ರಾಜ್ಯ ಭೇಟಿಯನ್ನು ಹೆಚ್ಚಿಸುತ್ತಲೇ ಇದ್ದಾರೆ.

ಮಂಡ್ಯದಲ್ಲಿ ಮೋದಿ
ಕಳೆದ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ ಮೋದಿ ಹವಾ ಸೃಷ್ಟಿ ಮಾಡಿದ್ದರು. ಕಳೆದ ತಿಂಗಳು ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಪ್ರಧಾನಿ ಮೋದಿಗೆ ಮಂಡ್ಯ ಜನತೆ ಅದ್ದೂರಿಯಾಗಿ ಸ್ವಾಗತ ಕೋರಿದ್ದರು. ಮೋದಿ ನೋಡಲು ಜನಸಾಗರವೇ ಹರಿದು ಬಂದಿತ್ತು. ಮೋದಿಯನ್ನು 50ಕ್ಕೂ ಹೆಚ್ಚು ಕಲಾತಂಡಗಳು ನೃತ್ಯದ ಮೂಲಕ ಬರಮಾಡಿಕೊಂಡಿದ್ದವು. ಕುಂಭ ಹೊತ್ತು ಮಹಿಳೆಯರ ಕೋಲಾಟ, ಡೊಳ್ಳು, ಕಂಸಾಳೆ ಕುಣಿತಕ್ಕೆ ಪ್ರಧಾನಿ ಮೋದಿಯವರು ಫುಲ್ ಖುಷ್ ಆಗಿದ್ದರು.
ಮೈಸೂರಿನಲ್ಲೂ ಮೋದಿಗೆ ಹೂವಿನ ಸುರಿ ಮಳೆಗೈದು ಸ್ವಾಗತಿಸಲಾಗಿತ್ತು. ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಮೋದಿಯವರ ಕಾರಿನತ್ತ ಹೂವಿನ ಮಳೆಯನ್ನೇ ಹರಿಸಿದ್ದರು. ಖುಷಿಯಿಂದ ಮೋದಿಯವರು ಕೈಬೀಸುತ್ತಾ ತಮ್ಮ ಕಾರಿನ ಮೇಲೆ ಬಿದ್ದ ಹಳದಿ ಹೂವಿನ ದಳಗಳನ್ನು ಜನರತ್ತ ಎಸೆಯುವುದು ಜನರ ಸಂತಸವನ್ನು ಇಮ್ಮಡಿಗೊಳಿಸಿತ್ತು.
Modi show in sugar bowl: BJP workers cheer up with slogans after @narendramodi ahead of the roadshow on BM road in Mandya @BJP4India @BJPLive @INCKarnataka @hd_kumaraswamy pic.twitter.com/0n1UtEU1E9
— K Shiva Kumar (@ShivascribeTNIE) March 12, 2023
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಪ್ರಧಾನಿ
ಇನ್ನೂ ಕಳೆದ ವಾರ ಬೆಣ್ಣೆ ನಗರಿ ದಾವಣಗೆರೆಗೆ ಆಗಮಿಸಿದ್ದ ಮೋದಿಗೆ ಅಪಾರ ಜನಸ್ತೋಮ ಸ್ವಾಗತಿಸಿತ್ತು. ದಾವಣಗೆರೆಯ ಬಿಡೆಪಿ ವಿಜಯ ಸಂಕಲ್ಪ ಸಮಾರಂಭದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಜನರ ಮಧ್ಯದಿಂದಲೇ ರೋಡ್ ಶೋ ಮೂಲಕ ಆಗಮಿಸಿದ್ದರು. ತೆರೆದ ವಾಹನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸುತ್ತಾ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಜನರು ಹೂವಿನ ಸುರಿಮಳೆಗೈದಿದಿದ್ದಾರೆ. ಅದ್ಧೂರಿ ರೋಡ್ ಶೋ ಮೂಲಕ ಪ್ರಧಾನಿ ಮೋದಿ ವೇದಿಕೆಗೆ ಎಂಟ್ರಿಕೊಟ್ಟಿದ್ದರು. ಕರ್ನಾಟಕದಲ್ಲಿ ಈ ರೀತಿ ಮೋದಿ ಸಮಾವೇಶ ಆಯೋಜಿಸಿದ ಸ್ಥಳದಲ್ಲಿ ಜನರ ನಡುವಿನಿಂದ ರೋಡ್ ಶೋ ಮೂಲಕ ಆಗಮಿಸಿರುವುದು ಇದೇ ಮೊದಲು.

ಶಿವಮೊಗ್ಗದಲ್ಲಿ ನಮೋ
ಶಿವಮೊಗ್ಗದಲ್ಲೂ ಬಿಜೆಪಿ ಕಳೆದ ಫೆಬ್ರವರಿಯಲ್ಲಿ ಕೇಸರಿ ಕಳೆಯನ್ನು ಸೃಷ್ಟಿಸಿತ್ತು. 449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಉದ್ಘಾಟನೆ ಮಾಡಿದರು. ಶಿವಮೊಗ್ಗಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಭವ್ಯ ಸ್ವಾಗತ ಕೋರಲಾಯಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹಸಿರು ಶಾಲು ತೊಡಿಸಿ ಶಾಲು ಹೊದ್ದು, ಪೇಟ ತೊಡಿಸಿ ಪ್ರದಾನಿ ಮೋದಿ ಸನ್ಮಾನ ಮಾಡಿದರು ಹಾಗೂ ಸಾಂಕೇತಿಕವಾಗಿ ನೇಗಿಲನ್ನು ಕೊಟ್ಟು ಸನ್ಮಾನಿಸಿದ್ದರು.
ವಿದ್ಯಾಕಾಶಿ ಧಾರವಾಡದಲ್ಲಿ ಮೋದಿ
ಇದೇ ಮಾರ್ಚ್ ನಲ್ಲಿ ಧಾರವಾಡದಲ್ಲೂ ಮೋದಿ ಕಮಾಲ್ ಮಾಡಿದ್ದರು. ಬರೋಬ್ಬರಿ ಮೂರು ದಶಕಗಳ ಬಳಿಕ ವಿದ್ಯಾಕಾಶಿ ಧಾರವಾಡಕ್ಕೆ ಪ್ರಧಾನಿಯೊಬ್ಬರು ಆಗಮಿಸಿದ್ದರು. ಈ ಹಿನ್ನೆಲೆ ಧಾರವಾಡದಲ್ಲಿ ಸಂಭ್ರಮ ಮನೆ ಮಾಡಿತ್ತು. ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಧಾರವಾಡ ನಗರ ಬಿಜೆಪಿಯ ಬಾವುಟ, ಬ್ಯಾನರ್ಗಳಿಂದ ರಾರಾಜಿಸಿದವು. 1994ರಿಂದ ಅಂದಿನ ಪಿ.ವಿ ನರಸಿಂಹರಾವ್ ಅವರು ಧಾರವಾಡಕ್ಕೆ ಭೇಟಿ ನೀಡಿದ್ದರು. ಆ ನಂತರ ಪ್ರಧಾನಮಂತ್ರಿಗಳು ಧಾರವಾಡಕ್ಕೆ ಯಾರೂ ಬಂದಿರಲಿಲ್ಲ. ಹೀಗಾಗಿ ಸ್ಥಳೀಯ ಮುಖಂಡರು ಬ್ಯಾನರ್ಮೂಲಕ ಪ್ರಧಾನಿಯನ್ನು ಸ್ವಾಗತಿಸಿದ್ದರು.












Click it and Unblock the Notifications