ಗೋವಾದಲ್ಲಿ ಕನ್ನಡಿಗರ ಮನೆ ತೆರವು ಖಂಡಿಸಿ ಸಿದ್ದರಾಮಯ್ಯಗೆ ಪತ್ರ
ಕಾರವಾರ, ಸೆಪ್ಟೆಂಬರ್ 27: ಗೋವಾದ ಬೈನಾ ಕಡಲತೀರದಲ್ಲಿ ವಾಸವಿರುವ ಕನ್ನಡಿಗರ ಮನೆಗಳ ತೆರವು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಉತ್ತರಕನ್ನಡ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
'ಗೋವಾದಲ್ಲಿ ಸುಮಾರು ನಲವತ್ತು ವರ್ಷಗಳಿಂದ ಕನ್ನಡಿಗರು ವಾಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗೋವಾ ಸರ್ಕಾರ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಾ ಬಂದಿದೆ.

ಮಂಗಳವಾರ 55 ಮನೆಗಳನ್ನು ಹಾಗೂ ದೇವಾಲಯಗಳನ್ನು ಧ್ವಂಸ ಮಾಡಿರುವುದು ಖಂಡನಾರ್ಹ. ಇದುವರೆಗೆ ಸುಮಾರು 800 ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ತೆರವು ಮಾಡಿ ದಬ್ಬಾಳಿಕೆ ನಡೆಸಿದೆ' ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಬೇಕು ಎಂದು ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರ ಮೂಲಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
'ಉತ್ತರಕರ್ನಾಟಕ ಭಾಗದ ಹಾವೇರಿ,ಬಾಗಲಕೋಟೆ, ಬೆಳಗಾವಿ, ವಿಜಾಪುರದ ಸಾವಿರಾರು ಕನ್ನಡಿಗರು ಕೂಲಿ ಕೆಲಸಕ್ಕಾಗಿ ಅಲ್ಲಿ ತೆರಳಿ, ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು.
ಬಹುತೇಕರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ತಮ್ಮ ಕೆಲಸಗಳಿಗೆ ಗೋವಾದ ಜನತೆ ಇವರನ್ನು ಬಳಕೆ ಮಾಡಿಕೊಂಡಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೇ ತೆರವು ಕಾರ್ಯಾಚರಣೆ ಮಾಡುವುದು ಸಮಂಜಸವಲ್ಲ. ಗೋವಾ ಸರ್ಕಾರ ಪ್ರತಿಯೊಂದು ವಿಷಯದಲ್ಲಿ ಕನ್ನಡಿಗರಿಗೆ ಅನ್ಯಾಯೆಸಗುತ್ತಿದೆ'ಎಂದು ಆರೋಪಿಸಿದರು.
'ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ಖುದ್ದು ಮಾತುಕತೆ ನಡೆಸಬೇಕು. ನಿರಾಶ್ರಿತ ಕನ್ನಡಿಗರಿಗೆ ಸೂರು ಕಲ್ಪಿಸಲು ಕ್ರಮಕೈಗೊಳ್ಳಬೇಕು' ಒತ್ತಾಯಿಸಿದರು.












Click it and Unblock the Notifications