ಓಟ ನಿಲ್ಲಿಸಿದ ಚುಕ್ಕುಬುಕ್ಕು ಓದಿನ ಬಂಡಿ
ಬೆಂಗಳೂರು, ಜುಲೈ 10: ಕನ್ನಡದ ಪುಸ್ತಕಪ್ರೇಮಿಗಳನ್ನೆಲ್ಲ ಒಂದೆಡೆ ಸೇರಿಸುವ ಚಂದದ ವೇದಿಕೆ ಕಟ್ಟಿದ್ದ ರಘು ಅಪಾರ ಹಾಗೂ ಅವರ ತಂಡ ಇಂದು ತಮ್ಮ ಸುಂದರ ಓದಿನ ಬಂಡಿಯನ್ನು ನಿಲ್ಲಿಸಿದ್ದಾರೆ. 'ಪಯಣ ಮುಗಿದಿದೆ; ದಾರಿ ಉಳಿದಿದೆ' ಎಂದು ವಿದಾಯದ ಲೇಖನ ಬರೆದಿದ್ದಾರೆ. ಕೆಂಡಸಂಪಿಗೆ ನಂತರ ಸಾಹಿತ್ಯ ಪ್ರೇಮಿಗಳ ನೆಚ್ಚಿನ ತಾಣವಾಗಿದ್ದ ಚುಕ್ಕುಬುಕ್ಕು.ಕಾಂ ಪಯಣ ಮುಗಿಸಿದೆ.
"ನಿಮಗೆಲ್ಲರಿಗೂ ನಿರಾಶೆ ಮಾಡಿದ್ದೇವೆ, ಕ್ಷಮಿಸಿ. ಎಷ್ಟು ಖುಷಿಗಳ ಹೊತ್ತು ತಂದರೂ ಇರದು ಒಂದೂ ಜ್ಞಾಪಕ. ರೈಲೆಂಬುದು ಎಂದಿದ್ದರೂ ವಿದಾಯದ ದು:ಖಕೆ ರೂಪಕ. ಸಾಧ್ಯವಾದರೆ ಮತ್ತೆ ಸಿಗೋಣ, ಮತ್ತೊಂದು ನಿಲ್ದಾಣದಲ್ಲಿ..."
-ಚುಕ್ಕುಬುಕ್ಕು ಟೀಮ್ (ಸೌಮ್ಯ, ಅಪಾರ, ಸಿದ್ಧಾರ್ಥ್)
ಹೀಗೆ ಚುಕ್ಕು ಬುಕ್ಕು ಟೀಂ ಸದಸ್ಯರು ತಮ್ಮ ಲೇಖನದ ಕೊನೆಯಲ್ಲಿ ಬರೆದುಕೊಂಡಿದ್ದಾರೆ. ಬುಕ್ಕು ಬುಕ್ಕು ಎಂಬ ಓದಿನ ಬಂಡಿ ನಿಲ್ಲಲು ಆರ್ಥಿಕ ಇಂಧನದ ಕೊರತೆಯೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಮಾನ ಮನಸ್ಕರನ್ನು ಒಟ್ಟುಗೂಡಿಸಿ, ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಸಂಪಾದಕರನ್ನಾಗಿಸಿ ಓದಿನ ಬಂಡಿಯನ್ನು ಓದುಗರ ಮನದ ನಿಲ್ದಾಣಗಳಿಗೆ ತಲುಪಿಸಿದ್ದು ಕಡಿಮೆ ಸಾಧನೆ ಏನಲ್ಲ.

ಕಿವಿ ಸಮಯ, ಆಸ್ಕ್ ಮಿ ವೈಎನ್ ಕೆ, ಕ್ಲಿಕ್ಕು ಬುಕ್ಕು, ನೆರೂಡನ ನೆನಪುಗಳು, ಆಸೀಮ ನಗರಿ ಸೇರಿದಂತೆ ಸರಿ ಸುಮಾರು 11 ಅಂಕಣಗಳು ಚುಕ್ಕುಬುಕ್ಕು ಓಟದ ವೇಗವನ್ನು ಹೆಚ್ಚಿಸುತ್ತಾ ಬಂದಿತ್ತು.
ಓದುಗರು, ಸಾಹಿತಿಗಳು ಹಾಗೂ ಪ್ರಕಾಶಕರ ನಡುವೆಯ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚುಕ್ಕುಬುಕ್ಕು ಓಟಕ್ಕೆ ಬೇಕಿದ್ದ ಆರ್ಥಿಕ ಇಂಧನ ಒದಗಿಸಲು ಯಾರೂ ಸಿದ್ಧರಿರಲಿಲ್ಲ. ಹೊಸ ಪುಸ್ತಕ, ಕಾದಂಬರಿ ಪ್ರಚಾರಕ್ಕೆ ಕನಿಷ್ಠ ಮೊತ್ತ ನೀಡಲು ಪ್ರಕಾಶಕರು ಸಿದ್ಧರಾಗದ ಕಾರಣ ಓಟ ನಿಲ್ಲಿಸುವುದು ಅನಿವಾರ್ಯವಾಗಿತ್ತು.
ನಿಮ್ಮ ಪುಸ್ತಕಕ್ಕೇ ಒಂದು ಚೆಂದದ ಕಿರುವೆಬ್ಸೈಟಿನ ಯೋಜನೆ, ಲೇಖಕ, ಪ್ರಕಾಶಕರ ಪರಿಚಯ, ಉಚಿತ ಪುಟ, ವಿಮರ್ಶೆಗಳು, ಅನಿಸಿಕೆಗಳು, ಚರ್ಚೆಗಳು ಹೀಗೆ ಸಾಹಿತ್ಯ ಚಟುವಟಿಕೆಯನ್ನು ನಿರಂತರವಾಗಿ ಹರಿದಾಡುವಂತೆ ಮಾಡಲು ಯತ್ನಿಸಲಾಗಿತ್ತು.
ಪುಸ್ತಕಗಳನ್ನು ಕೊಳ್ಳುವ ಮೊದಲು ಓದುಗನಿಗೆ ಅದರಲ್ಲೇನಿದೆ ಎಂದು ತಿಳಿಸುವುದು ಇದರ ಉದ್ದೇಶ. ಕೊಳ್ಳುವ ಉದ್ದೇಶವಿಲ್ಲದವರಿಗೂ ಪುಸ್ತಕದ ಉಚಿತ ಭಾಗ ಅಥವಾ ಮುನ್ನುಡಿಯ ಭಾಗದ ಓದು ಕುತೂಹಲ ಮೂಡಿಸಿ ಕೊಳ್ಳುವಂತಾಗಲಿ ಎಂದು ತಮ್ಮ ಆಶಯ ಪುಟದಲ್ಲಿ ಚುಕ್ಕುಬುಕ್ಕು ತಂಡ ಹೇಳಿಕೊಂಡಿತ್ತು. ಚುಕ್ಕುಬುಕ್ಕು ತಂಡದ ವಿದಾಯ ಪತ್ರ ಇಲ್ಲಿ ಓದಿ












Click it and Unblock the Notifications