2ನೇ ಎಫ್ಐಆರ್ ರದ್ದು ಕೋರಿ ಮತ್ತೆ ಕೋರ್ಟ್ಗೆ ನಟ ಉಪೇಂದ್ರ
ಬೆಂಗಳೂರು, ಆಗಸ್ಟ್ 17: ಫೇಸ್ಬುಕ್ ನೇರ ಸಂವಾದದಲ್ಲಿ ಪರಿಶಿಷ್ಟ ಜಾತಿಯ ಒಂದು ಪಂಗಡವನ್ನು ಕೆಟ್ಟವರು ಎಂಬುದಾಗಿ ಬಿಂಬಿಸುವ ರೀತಿಯಲ್ಲಿ ಗಾದೆಯೊಂದನ್ನು ಬಳಕೆ ಮಾಡಿದ್ದ ಆರೋಪದಲ್ಲಿ ದಾಖಲಾಗಿರುವ ಎರಡನೇ ಎಫ್ಐಆರ್ ರದ್ದು ಕೋರಿ ನಟ, ನಿರ್ದೇಶಕ ಉಪೇಂದ್ರ ಅಲಿಯಾಸ್ ಬಿ. ಎಂ. ಉಪೇಂದ್ರ ಕುಮಾರ್ ಮತ್ತೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾದ ನಂತರ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಹಾಗಾಗಿ ಮೊದಲನೇ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಎರಡನೇ ಪ್ರಕರಣದಲ್ಲೂ ನೀಡಬೇಕು ಎಂದು ನಟ ಉಪೇಂದ್ರ ಅರ್ಜಿಯಲ್ಲಿ ಕೋರಿದ್ದಾರೆ.

ಈ ಅರ್ಜಿಯು ಗುರುವಾರ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿರುವ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ. ಅರ್ಜಿದಾರರಾದ ನಟ ಉಪೇಂದ್ರ ಯಾವುದೇ ಸಮಾಜಕ್ಕೆ ನೋವುಂಟು ಮಾಡಬೇಕು ಎಂಬ ಕಾರಣದಿಂದ ಹೇಳಿಕೆ ನೀಡಿಲ್ಲ. ಆಕಸ್ಮಿಕವಾಗಿ ಗಾದೆ ಬಳಕೆ ಮಾಡಿದ್ದಾರೆ. ಅಲ್ಲದೆ, ಗಾದೆ ಬಳಕೆ ಮಾಡುವುದು ಪರಿಶಿಷ್ಟ ಜಾತಿ, ಪಂಗಡಗಳ ಕಾಯಿದೆಯಡಿ ಅಪರಾಧವಲ್ಲ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ನ್ಯಾಯಪೀಠಕ್ಕೆ ಕೋರಿದ್ದಾರೆ.
ಅರ್ಜಿಯ ವಿವರಗಳು; ಅರ್ಜಿದಾರರು ಹೆಸರಾಂತ ನಟರಾಗಿದ್ದು, ಸಮಾಜದ ಮೌಲ್ಯಗಳನ್ನು ಗೌರವಿಸುತ್ತಿದ್ದಾರೆ. ಸಮಾಜದಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ಫೇಸ್ಬುಕ್ ಪೇಜ್ ಮೂಲಕ ತಮ್ಮನ್ನು ಅನುಸರಿಸುವವರಿಗಾಗಿ ಲೈವ್ ಮಾಡಿದ್ದರು. ಈ ಸಂದರ್ಭದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಲಿದೆ ಎಂಬುದಾಗಿ ತಿಳಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ್ದ ಸಮುದಾಯವನ್ನು ನಿಂದಿಸಬಹುದಾದ ಗಾದೆಯೊಂದನ್ನು ಪ್ರಸ್ತಾಪಿಸಿದ್ದಾರೆ.
ಅಲ್ಲದೆ, ಜಾತಿ, ಧರ್ಮ, ಸಮುದಾಯಗಳ ಆಧಾರದಲ್ಲಿ ಎಂದಿಗೂ ತಾರತಮ್ಯದಿಂದ ನೋಡಿಲ್ಲ. ತಮ್ಮ ಸಾರ್ವಜನಿಕ ಜೀವನದಲ್ಲಿ ಎಂದಿಗೂ ದಲಿತರನ್ನು ಪರಿಶಿಷ್ಟರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ಅರ್ಜಿದಾರರು ಎಲ್ಲ ಸಮುದಾಯಗಳಲ್ಲಿಯೂ ಅಪಾರ ಸ್ನೇಹಿತರು, ಹಿತೈಶಿಗಳು ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ.
ಈ ಹೇಳಿಕೆಯಲ್ಲಿ ಯಾವುದೇ ಜಾತಿ, ಪಂಗಡಗಳನ್ನು ಅಮಾನಿಸುವ ಉದ್ದೇಶವನ್ನು ಅವರು ಹೊಂದಿರಲಿಲ್ಲ. ಸಾಮಾನ್ಯ ಪದವನ್ನಾಗಿ ಬಳಕೆ ಮಾಡಲಾಗಿದೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿ ಹೊಳಗೇರಿ ಎಂಬ ಸ್ಥಳವಿದೆ. ಹೊಲಗೇರಿ ಎಂಬ ರೀತಿಯಲ್ಲಿ ಉಪನಾಮ ಹೊಂದಿರುವವರು ಇದ್ದಾರೆ.
ಅಲ್ಲದೇ, ಈ ಗಾದೆಯನ್ನು ಬಳಕೆ ಮಾಡಿದ್ದರಿಂದ ಕೆಲವರಿಗೆ ನೋವಾಗಿದೆ ಎಂದು ಗೊತ್ತಾದ ತಕ್ಷಣ ವಿಡಿಯೋವನ್ನು ಡಿಲಿಟ್ ಮಾಡಲಾಗಿದೆ. ಜತೆಗೆ ತಕ್ಷಣ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಹಳೆಯ ಗಾದೆಯನ್ನು ಉಲ್ಲೇಖಿಸಿರುವ ಅಂಶ ಯಾವುದೇ ಜಾತಿಯನ್ನು ನಿಂದನೆ ಮಾಡಿದಂತೆ ಎಂಬ ಅರ್ಥವಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್ಸಿ, ಎಸ್ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಯಾವುದೇ ಅಪರಾಧವನ್ನು ಎಸಗಿಲ್ಲ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿನ ತಾರತಮ್ಯದ ವಿರುದ್ಧ ಅರ್ಜಿದಾರರು ಹೋರಾಡುತ್ತಿದ್ದಾರೆ. ಜಾತಿ, ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಪ್ರಚಾರ ಪಡೆಯಲೆಂದು ತಮ್ಮ ವಿರುದ್ಧ ದೂರು ಕೆಲವರು ದೂರು ದಾಖಲಿಸಿದ್ದಾರೆ. ವಾಟ್ಸ್ ಆಪ್ ಮೂಲಕ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಎಫ್ಐಆರ್ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಸಮತಾ ಸೈನಿಕ ದಳದ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ಈ ದೂರಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯಡಿ ದೂರು ಚನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಅಲ್ಲದೆ, ಒಳ್ಳೆಯದನ್ನು ಮಾಡುವ ಸಂದರ್ಭದಲ್ಲಿ ಟೀಕೆಗಳು ಬರುತ್ತವೆ ಎಂಬ ಅರ್ಥದಲ್ಲಿ ಮಾತನಾಡುವ ಸಂದರ್ಭದಲ್ಲಿ ಗಾದೆಯೊಂದನ್ನು ಬಳಕೆ ಮಾಡಲಾಗಿದೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯಿದೆ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ ಎಫ್ಐಆರ್ ಅನ್ನು ರದ್ದು ಮಾಡಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications